ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆವರ್ತ

ರಂಜನಿ ಪ್ರಭು

ಆವರ್ತ

ವಸಂತ ಮುಗಿದು ಬೇಸಿಗೆಯ ಕಾಲದಾರಂಭ ಈ ಬಾರಿ ಲಂಡನ್ ಗೆ ಬಂದಿಳಿದಾಗ
ಇಲ್ಲಿಯೂ ಈ ಬಿಸಿಲೇ? ಎಂಬಂಥ ಬಿಸಿಲು
ಆದರೂ ಹಿತವಾಯ್ತು ಮಗಳ ಮುಖ ನೋಡಿದಾಗ
ಎಷ್ಟೋ ದಿನಗಳ ಅಂತರದಲ್ಲಿ ಕಂಡ ಮುದ್ದು ಮುಖ
ದನಿ ಕೇಳುತ್ತಿದ್ದರೂ
ವಿಡಿಯೋದಲ್ಲಿ ನೋಡುತ್ತಿದ್ದರೂ
ಅದು ಏನಿದ್ದರೂ ನೆರಳು
ಈಗ ಇಲ್ಲಿ ವಾಸ್ತವದ ಸ್ಪರ್ಶ.. ಅಪ್ಪುಗೆ

ಕೆಲವು ದಿನ ಬಿಸಿಲಿನ ಝಳ
ಕೆಲವು ದಿನ ತಂಪು ಗಾಳಿ
ತೇಲಿ ಹೋಗುವ ಮೋಡ
ನಿಚ್ಚ ನೀಲಿಯ ಗಗನ
ಏನೇ ಇದ್ದರೂ
ವಿಪರೀತ ಉದ್ದದ ಹಗಲು

ಅದಾರ ಬಳಿಸಾಲ ಮಾಡಿದ್ದಾನೋ ಈ ರವಿ ರಾಯ
ಹೀಗೆ ಮೂಗಿಗೆ ಕವಡೆ ಕಟ್ಟಿ ದುಡಿಯಲು

ಬೆಳಿಗ್ಗೆ ಐದಕ್ಕೆ ಮುಂಚೆ ಆಗಸದಲಿ
ಕೆಂಬಣ್ಣದ ಹರವು
ತನ್ನ ಕೆಲಸ ಮುಗಿಸಿ ಇವನು ಹೊರಡುವಾಗ ರಾತ್ರಿ ಹತ್ತು
ಗಂಟೆಯ ಸುಳಿವು
ಹಗಲು.. ಬೆಳಗು.. ಮಧ್ಯಾಹ್ನ.. ನಡು ಮಧ್ಯಾಹ್ನ.. ಸಂಜೆ.. ಗೋಧೂಳಿ..
ಎಲ್ಲವೂ ಏಕ ರೀತಿ
ಬೆಳಕು..ಬೆಳಕು…ಬೆಳಕು
ಒಂಥರಾ ಅಸ್ತವ್ಯಸ್ತದ ಮನಸು

ಸೂರ್ಯ ನಮಸ್ಕಾರ ಮಾಡುವವರೂ ಬೇಡಿಕೊಳ್ಳುತ್ತಾರೆ ಇಲ್ಲಿ
ಮುಳುಗಯ್ಯಾ ತಂದೆ ಮುಳುಗು
‘ ತಮಸೋಮಾ ಜ್ಯೋತಿರ್ಗಮಯ’ ಎನ್ನುವುದಿಲ್ಲ ಯಾರೂ
ಬೇಡುವರು
“ಮುಳುಗಿ ಕರುಣಿಸಪ್ಪಾ ಒಂದಿಷ್ಟು ಕತ್ತಲು”

ಕೌಶಿಕ ಮುನಿಯ ಹೆಂಡತಿ ಶಾಂಡಿಲೀ ಇದ್ದಿದ್ದರೆ
ಒಂದು ದಿನ
ಇವನು ಹುಟ್ಟದಂತೆ
ತಡೆಯಬಹುದಿತ್ತು.
ಮರಿಯಾ ದುರಾನ್ ಗೆ ಕೊಟ್ಟು ಬಿಡಿರಪ್ಪಾ ಈ ಉರಿದೇವನನು
ಉಡಿ ತುಂಬಿಸಿ

ಗೊತ್ತು ಕಣೊ ಸೂರ್ಯ
ನೀನೇ ಈ ಜಗದ ಜೀವ..
ಗೊತ್ತು
ಆದರೆ ಅತಿಯಾದರೆ ಅಮೃತವೂ
ವಿಷ ತಾನೇ?

