ಕೆ ಆರ್ ಸೌಮ್ಯಾ
“ಊರ ಹೊರಗಿನವನಲ್ಲ
ಹೊಲೆಯ ಒಳಗಿರುವವನು”
ಅಂದೆಯಲ್ಲ…
ಯಾರಿಗೆ ಮುಟ್ಟಿತು
ನಿನ್ನ ಮಾತು?
ಕಾಯದೊಳಗೆ
ಧರ್ಮದ ಅಫೀಮು
ಜಾತಿಯ ಹೊಲಸು
ಶ್ರೇಷ್ಠತೆಯ ತೆವಲು….
ಹೀಗೆ ಎಲ್ಲವುಗಳೂ
ತುಳುಕುವ
ಹೊಲೆತನ
ಊರಿನಿಂದಿನ್ನೂ ಒಳಗೆ
ಒಳಗೆ
ಒಳಗೆ
ಒಳಗೊಳಗಿನ
ಮಿದುಳುಗಳಿಗೆ
ತುಂಬಿದೆ
ಮತ್ತೆ ಸಂಭವಿಸು ಇಲ್ಲಿ
ಆ ಆದಿ ರಾಮ;
ವಾಲ್ಮೀಕಿ ರಾಮ;
ಮರ್ಯಾದಾ ರಾಮನಿಲ್ಲಿ
ಈಗ ಇಲ್ಲಿ
ಎದೆಗೆ ಬಿಲ್ಲೇರಿಸಿ
ತನ್ನ ಇರುವಿನ
ಮಂದಿರದ ಮೇಲೆ
ವೀರನಾಗಿ ನಿಂತಿರುವ
ಕ್ರೂರತೆಯ ಕಂಡು ಸೀತೆ ಕಾನನದೊಳಗೆ
ದುಃಖಿಸುತ್ತಿರುವಾಗ
ಲಕ್ಷ್ಮಣ ನಾಪತ್ತೆಯಾದ
ಭಕ್ತ ಹನುಮ
ಭಜರಂಗಿಯಾಗಿ
ರಾಮನಿಗೂ ಮಿಗಿಲಾಗಿ
ಬೊಬ್ಬುರಿಯುತ್ತಿರುವಾಗ
ನೀನು ಹೇಳಿದ
‘ರಾಮ ಧಾನ್ಯ’ವನುಂಡವರು
ದರ್ಪಕ್ಕೆ ಬಿದ್ದಿರುವಾಗ
ಅದೇ ಧಾನ್ಯ
ಬೆಳೆದವರು ಸಾವಿಗೆ
ಶರಣಾಗುವ ಗತಿಗೆ ಬಂದಿದ್ದಾರೆ
ನಾವು ಉಸಿರಾಡಬೇಕಿದೆ
ಮತ್ತೆ ಸಂಭವಿಸು ಇಲ್ಲಿ
ಕನಕನೇ….
ಕಾದಿದ್ದೇವೆ
ಮತ್ತೆ ಸಂಭವಿಸು ಇಲ್ಲಿ
0 ಪ್ರತಿಕ್ರಿಯೆಗಳು