-ಸುನೀತ ಕುಶಾಲನಗರ
ಮರವಾಗಿದ್ದು ಹೇಗೆ?
ಇಷ್ಟೇ ಚಿಕ್ಕ ಕಡ್ಡಿ
ಅದು ಹೇಗೋ ಒಲಿದು
ಹಿತ್ತಲ ಮಣ್ಣಲ್ಲಿ ಬೇರಿಳಿಸಿ
ಆರಂಭ ಶೂರತ್ವ.
ಚಂಚಲ ಕಡ್ಡಿಗೆ
ಬೇರೂರಬೇಕೋ
ಸ್ಥಾನಪಲ್ಲಟವಾಗಬೇಕೋ?
ನೆಲೆಯೂರುವಲ್ಲಿ ದ್ವಂದ್ವ .
ಹೇಗೋ ಮರವಾಗಿ
ತಡವಾದರೂ ಹುಲುಸಾದ
ಹೂವು ಕಾಯಿ
ಕೈಗೆಟುಕದೆ ಇನ್ಯಾರದ್ದೋ
ಅಂಗಳಕ್ಕೆ ಚಾಚಿದೆ.
ಬಿರುಗಾಳಿ ಬಿರುಸಿಗೆ ಅದರ ಕಾಲು
ಹಿಡಿದಿಟ್ಟು ಭದ್ರ ಮಾಡುವ ಮಣ್ಣು.
ಈ ಮಧ್ಯೆ ಅಲ್ಲೇ
ಪುಟಾಣಿ ಕಡ್ಡಿಯೊಂದು
ಕಣ್ಣು ತೆರೆಯಿತು.
ಮಣ್ಣಿಗೆ ಎಳೆಗೊಂಬೆ ಚಿಗುರುವುದ
ನೋಡಿ ಖುಷಿ .
ನೀರು, ಗೊಬ್ಬರದ ಪೋಷಣೆ
ಇದರ ಫಲಗಳೆಲ್ಲವೂ ತನ್ನದೇ
ಬೆಳೆಸುವಲ್ಲಿ ವಾತ್ಸಲ್ಯ ,ಕಾಳಜಿ.
ಅಡ್ಡಡ್ಡ, ಉದ್ದುದ್ದ ಬೆಳೆದ ಕುಡಿಗೆ
ಆಕಾಶ ಮುಟ್ಟುವ ತವಕ.
ಅಕಾಲಿಕ ಮಳೆ ಗಾಳಿಗೆ ತೂರಾಡುವ
ಹೊತ್ತೆಲ್ಲ ಹಿಡಿದಿಡುವ ಕಾಯಕ ಮಣ್ಣಿಗೆ .
ಎಲೆ,ಕಾಯಿಗಳಂತೂ ಕನಸು
ಕೊಟ್ಟಷ್ಟೂ ಅಪೇಕ್ಷಿಸುವ ಮರ
ಹೊರಲಾಗದ ಹೊರೆ
ಚಿವುಟಬೇಕು ಎರಡನ್ನೂ
ಆಯುಧ ತನ್ನದೇ ಆದರೂ
ಅಸಹಾಯಕತೆ.
ಕಡ್ಡಿ ಈ ಪರಿಯ ಮರವಾದದ್ದಾದರೂ ಹೇಗೆ?
ಬೆಂಡೆ ಬಿತ್ತಿದರೆ ಬದನೆ ಹುಟ್ಟುವುದಾ?
ಅಶರೀರವಾಣಿ ಕೇಳಿದಂತಾಯಿತು.






0 Comments