-ನಾಗರಾಜ್ ಕಾಂಬಳೆ(ಎನ್ ಕೆ)
ಹೊಸ್ತಿಲ ದಾಟುವ ಧೈರ್ಯ ಮಾಡು..
ಅದೇಷ್ಟೋ ಹಳೆಯ ಅಧ್ಯಾಯಗಳನ್ನು ಓದಿದರೂ
ಪುರಾಣ ಪುಣ್ಯಕತೆಗಳನ್ನು ಕೇಳಿದರೂ
ಗಡಿ ತಂಟೆ ವಿಸ್ತಾರಗಳಿಗೆ ಹೊಡೆದಾಡಿ ಸತ್ತ
ಚರಿತ್ರೆಯ ಪುಟಗಳನ್ನು ತಿರುವಿದರೂ
ಸೋಲು
ಗೆಲುವು
ಎಂಬೆರೆಡೂ ಪದಗಳು ಯಾರನ್ನೂ ಬಿಟ್ಟಿಲ್ಲ
ನೋವು
ನಲಿವೂ
ಕೂಡ ಅದರಂತೆಯೇ
ಗಂಡಸರೇ ಕೇಳಿ
ಹೆಂಗಸರೇ ಕೇಳಿ
ಸದಾ ಸುಖಿಯ ಭಾಗ್ಯ ಇಲ್ಲಿ ಯಾರಿಗೂ ಒಲಿದಿಲ್ಲ
ಒಲಿಯುವುದೂ ಇಲ್ಲ;
ಗಂಟೆಗಟ್ಟಲೇ ಅವಳ ತೊಡೆಯ ಮೇಲೆ ಮಲಗಿ
ಧೈರ್ಯ ಹೇಳಿದರೂ
ಗಡಿದಾಟಿದಷ್ಟು ಸುಲಭದಲ್ಲಿ
ಅವಳು ಹೊಸ್ತಿಲು ದಾಟುತ್ತಿಲ್ಲ
ಸಾವನ್ನು ಬೇಕಾದರೂ ಒಪ್ಪುವ ಅವಳು
ಪ್ರೇಮ ಎಂಬ ಆಕರ್ಷಕ ಹೂವನ್ನು
ಅವರ ತೋಟದಲ್ಲಿ ಬೆಳೆಯಲು ಬಿಡುವುದಿಲ್ಲವಂತೆ
ಈ ಬದುಕು ಬರೀ ಪ್ರೇಮವನ್ನು ಬಯಸುತ್ತದೆ
ಉಳಿದದ್ದೆಲ್ಲವನ್ನು ಕಾಲವೇ ನೋಡಿಕೊಳ್ಳುತ್ತದೆ
ಬಾ
ಒಂದು ಬಾರಿ ಹೊಸ್ತಿಲ ದಾಟುವ ಧೈರ್ಯ ಮಾಡು
ಇರುವಷ್ಟು ದಿನ ನಾನು, ನೀನು
ಈ ಮಾರ್ಯಾದಾ ಹತ್ಯೆಯ ಜಾಗದಲ್ಲಿ
ಹೂವಿನ ಸಸಿ ನೆಟ್ಟು ಬೆಳೆಸೋಣ
ರಕ್ತ ಕಾರಿದ ಜಾಗದಲ್ಲಿ
ತುಸು ಹೂವಿನ ಪರಿಮಳ ಬೀರಲಿ…






0 Comments