ಬೆಳಿಗ್ಗೆ ಎದ್ದು ಹೊರಟ ಮಗಳು ರಾತ್ರಿ ಬಂದರೂ ಇನ್ನೂ
ಹಗಲ ಬೆಳಕು

ಬೆಳೆದ ಮಕ್ಕಳ ಅಪ್ಪ ಅಮ್ಮಂದಿರೆಂದರೆ
ಒಂದು ರೀತಿ ತಂತಿಯ ಮೇಲೆ
ನಡೆವಂತೆ
ನಾಜೂಕಿರಬೇಕು ನಡೆ
ನಯವಿರಬೇಕು ನುಡಿ
ಪ್ರೀತಿ ಎಂಬದು ಎಷ್ಟಿದೆಯೋ
ಅಷ್ಟೇ ಉಂಟು ಅಂತರ
ಆಲೋಚನೆಯ ಕ್ರಮದಲ್ಲಿ
ಅವರ ಪ್ರಪಂಚದ್ದೇ ಒಂದು ಚಂದದ
ಭೂತ ಕಾಲ ನಾವು
ವರ್ತಮಾನದಲ್ಲಿ ಗೆಳೆಯರಂತೆ ಇರಬೇಕು
ಸಲಿಗೆಯೇ ಒಮ್ಮೊಮ್ಮೆ ಸುಲಿಗೆಯಾದರೆ
ಹೊರಗಿನ ಕಣ್ಣು ಚುಚ್ಚುವ
ಚರ್ಮ ಕಚ್ಚುವ ಬಿಸಿಲು
ಒಳಗೂ ಬಂದೀತು ಜೋಕೆ

ಎಲ್ಲವೂ ಹದವಾಗಿದ್ದ ದಿನಗಳು
ಹೊರಗೆ ತಣ್ಣನೆ ಗಾಳಿ
ಬೆಚ್ಚಗಿನ ಮನೆಯಲ್ಲಿ ಒಂದು ಪುಟ್ಟ
ಆಪ್ತ ಪ್ರಪಂಚ

ಹಳೆಯ ನೆನಪುಗಳೂ
ಹೊಸ ಕನಸುಗಳೂ
ಮೆರ್ರಿ ಗೋ ರೌ೦ಡ್ ನಂತೆ ಸುತ್ತುತ್ತಾ
ಬಾಲ್ಯಕ್ಕೆ ಕೊಂಡೊಯ್ಯುವ ಬೆರಗು
ನಾವೂ ಮಕ್ಕಳಾಗಿ
ನಾವೂ ಗೆಳೆಯರಾಗಿ
ಹೃದಯ ಅರಳಿ
ಕಂಗಳು ಹನಿದಾವು

ಕಿಟಕಿಯಾಚೆಗೆ ನೋಡಿದರೆ
ಮಧ್ಯಾಹ್ನದ ಏಕಾಂತದಲ್ಲಿ
ಇಳಿಜಾರಿನ ಹೆಂಚು ಮನೆಗಳು
ಸುಡು ಬಿಸಿಲಿನ ಝಳವೂ ಕೆದಕಿ ನೆನಪಿಸಿದ್ದು
ತೀರ್ಥಹಳ್ಳಿಯ ಕಲ್ಲುಸಾರ
ದಾಟುವ
ಹೂವಯ್ಯ ರಾಮಯ್ಯರನ್ನು
ಕರಾವಳಿಯ ದಂಡೆಯಲ್ಲಿ
ಉಸ್ಸೆಂದು ದುಡಿಯುತಿರುವ
ಸರಸೋತಿ ಪಾರೋತಿಯರನ್ನು

ಎಲ್ಲಿಂದೆಲ್ಲಿಗೂ ಸಲೀಸು ಓಡಾಡಬಹುದಾದ ಹಾಯಾಗಿ
ಮಲಗಿದ ರಸ್ತೆಗಳೂ
ಎಡೆಬಿಡದೆ ಹಾಯುವ ರೈಲುಗಳೂ..
ಗಮ್ಯ ತಿಳಿದಿರಬೇಕು ಸರಿಯಾಗಿ
ಹಾಗೆಯೇ ನಡು ನಡುವಿನ ತಿರುವುಗಳಲ್ಲಿ
ಎಲ್ಲಿ ಹತ್ತಬೇಕೋ ಏರಿ ಇಳಿಯಬೇಕೋ
ಎಡವೋ ಬಲವೋ…
ವಿವೇಚನೆ ಇದ್ದರೆ
ಜೀವನದಂತೆ ಇದೂ ಸಲೀಸು

