ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೇವಲ ಮೊಬೈಲಿಗೆ ಅಂಟಿಕೊಳ್ಳದೆ..

manjunath kamath

ಮಂಜುನಾಥ ಕಾಮತ್ 

ನಮ್ಮ ಅಧ್ಯಯನ ಪ್ರವಾಸಕ್ಕೆ ಮಾಧ್ಯಮ ಮಿತ್ರರನ್ನು ಆಹ್ವಾನಿಸಲು ಹೋಗಿದ್ದೆ. ಚಾರಣದ ಹೊತ್ತು ವಿದ್ಯಾರ್ಥಿಗಳನ್ನು ವಿವಿಧ ಗುಂಪುಗಳನ್ನಾಗಿ ವಿಂಗಡಿಸಿ ಗುಂಪಿಗಿಬ್ಬರು ಪತ್ರಕರ್ತರು. ಅವ್ರ ಅನುಭವಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳೋದು ನಮ್ಮ ಯೋಜನೆ.

helping handಸುದ್ದಿ ಗೂಡಲ್ಲಿದ್ದವರನ್ನೆಲ್ಲಾ ಆಹ್ವಾನಿಸುತ್ತಿದ್ದೆ. ಆಗ ನನ್ನ ಆತ್ಮೀಯರೂ, ಮಾರ್ಗದರ್ಶಕರೂ ಆಗಿರೋ ಮಾಸ್ತಿಯಣ್ಣ ಹೇಳಿದ ಮಾತೊಂದು ಆ ಕಾಲೇಜಿನ ಹುಡುಗಿಯರನ್ನೆಲ್ಲ ಅಭಿಮಾನದಿಂದ ಕಾಣೋ ಹಾಗೇ ಮಾಡಿತು. ಆ ಕಾಲೇಜಿನ ಹುಡುಗೀರು ಅಂದ್ರೆ ಹುಡುಗೀರು ಮಾತ್ರ. ಅದು ಹುಡುಗೀರ ಕಾಲೇಜು. ಅಜ್ಜರಕಾಡು ಮಹಿಳಾ ಕಾಲೇಜು.

ಗೀತಾ ಅನ್ನೋ ಬಡ, ಪ್ರತಿಭಾವಂತ ವಿದ್ಯಾರ್ಥಿನಿಯೋರ್ವಳ ಚಿಕಿತ್ಸೆಗಾಗಿ ಆ ವಿದ್ಯಾರ್ಥಿನಿಯರು ಒಂದೆರಡು ದಿನದಲ್ಲೇ ಏಳು ಲಕ್ಷ ಸಂಗ್ರಹಿಸಿದ್ದಾರೆ. ಒಂದು ಪೆಟ್ಟಿಗೆ ಹಿಡಿದು ಜಿಲ್ಲೆಯಾದ್ಯಂತ ಓಡಾಡಿದ್ದಾರೆ. ಜನ್ರಿಗೆ ತಮ್ಮ ಗೆಳತಿಯ ಅನಾರೋಗ್ಯದ ಬಗ್ಗೆ ಮನವರಿಕೆ ಮಾಡಿ ಅಷ್ಟು ಹಣವನ್ನು ಸಂಗ್ರಹಿಸಿದ್ದಾರೆ. ಕೆಲವೊಂದು ಕಡೆ ಹೋದವ್ರು ಬರಿಗೈಲಿ ಹಿಂದೆ ಬಂದಿದ್ದರೂ ಹಿಂಜರಿಯಲಿಲ್ಲ. ಮುಜುಗರ ಪಡಲಿಲ್ಲ. ಮತ್ತೊಂದು ಕಡೆ ಸಹಾಯ ಹಸ್ತಕ್ಕಾಗಿ ಕೈಚಾಚಿದ್ದಾರೆ. ಯಶಸ್ವಿಯಾಗಿದ್ದಾರೆ. ಆ ಹಣವನ್ನು ಗೀತಾಳಿಗೆ ಹಸ್ತಾಂತರಿಸಿದ್ದಾರೆ.

ಕಷ್ಟದ ಸಂದರ್ಭ ವಿದ್ಯಾರ್ಥಿಗಳು ಸಹಾಯಕ್ಕಿಳಿದಿದ್ದು ಇದೇನೂ ಹೊಸತಲ್ಲ. ಆದ್ರೆ ಹೆಚ್ಚಿನ ಸಂದರ್ಭ ಕಾಲೇಜಿನ ವಿವಿಧ ಕ್ಲಾಸುಗಳಿಗೆ ಹೋಗಿ ಹಣ ಸಂಗ್ರಹಿಸುತ್ತಾರಷ್ಟೆ. ಆದ್ರೆ ಗೀತಾಳಿಗೆ ಬೇಕಾದ ಹಣ ತಮ್ಮೊಂದು ಕಾಲೇಜಿನಿಂದ ಸಾಧ್ಯವಿಲ್ಲ ಎಂದರಿತ ಹುಡುಗೀರು ಉಡುಪಿ ಜಿಲ್ಲೆಯ ವಿವಿಧ ಕಾಲೇಜುಗಳ ಮೆಟ್ಟಿಲು ಹತ್ತಿದ್ದಾರೆ. ಬಸ್ಸುಗಳಲ್ಲಿ ಪ್ರಯಾಣಿಸೋ ಜನತೆಯ ಸಹಾಯವನ್ನೂ ಕೋರಿದ್ದಾರೆ. ದಾನಿಗಳ ಮನೆ ಬಾಗಿಲು ತಟ್ಟಿದ್ದಾರೆ.

