ಉಮಾದೇವಿ ಕೆ ಎಸ್ ಗ್ಯಾರಳ್ಳ
ಬಿ.ಜಿ.ಎಲ್. ಸ್ವಾಮಿಯವರ ‘ಹಸುರು ಹೊನ್ನು’ ಪುಸ್ತಕವನ್ನು ಮೊದಲ ಸಲ ಓದಿದಾಗ ಈ ಗೆಡ್ಡೆಯ ಕಲ್ಪನೆಯಾಗಲೀ ರುಚಿಯಾಗಲೀ ಗೊತ್ತಿರಲಿಲ್ಲ. ಇದನ್ನು ಮೊದಲ ಬಾರಿಗೆ ನೋಡಿದ್ದು ಛತ್ತೀಸ್ಗಢದಲ್ಲಿ. ನಾವು ಇದ್ದ ಊರಿನಲ್ಲಿ ನಡೆಯುತ್ತಿದ್ದ ಜಾತ್ರೆಯಲ್ಲಿ ಇದನ್ನು ಮಾರುತ್ತಿದ್ದರು. ಐದು ರೂಪಾಯಿಗೆ ಒಂದೋ ಎರಡೋ ಹೋಳು ಎಬ್ಬಿ ಕೊಡುತ್ತಿದ್ದರು. ಬಾಯಿಗೆ ಇಟ್ಟು ಕೊಂಡಾಗ ಸಿಹಿ ಎನಿಸುತ್ತಿದ್ದ ಇದು ಅಗಿಯುತ್ತಾ ಸಪ್ಪೆ ಯಾಗುತ್ತಿತ್ತು. ನಂತರ ನೋಡಿದ್ದು ಮತ್ತು ತಿಂದದ್ದು ತುಮಕೂರಿನ ಎಂ.ಜಿ. ರೋಡಿನಲ್ಲಿ.
ಹಸುರು ಹೊನ್ನು ಪುಸ್ತಕ ಎರಡನೇ ಸಲ ಓದುವಾಗ ಅದರಲ್ಲಿನ ‘ಒಂದು ತನಿಖೆ ಭಾಗ’ ಓದುತ್ತಾ.. ಓ ಈ ಗೆಡ್ಡೆ ತಿಂದಿದ್ದೇನೆ ಅನಿಸಿತು. ಈ ಪುಸ್ತಕದಲ್ಲಿ ಈ ಗೆಡ್ಡೆಯ ಬಗ್ಗೆ ಅವರು ಮಾಹಿತಿ ಸಂಗ್ರಹಿಸುವುದೂ ಕೂಡಾ ತುಂಬಾ ಸ್ವಾರಸ್ಯಕರವಾಗಿದೆ. ಪುಸ್ತಕದಲ್ಲಿ ಬರೆದಿರುವ ಮಾಹಿತಿ ಪ್ರಕಾರ: “ಪಶ್ಚಿಮ ಘಟ್ಟದ ಕಾಡುಗಳಿಂದ ಇದನ್ನು ಸಂಗ್ರಹಿಸುತ್ತಾರೆ. ಆಂಧ್ರಪ್ರದೇಶಕ್ಕೆ ಸೇರಿದ ಪೂರ್ವ ಘಟ್ಟದಲ್ಲಿಯೂ ದೊರಕುತ್ತವೆ.”
ಇದು ಸುಲಭವಾಗಿ ಒಣಗಿ ಹೋಗುವಂಥ ಗೆಡ್ಡೆಯಲ್ಲ. ಆರೇಳು ತಿಂಗಳು ಹಸಿಯಾಗಿಯೇ ಇರುತ್ತದೆ. ರುಚಿ ಸ್ವಲ್ಪ ಸಿಹಿಯಾದರೂ ಬಹುವಾಗಿ ಸಪ್ಪೆಯ ಛಾಯೆಯನ್ನೇ ಹೊಂದಿರುತ್ತದೆ. ಮಾರಾಟಗಾರರು ಇದಕ್ಕೆ ಸಾಕರೀನ್ (Saccharine) ಸವರುವುದರಿಂದ ಬಾಯಿಗೆ ಇಟ್ಟಾಗ ತುಂಬಾ ಸಿಹಿ ಅನಿಸುತ್ತದೆ. ನಾನು ನೋಡಿದ ವಿಡಿಯೋ ಒಂದರಲ್ಲಿ ಇದರ ಬಳಕೆಯಿಂದ ಬಾಯಾರಿಕೆ ಶಮನವಾಗುವುದು. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ, ಚರ್ಮ ರೋಗ, ಹಾವು, ಚೇಳು ಕಡಿತಕ್ಕೆ ಔಷಧಿಯಾಗಿ ಬಳಸುತ್ತಾರಂತೆ.
0 ಪ್ರತಿಕ್ರಿಯೆಗಳು