-ರೇವಣಸಿದ್ಧಪ್ಪ ಜಿ.ಆರ್
ಪರದೆಯ ಮೇಲೆ
ಪದರುಪದರಾಗಿ ಚಿತ್ತಾರ
ಯಾವ ಕವಿ ಊಹಿಸದ ಬಂಧುರ
ಸುಖದ ಹೆಸರ ಮಾಯಾಮೃಗದ
ಬೆನ್ನತ್ತುವ ಹಿತವಾದ ಓಟದಲ್ಲಿ
ಬವಣೆಗಳ ಒಡನಾಟ
ಕಣ್ಣೀರು ಬತ್ತಿಹೋಗಿ
ಬೆವರು ಆವಿಯಾಗಿ
ಪಚ್ಚೆಯಂಥ ನೆಲದ ಮೇಲೆ
ನವನವೀನ ಚಿತ್ತಾರ
ನವರಸಗಳ ಹಿನ್ನಲೆಯಲ್ಲಿ
ಅರಿಷಡ್ವರ್ಗಗಳ ವಿಜೃಂಭಣೆ
ಬುದ್ಧನ ತಾಟಸ್ಥ್ಯ ಮಹಾವೀರನ ಅಹಿಂಸೆ
ಬಸವನ ಸಮಾನತೆ ಜೊತೆಜೊತೆಗೆ
ಅಟ್ಟಹಾಸಗೈಯುವ ಅಂಗುಲೀಮಾಲ
ಬಕ ಕೀಚಕ ತೈಮೂರ
ಕಲಸುಮೇಲೋಗರ
ಸಂಬಂಧಗಳ ಖೆಡ್ಡಕ್ಕೆ ಬಿದ್ದ
ಜೀವದ ಚಿತ್ರವಿಚಿತ್ರ ಚಿತ್ತಾರ
ಅನವರತ ಬಿತ್ತರ






0 Comments