ಮಾಸ್ತಿಯಣ್ಣ ಮತ್ತೆ ಮಾತನಾಡಿದರು. “ಮಾಧ್ಯಮಗಳು ಮೊದಲು ಗೀತಾಳ ಪರಿಸ್ಥಿತಿಯ ಬಗ್ಗೆ ವರದಿ ಮಾಡಿದ್ದವು. ಆದ್ರೆ ಅದೊಂದೇ ಸಾಕಾಗಲ್ಲ. ಆ ಕಾಲೇಜಿನ ಹುಡುಗೀರು ಊರೂರು ಸುತ್ತಿದ್ದರಿಂದ ಇದು ಸಾಧ್ಯವಾಯಿತು. ಅಷ್ಟೊಂದು ಜನ್ರತ್ರ ಮಾತಾಡೋದು, ಹಣ ಸಂಗ್ರಹಿಸೋದು ಸುಲಭದ ಮಾತಲ್ಲ. ಸಾಧನೆ ಅಂದ್ರೆ ಅದು. ಅನುಭವ ಅಂದ್ರೆ ಅದು. ಅಂದ್ರೆ ಮುಂದೆ ನಾವೇನೂ ಮಾತೋಡೋದು ಮಂಜಣ್ಣ” ಅಂದ್ಬಿಟ್ರು.

ಗೀತಾಳಂತಹ ಅನೇಕರ ಬಗ್ಗೆ ವಾಟ್ಸಪ್ಪು, ಫೇಸ್ಬುಕ್ಕುಗಳಲ್ಲಿ ಸಹಾಯಕ್ಕಾಗಿ ಕೋರಿ ಮೆಸೇಜುಗಳು ಹರಿದಾಡಿ ಅವು ಎಲ್ಲೋ ಒಂದುಕಡೆ ಕೊನೆಗೊಳ್ಳುತ್ತವೆ. ಅದ್ರ ಫಲಿತಾಂಶ ಏನಾಯ್ತು ಅಂತ ಯಾರಿಗೂ ಗೊತ್ತಾಗಲ್ಲ. ಹೀಗಿರೋವಾಗ ಈ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ಕೇವಲ ಮೊಬೈಲಿಗೆ ಅಂಟಿಕೊಳ್ಳದೆ ಇಡೀ ಉಡುಪಿ ಸುತ್ತಾಡಿ ಮಾಡಿದ ಸಾಹಸ ಅಭಿಮಾನ ಪಡುವಂತದ್ದು.

ಈ ಹುಡುಗಿಯರ ಕಳಕಳಿಗೆ ಉಡುಪಿ ಜಿಲ್ಲೆಯ ಮಂದಿ ನೆರವಾಗಿದ್ದಾರೆ. ಅದ್ರಲ್ಲೂ ಉಡುಪಿ ಸಿಟಿ ಬಸ್ಸುಗಳ ಕಂಡಕ್ಟರ್ರು, ಡ್ರೈವರ್ರುಗಳು ತಮ್ಮ ಬಸ್ಸುಗಳಲ್ಲಿ ಪೆಟ್ಟಿಗೆಯೊಂದನ್ನಿಟ್ಟುಕೊಂಡು, ಪ್ರಯಾಣಿಕರ ಮನವೊಲಿಸಿ ದುಡ್ಡು ಸಂಗ್ರಹಿಸಿ ನೀಡುತ್ತಿದ್ದಾರೆ. ಟೈಮ್ ಮೈಂಟೇನ್ ಮತ್ತು ಕಲೆಕ್ಷನ್ ಜಿದ್ದಾಜಿದ್ದಿಯಲ್ಲಿ ಮನುಷ್ಯತ್ವವನ್ನೇ ಮರೆಯೋ ಕಂಡಕ್ಟರ್ರು ಡ್ರೈವರ್ರುಗಳ ಈ ಮಾನವೀಯ ಸ್ಪಂದನ ಮಾದರಿಯಾಗುವಂತದ್ದು. ಅವ್ರ ಜೊತೆಗೆ ಸ್ವತಃ ಅಂಗವಿಕಲರಾಗಿದ್ದೂ, ದಿನಾ ನೋವನ್ನು ಅನುಭವಿಸುತ್ತಿರುವವರೂ ಹಣ ಸಂಗ್ರಹಿಸಿ ಗೀತಾಳಿಗೆ ನೆರವಾಗಿದ್ದಾರೆ.

‍ಲೇಖಕರು admin

25 March, 2016

1 Comment

  1. Shama, Nandibetta

    ಗೀತಾ ಗೆ ಮತ್ತು ಸಹಾಯ ಹಸ್ತ ಚಾಚಿದ ಎಲ್ಲರಿಗೆ ಒಳ್ಳೆಯದಾಗಲಿ.

    “ಕೇವಲ ಮೊಬೈಲಿಗೆ ಅಂಟಿಕೊಳ್ಳದೆ ಇಡೀ ಉಡುಪಿ ಸುತ್ತಾಡಿ ಮಾಡಿದ ಸಾಹಸ ಅಭಿಮಾನ ಪಡುವಂತದ್ದು” ಹೌದು.

    ಎಲ್ಲರೂ ಹೀಗೇ ಇರಲಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading