– ದಿಲೀಪ್ ಎನ್ಕೆ
ಇಬ್ಬನಿಯ ಕಾಲ್ಗೆಜ್ಜೆ
ಹೇಗೆ ತೀರಿಸಲಿ
ಋಣವ
ಋತುಮಾನಕ್ಕಷ್ಟೇ ಪ್ರೀತಿಯೆ..
ಹೊತ್ತು ಮೆರೆದೆ
ತನುಭರವ ಹದ್ದಿನ
ರೆಂಕೆಯಂತೆ ಮರೆಮರೆಯಲಿ ಜಾತ್ರೆಯ ಅಪ್ಪನ
ಹಿಮಾಲಯ ನೀನು
ಫಲಕಚ್ಚದ
ಅಮೃತ ಮೇಘಗಳ
ಐಕಲಾಟಕೆ ನಗ್ನಗೊಳಿಸಿ
ಗುಟುಕು ಕೂರಿದ
ಅವ್ವನ ಬೆಳ್ದಿಂಗಳ ಮಡಿಲು ನೀನು
ಸಹಸ್ರ ಮಿಣುಕುಗಳ
ಕಣ್ಣ ಕಡಲೊಳಗೆ ಕೂಡಿ
ಬೆನ್ನ ಮೇಲೆ ಗುರಿಯ ಚೇಳ ಬಿಟ್ಟು ಅಖಾಡಕ್ಕೆ ತಳ್ಳಿದ
ಗುರು ದ್ರೋಣ ನೀನು
ಕಾಡ ಕರುಳಿಗೆ
ತೆಪ್ಪೆಯ ಹುಟ್ಟ ಬಡಿಸಿ
ದುಗುಡದ ಕೀ ತಿರಿದು
ಕಚಗುಳಿ ನೀಡಿ ಹೆಗಲಿಗೆಲ ಕೊಟ್ಟ ಗೆಳೆಯ ಕರ್ಣ ನೀನು
ಚಂದ್ರ ಚಾಪದ ಹಿಗ್ಗ
ಅಗಿದುಗಿದು ತಿಂಗಳ ಸಂತಾನದ ತೋರಣ ಕಟ್ಟಿ ಭಾಸ್ಕರನ ಪ್ರಭೆಗೆ ಹಾಲೂಡಿ ಹಬ್ಬದೊಡಲಲಿ
ಸೂತಕ ಉಚ್ಚಿ ಜಾರಿದ
ಇಬ್ಬನಿಯ ಕಾಲ್ಗೆಜ್ಜೆ ನೀನು






0 Comments