–ವಿರೇಶ ನಾಯಕ
ಪಾರದರ್ಶಕವಾಗಿ ಉತ್ತರಿಸು ಗೆಳೆಯ
ಇದು ಪ್ರತಿಯೊಬ್ಬರ ತುಮುಲವಾ?
ಇಲ್ಲವೇ ನನ್ನೊಬ್ಬನದ್ದೇ ಅಂತರಂಗದ ಜಾಢ್ಯವಾ?
ನನ್ನೊಳಗಿನ ಕಹಿ ನೆನಪುಗಳಿಗೆ
ಗೇಲಿ ಮಾಡುವ ಸಮಯದ ವಿರುದ್ದ
ಹರಿಹಾಯ್ಯುತ್ತೆನೆ
ಬಾಯಾರಿ ಬಕ ಪಕ್ಷಿಯಂತೆ
ಕಾದ ಧರಣಿಗೆ
ಮುಗಿಲೊಂದು ಮಳೆಯ ಪಸೆ
ನೀಡುವ ಮಾನವೀಯತೆ ಕಂಡು
ಕಾಮನಬಿಲ್ಲಿನಷ್ಟೇ ರಂಗಾಗುತ್ತೆನೆ
ನಡು ಬೀದಿಯಲಿ
ಕಣ್ಣು, ಬಾಯಿ ಇಲ್ಲದ ಹಸುಳೆಯ ಮೇಲೆ
ಕತ್ತಲೆ ಅತ್ಯಾಚಾರ ಮಾಡುತ್ತಿರುವಾಗ
ಈ ಅನಾಚಾರವನ್ನು ತಪ್ಪಿಸಲು
ಸುತ್ತಲೂ ಬೊಗಸೆಯಷ್ಟು
ಬೆಳಕಿಗಾಗಿ ಪರಿತಪಿಸುತ್ತೆನೆ
ಹಸಿದ ಹೊಟ್ಟೆಗೆ, ಬಳಲಿ ಬೆಂಡಾದ ದೇಹಕ್ಕೆ
ಸ್ವಲ್ಪ ಹೊತ್ತಷ್ಟೇ ಉರಿದು ಮಾಯವಾಗುವ
ಕಂದೀಲಿನಂಥ ಕಣ್ಣುಗಳಿಗೆ
ಸಾಸುವೆ ಕಾಳಿನಷ್ಟೂ ಆಪ್ತವೆನಿಸದ
ಬಟ್ಟೆ ತೊಟ್ಟ ನಗುವಿನ ಮಧ್ಯೆ
ಶಾಶ್ವತವಾಗಿ ನಗ್ನ ