–ಸರೋಜಿನಿ ಪಡಸಲಗಿ
ಸಲ್ಲದಿದು ಬಿಡು ಕನ್ಹಯ್ಯಾ!!
ಗೊಲ್ಲ ಬಾಲ ಗೋಪಾಲಾ
ಇದೇನು ಈ ಹೊಸ ರೂಪ
ಮರೆತೆಯಾ ಮುರಳಿಯನು
ಯಮುನೆ ತಟದ ರಾಸವನು
ಸಲ್ಲದಿದು ಬಿಡು ಕನ್ಹಯ್ಯಾ !
ಅಕ್ರೂರ ಬರುವು ತಿಳಿಯಿತೆ
ಚಣ ನಿನ್ನ ಇರುವು ಮರೆಸಿತೆ
ಅತ್ತ ಗೋವೃಂದ ಗೋವಿಂದ
ಇತ್ತ ಗೋಪಿಯರು ಮುಕುಂದ
ಸಲ್ಲದಿದು ಬಿಡು ಕನ್ಹಯ್ಯಾ !
ರುಕ್ಮಿಣಿಯ ಅಳಲು ತಾಕಿತೆ
ಕರವೀರಪುರ ನಿನ್ನ ಕರೆಯಿತೆ
ಜಾಂಬವತಿಯತ್ತ ಚಿತ್ತ ಜಾರಿತೆ
ಸತ್ಯಭಾಮೆ ಹಟ ತಾ ಸೆಳೆಯಿತೆ
ಸಲ್ಲದಿದು ಬಿಡು ಕನ್ಹಯ್ಯಾ !
ಪಾಂಚಾಲಿ ರೋದನ ಕೇಳಿತೆ
ಲೆತ್ತದಾಟದ ಲೆಕ್ಕ ಚಿತ್ತ ಕದಡಿತೆ
ಗೀತೆ ಸಾಲು ಎಣಿಕೆ ಮರಿಯಿತೆ
ಕುರುಕ್ಷೇತ್ರದಾಟಕೆ ದಿಕ್ಕು ತಪ್ಪಿತೆ
ಸಲ್ಲದಿದು ಬಿಡು ಕನ್ಹಯ್ಯಾ !
ಘನಶ್ಯಾಮ ಏನಿದು ನಿನ್ನಾಟ
ಅರಿಯೆ ನಾ ಗೋಕುಲದ ಗೊಲ್ಲತಿ
ಕಾಣದಿರೆ ಈ ರಾಧೆಯ ಸಂಕಟ
ಹೇಳದಿರೆ ನಾ ಉಡುಪಿ ಶ್ರೀ ಕೃಷ್ಣ
ಸಲ್ಲದಿದು ಬಿಡು ಕನ್ಹಯ್ಯಾ ಸಲ್ಲದಿದು!!






0 Comments