ಗೀತಾ ಜಿ ಹೆಗಡೆ ಕಲ್ಮನೆ
ಹರಿಯುವ ನದಿಯ ನೀರನ್ನು
ಸ್ಪರ್ಶಿಸಲು ಹೋದಾಗ
ಅದು ಬೆರಳಿಗೆ ತಾಗಿ
ಸಂದಿಯಿಂದ ಹರಿದು ಹೋಯಿತು.
ಎಲ್ಲಿಗೆ ಹೋಗುವುದೋ
ಎಂಬ ಕುತೂಹಲಕ್ಕೆ ಕಾಲುಗಳು
ದಂಡೆಯ ಗುಂಟ ನಡೆದಾಗ
ಬೆಕ್ಕು ಅಡ್ಡ ಬಂದಿದ್ದಕ್ಕೆ
ಅಪಶಕುನವಾಯಿತೆಂದು ಹಿಂತಿರುಗಿದೆ.
ನೋಡನೋಡುತ್ತಿದ್ದಂತೆ
ಕಟ್ಟಿದ ಸೇತುವೆ ನದಿಯ ಮಧ್ಯದಲ್ಲಿ
ಹರಿದು ಬಿದ್ದಾಗ ಅಯ್ಯೋ ಎಂಬ
ಆರ್ತನಾದ ಕಿವಿಗಪ್ಪಳಿಸಿ
ಬೆಕ್ಕಿನ ಶಕುನ ನಿಜವೆಂದು ನಂಬಿದೆ.
ಇನ್ನೇನು ನಾನೂ ಸೇತುವೆ ಏರುವವಳಿದ್ದೆ
ನದಿಯ ಹರಿವು ಕಾಣಲು
ಸದ್ಯ ತಪ್ಪಿತು!
ಇಲ್ಲಿ ಮಾಧ್ಯಮಗಳು ಹಳವಂಡಿ ಸ್ವರದಲ್ಲಿ
ಅವವತ್ತುಕೊಳ್ಳುತ್ತಿದ್ದವು ಕಾಲು ಬಾಲ ಕಟ್ಟಿ
ನೋಡುಗರ ಮನ ತಾಕುವಂತೆ.
ಹಾಗಂತೆ ಹೀಗಂತೆ
ಬಾಯಿಯಿಂದ ಬಾಯಿಗೆ ಹರಡಿದ ಸುದ್ದಿ
ದಿಕ್ ದಿಗಂತ ತಲುಪಲು
ರೀಪೇರಿ ಮಾಡಿದವ ಹೇಳಿದ್ದನಂತೆ ರೀ ಓಪನಿಂಗನಲ್ಲಿ
ಇನ್ನು ಹತ್ತು ವರ್ಷ ಎನೂ ತೊಂದರೆ ಇಲ್ಲ.
ಹೇಳಿದ ನಾಲ್ಕೇ ನಾಲ್ಕು ದಿನಗಳಲ್ಲಿ
ಸೇತುವೆ ಮಠಾಶ್
ಈಗ ಅಂಬೋಣ ಇದು ದೇವರ ಆಟವಂತೆ!
ಅಂದರೆ ದೇವರು ನನ್ನ ಬದುಕಿಸಲು
ಬೆಕ್ಕಿನ ರೂಪದಲ್ಲಿ ಬಂದಿದ್ದನಾ?
ಕೇಳೋಣವೆಂದರೆ ಬೆಕ್ಕೂ ಕೂಡಾ
ನಾಪತ್ತೆಯಾಗಿದೆ
ಮುಂದೇನು ಮಾಡುವುದು
ನೀವೇ ಹೇಳಿ.
ಚೆನ್ನಾಗಿದೆ ಗೀತಾ ಹೆಗಡೆ
ಪ್ರತಿಭಾ ನಂದಕುಮಾರ್ ರವರಿಗೆ ನಮಸ್ಕಾರ ತಮ್ಮಿಂದ ಬಂದ ಮೆಚ್ಚುಗೆ ನುಡಿ ಓದಿ ತುಂಬಾ ಸಂತೋಷವಾಯಿತು. ಅನಂತ ಧನ್ಯವಾದಗಳು ತಮಗೆ