ನಾಡಿನ ಹಿರಿಯ ಸಾಹಿತಿ ಡಾ. ಗಜಾನನ ಶರ್ಮರವರ ಜೀವಮಾನದ ಸಾಹಿತ್ಯ ಸಾಧನೆಯನ್ನು ಪರಿಗಣಿಸಿ ಮೂಡುಬಿದಿರೆಯ ವರ್ಧಮಾನ ಪ್ರಶಸ್ತಿ ಪೀಠವು ನೀಡುವ 2021ರ ಸಾಲಿನ ಪ್ರತಿಷ್ಠಿತ ವರ್ಧಮಾನ ಸಾಹಿತ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಡಾ.ಎಚ್. ಎಸ್. ಸತ್ಯನಾರಾಯಣರವರನ್ನು ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಶಸ್ತಿ ಪೀಠದ ಪ್ರಧಾನ ನಿರ್ದೇಶಕ ಡಾ.ನಾ. ಮೊಗಸಾಲೆ ಘೋಷಿಸಿದ್ದಾರೆ.
ಮೂಡುಬಿದಿರೆಯಲ್ಲಿ ಪ್ರಶಸ್ತಿ ಪೀಠದ ಅಧ್ಯಕ್ಷ ಎಸ್.ಡಿ.ಸಂಪತ್ ಸಾಮ್ರಾಜ್ಯ ಅಧ್ಯಕ್ಷ ತೆಯಲ್ಲಿ ನಡೆದ ಸಭೆಯಲ್ಲಿ ವಿಮರ್ಷಕ ಬಿ.ಜನಾರ್ದನ ಭಟ್ಟ, ಉಜಿರೆ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಪ್ರೊ.ಸಂಪತ್ ಕುಮಾರ್, ಬೆಳಗೋಡು ರಮೇಶ ಭಟ್ಟ ಅವರನ್ನೊಳಗೊಂಡ ಆಯ್ಕೆ ಸಮಿತಿ ನೀಡಿದ ಶಿಫಾರಸಿನ ಮೇರೆಗೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ವರ್ಧಮಾನ ಪ್ರಶಸ್ತಿಯು 25 ಸಾವಿರ ರೂಪಾಯಿ ಗೌರವ ನಗದು, ತಾಮ್ರಪತ್ರ ಸಮ್ಮಾನ, ಉದಯೋನ್ಮುಖ ಸಾಹಿತ್ಯ ಪ್ರಶಸ್ತಿಯು 15 ಸಾವಿರ ರೂಪಾಯಿ ಗೌರವ ನಗದು, ತಾಮ್ರ ಪತ್ರ ಸಮ್ಮಾನವನ್ನು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಮೂಡುಬಿದಿರೆಯಲ್ಲಿ ನಡೆಯುವ ದಸರಾ ಸಾಹಿತ್ಯ ಉತ್ಸವದ ಸಂದರ್ಭದಲ್ಲಿ ನಡೆಯಲಿದೆ.
ಹಿರಿಯ ಸಾಹಿತಿ ಡಾ.ಗಜಾನನ ಶರ್ಮರವರು ಕನ್ನಡ ಸಾಹಿತ್ಯದ ಹಲವಾರು ರಂಗಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ’ಪುನರ್ವಸು’ ಇವರ ಪ್ರಮುಖ ಕಾದಂಬರಿ. ‘ನಾಣಿ ಭಟ್ಟನ ಸ್ವರ್ಗದ ಕನಸು’, ‘ಗೊಂಬೆ ರಾವಣ’, ಆಗ ಮತ್ತು ಸುಂದರಿ’, ‘ಹಂಚಿನಮನೆ ಪರಸಪ್ಪ’, ‘ಪುಸ್ತಕ ಪಾಂಡಿತ್ಯ’ ಮುಂತಾದ ಹತ್ತಕ್ಕೂ ಹೆಚ್ಚು ಮಕ್ಕಳ ನಾಟಕ, ‘ಕನ್ನಂಬಾಡಿಯ ಕಟ್ಟದಿದ್ದರೆ’, ‘ದ್ವಂದ್ವ ದ್ವಾಪರ’, ‘ಬೆಳ್ಳಿಬೆಳಕಿನ ಹಿಂದೆ’ ಮುಂತಾದ ನಾಟಕಗಳನ್ನು ರಚಿಸಿದ್ದಾರೆ. ವಿಶ್ವೇಶ್ವರಯ್ಯನವರ ಆತ್ಮಕಥೆಯನ್ನು ಕನ್ನಡಕ್ಕೆ ‘ನನ್ನ ವೃತ್ತಿ ಜೀವನದ ನೆನಪುಗಳು’ ಎಂಬ ಶೀರ್ಷಿಕೆಯಡಿ ಅನುವಾದಿಸಿದ್ದಾರೆ. ‘ಕನ್ನಡದಲ್ಲಿ ಮಕ್ಕಳ ನಾಟಕ ಮತ್ತು ರಂಗಭೂಮಿ’ ಎಂಬ ಮಹಾಪ್ರಬಂಧಕ್ಕಾಗಿ ಹಂಪಿಯ ಕನ್ನಡ ವಿಶ್ವವಿದ್ಯಾ ಲಯದಿಂದ ಡಾಕ್ಟೋರೇಟ್ ಪದವಿ ಪಡೆದಿದ್ದಾರೆ.