ದಿನಗಳು ಉರುಳುತ್ತಿವೆ
ಮನೆ.. ಮಗಳು.. ಅವಳು ಸಾಕಿದ ಮುದ್ದಿನ ಬೆಕ್ಕು..ಓಡಾಟ.. ವಿಶ್ರಾಂತಿ..
ಎಲ್ಲದರ ನಡುವೆ
ದಿನಗಳು ಉರುಳುತ್ತಿವೆ

ಆದರೆ
ಕವಿತೆಯ ಒಂದು ಸಾಲನ್ನೂ
ಗೀಚಲಾಗಿಲ್ಲ

ಕವಿತೆಗೆ ಕನಸು ಬೇಕು
ಕನಸಿಗೆ ಇರುಳು ಬೇಕು
ಇಲ್ಲಿ ಅದೇ ತುಟ್ಟಿ..
ಸಂಜೆ ನಿಧಾನ ಕೆಂಪು ಆವರಿಸಿ
ಗೋಧೂಳಿ ಸಮಯದಲ್ಲಿ
ಚಿತ್ತ ಸಂಕ್ರಾಂತಿಯಲಿ
ಕಬ್ಬಿನ ಜಲ್ಲೆ ಬೆಳೆಯಬೇಕು

ಹೀಗೆ ಮಳೆ ಇಲ್ಲದ ಬೇಸಿಗೆ ಕ೦ಡಿರಲೇ ಇಲ್ಲಮ್ಮಾ
ಎನ್ನುತ್ತಾಳೆ ಮಗಳು
ಅತ್ತ ಊರಿನಿಂದ ಮಗ ಫೋನಾಯಿಸಿ
ಮಳೆಯೇ ಬಂದಿಲ್ಲ
ಎನ್ನುತ್ತಾನೆ
ಕರ್ಮದ ಫಲ ಎನ್ನುತ್ತಿದೆ ಮನಸು

ಹೊರಡುವ ದಿನ ಹತ್ತಿರವಾಗುತ್ತಿದೆ.
ಎದ್ದುಬಂದ ಮಗಳು ನೇರ ಪಕ್ಕ ಬಂದು ಕೂತಳು
ಹೆಗಲಿಗೆ ತಲೆಯಾನಿಸಿದಳು
ಅಪ್ಪಿಕೊ೦ಡಳು
ಮನೆ ಎದುರಿನ ಪೊದೆಯಿಂದ
ಅರೆರೆ…. ನೂರಾರು ರಾಬಿನ್ ಹಕ್ಕಿಗಳು
ಹಾರಾಡತೊಡಗಿದವು
ಆಡುತ್ತಾ ಹಾಡುತ್ತಾ ಒಂದನ್ನೊಂದು
ಅಟ್ಟಾಡಿಸುತ್ತವೆ
ನೆನಪುಗಳ ಹಾಗೆ.

ಕಳೆದು ತಿಂಗಳು ಮೂರು
ಕಟ್ಟಿ ಗಂಟು ಮೂಟೆ
ಹೊರಟಾಯಿತು
ಎದೆ ಭಾರವಾಗಿದೆ
ರಾತ್ರಿಯೆಲ್ಲ ಅತ್ತದ್ದಾಗಿದೆ
ಎಲ್ಲರೂ…
ಇದೀಗ ಹೊರಟ ಗಳಿಗೆ
ಅಳಬಾರದೆಂದು ಗಟ್ಟಿಯಾಗಿದ್ದೇವೆ.

ಇದ್ದಕ್ಕಿದ್ದಂತೆ ಕವಿದು ಮೋಡ
ತಟಪಟ ತಟ ಪಟ ಮಳೆಯ
ಹನಿಗಳ ಸೇಸೆ
ವಿಮಾನ ನಿಲ್ದಾಣದ ಹಾದಿಯುದ್ದಕ್ಕೂ

ಮತ್ತೆ ಮರಳುತ್ತೇವೆ
ನಮ್ಮ ಊರಿಗೆ.. ನಮ್ಮ ಬದುಕಿಗೆ
ತಲುಪಿದ ಮೇಲೆ ಇದ್ದೇ ಇದೆ
ಕೇಳುವುದು ಮೊಬೈಲಿನಲ್ಲಿ

” ಹೇಗಿದ್ದೀಯೇ ಮೀನಾ?”

“ಚೆನ್ನಾಗಿದ್ದೀನಮ್ಮಾ”

“ಹೇಗಿದ್ದೀಯೇ ಮೀನಾ?”

“ಚೆನ್ನಾಗಿದ್ದೀನಮ್ಮಾ”

          

‍ಲೇಖಕರು Admin

29 August, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading