-ದರ್ಶನ್ ಕುಮಾರ್ (ಭಾವುಕ)
ದುಗುಡದ ಚೈತ್ರ
ಚೈತ್ರದ ಚಿಗುರಿಗೂ
ಕಾವ್ಯ ಬರೆಯುವ ನನ್ನೆದೆಗೆ,
ನಿನ್ನ ಮೌನವನ್ನೋದುವ
ಶಬ್ದಕೋಶವಿನ್ನೂ ದಕ್ಕಿಲ್ಲವಲ್ಲ
ಎಂಬ ತೀವ್ರ ದುಗುಡ.
ನನ್ನ ಕಲ್ಪನೆಯ ರಥದ ಗಾಲಿಗಳಿಲ್ಲಿ
ಮಣ್ಣಿಗೆ ಕಚ್ಚಿ ನಿಂತಿವೆ.
ಕಾಣದ ಕಡಲಿಗೆ ಹಾಡಾಗುವ,
ಬೆಟ್ಟದ ಮೇಲಿನ ಮೋಡಕ್ಕೆ
ಜೀವತುಂಬುವ ನನ್ನ
ಪದಗಳ ಗರ್ವವೆಲ್ಲವೂ
ಇಂದು ಅಣಕಿಸುತ್ತಿದೆ.
ನಿನ್ನ ಕಂಗಳ ಆಳದ
ಪ್ರಶಾಂತತೆಗೆ ಭಾಷ್ಯ ಬರೆಯಲು
ಯಾವ ಭಾಷೆಯ ವ್ಯಾಕರಣವೂ ನನ್ನ ಕೈ ಹಿಡಿಯುತ್ತಿಲ್ಲವಲ್ಲ!
ಅಕ್ಷರಗಳ ಅಂಗಡಿಯಲ್ಲಿ ಅಲೆದಾಡಿರುವೆ,
ಬದುಕಿನ ಪುಟಗಳನ್ನೇ
ಮತ್ತೆ ಮತ್ತೆ ತಿರುವಿ ಹಾಕಿ
ಹುಡುಕಾಟ ನಡೆಸಿದ್ದೇನೆ.
ಆದರೆ, ನಿನ್ನ ತುಟಿಯಂಚಿನಲಿ ಹೆಪ್ಪುಗಟ್ಟಿದ
ಈ ನಿಗೂಢ ಮೌನಕ್ಕೆ,
ಸಮಾನಾರ್ಥಕ ಪದವೊಂದು
ಯಾವ ಗ್ರಂಥಾಲಯದಲ್ಲೂ
ಸಿಗಲೇ ಇಲ್ಲ.
ಎದೆಯೊಳಗೆ ಗುಪ್ತಗಾಮಿನಿಯಾಗಿ
ಹರಿಯುವ ಈ ತವಕ,
ನೀನು ಎದುರಿಗಿದ್ದರೂ
ಆವರಿಸುವ ಸಾವಿರ ಮೈಲಿಗಳ ಒಂಟಿತನ!
ನನ್ನ ನೂರಾರು ಕವಿತೆಗಳಿಗಿಂತಲೂ,
ಮಾತಿಲ್ಲದ ನಿನ್ನ ಈ ಮೌನವೇ
ಅತ್ಯಂತ ಕ್ರೂರ ಹಾಗೂ
ಪ್ರಾಮಾಣಿಕ ವಿಮರ್ಶಕ.
ವಸಂತನ ಆಗಮನಕ್ಕೆ
ವನವೆಲ್ಲವೂ ಮೈತುಂಬಿ ಹಾಡಿದೆ,
ಒಣಗಿದ ಕೊಂಬೆಗೂ
ಹಸಿರಿನ ಉಡುಗೆ ತೊಡಿಸುವ
ಪ್ರಕೃತಿಯ ಸಂಭ್ರಮ.
ಆದರೆ, ನನ್ನ ಕಾವ್ಯದ ಉಸಿರಿಗೂ
ನಿನ್ನಂತರಂಗದ ಶಿಶಿರವನ್ನು ತಟ್ಟಲಾಗಲಿಲ್ಲ,
ನನ್ನ ಅಕ್ಷರಗಳ ಕಾವಿಗೂ
ನಿನ್ನ ಮೌನದ ಮಂಜನ್ನು ಕರಗಿಸಲಾಗಲಿಲ್ಲ.
ಬೆಳದಿಂಗಳ ರಾತ್ರಿಯಲ್ಲಿ
ಬಿಸಿಲುಗುದುರೆಯ ಬೆನ್ನೇರಿದಂತೆ,
ನಿನ್ನ ಮೌನದ ಅರ್ಥ ಹುಡುಕುವ
ನನ್ನೀ ಹುಚ್ಚು ಕವಿಯ ಸಾಹಸ.
ಕೈಗೆಟುಕದ ನಕ್ಷತ್ರವನ್ನೇ ದಿಟ್ಟಿಸುವ
ಕಂಗಳ ಹಾಗೆ ದಣಿದಿದೆ ನನ್ನೆದೆ,
ನಿನ್ನ ದನಿಯೊಂದಿಗಿನ ಮುಖಾಮುಖಿಗಾಗಿ
ಮೌನವಾಗಿಯೇ ಕಾದಿದೆ.
ಕೊನೆಗೂ ನಾ ಸೋತೆ,
ನನ್ನ ಪದಪುಂಜಗಳ ಅಹಂಕಾರವೂ ಕರಗಿತು,
ಚೈತ್ರದ ಚಿಗುರಿಗೆ ಬರೆದ ಸಾಲುಗಳೆಲ್ಲವೂ
ಗಾಳಿಯೊಡನೆ ಲೀನವಾದವು.
ದಕ್ಕದ ಶಬ್ದಕೋಶದ
ಆ ಕೊರಗು ಕಾಯಂ ಆಗಿ
ನನ್ನ ಉಸಿರಾಗಿಯೇ ಉಳಿಯಿತು,
ನಿನ್ನ ಮೌನವೇ ಗೆದ್ದಿತು,
ನನ್ನೆದೆಯ ಹಾಡನ್ನು ಸದಾ ಕಾಡುತ್ತಲೇ ನಿಂತಿತು.






0 Comments