ಕನ್ನಡ ಸುಗಮ ಸಂಗೀತದ ಮೇರುಪ್ರತಿಭೆ ಗರ್ತಿಕೆರೆ ರಾಘಣ್ಣನವರ ಬದುಕಿನ ಚಿತ್ರಣವಾದ ‘ಕಾಡು ಕಣಿವೆಯ ಹಾಡುಹಕ್ಕಿ ಗರ್ತಿಕೆರೆ ರಾಘಣ್ಣ’ ಇವರ ಇನ್ನೊಂದು ಮಹತ್ವದ ಕೃತಿ. ’ಕೈಲಾಸ ಮಾನಸ’, ‘ಗೋಮುಖಆಗಿ ಹೋಗುವ ಮುನ್ನ ಕಣ್ಣುಂಬಿಕೊಳ್ಳೋಣ’ (ಪ್ರವಾಸ ಕೃತಿ), “ನನ್ನ ವೃತ್ತಿಯ ನೆನಪುಗಳು” ಕೃತಿಯಲ್ಲಿ ಅವರ ವೃತ್ತಿ ಬದುಕಿನ ಅನುಭವವನ್ನು ದಾಖಲಿಸಿದ್ದಾರೆ. ಅವರು ಇತ್ತೀಚಿಗೆ ಪ್ರಕಟಿಸಿರುವ ‘ಚೆನ್ನಭೈರಾದೇವಿ’ ಕೃತಿಯು 6 ತಿಂಗಳಲ್ಲಿ 4 ಮುದ್ರಣವನ್ನು ಕಂಡಿದೆ.
ಕನ್ನಡ ಪ್ರಾಧ್ಯಾಪಕರು ಹಾಗೂ ಹೊಸ ತಲೆಮಾರಿನ ವಿಮರ್ಶಕರೂ ಆದ ಎಚ್.ಎಸ್. ಸತ್ಯನಾರಾಯಣ ಅವರು ಮೂಲತಃ ಮಲೆನಾಡಿನವರು. ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಸತ್ಯನಾರಾಯಣ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿಗಾಗಿ ‘ಕನ್ನಡ ಸಾಹಿತ್ಯ ಸಂಗಾತಿ’, ‘ಸಾಹಿತ್ಯ ವಿಮರ್ಶೆ-2016’, ಜೊತೆಗೆ ಡುಂಡಿರಾಜರ ಸಾಹಿತ್ಯ ವಿಮರ್ಶೆ ಕುರಿತ ‘ಡುಂಡಿಮಲ್ಲಿಗೆ’, ದ್ವಿತೀಯ ಪಿ.ಯು.ಸಿ.ಯ ಕನ್ನಡ ಭಾಷಾ ಪಠ್ಯ ‘ಸಾಹಿತ್ಯ ಸಂಪದ’ವನ್ನು ಸಂಪಾದಿಸಿದ್ದಾರೆ.
ಕುವೆಂಪು ಕುರಿತು ಅವರು ಅಲ್ಲಲ್ಲಿ ಮಾಡಿದ ಭಾಷಣಗಳಿಗೆ ಬರಹ ರೂಪ ನೀಡಿ ‘ಕುವೆಂಪು- ಅಲಕ್ಷಿತರೆದೆಯ ದೀಪ’ ಹಾಗೂ ಕವಿಸಮಯ-ಅಂಕಣ ಬರಹಗಳ ಸಂಕಲನ ‘ಅಪೂರ್ವ ಒಡನಾಟ’ ಪ್ರಕಟಗೊಂಡಿವೆ. ಪನ್ನೇರಳೆ ಎಂಬ ಲಲಿತ ಪ್ರಬಂಧಗಳು ಹಾಗೂ ನಗುಮೊಗದ ಅಜ್ಜ ಮಾಸ್ತಿ ಎಂಬ ಬದುಕು ಬರಹಗಳ ಸಂಗ್ರಹ ಇವರ ಇತ್ತೀಚಿನ ಕೃತಿಗಳು.
ಅಭಿನಂದನೆಗಳು ಹಿರಿಯರಿಗೆ.
ಖುಷಿಯಾಯಿತು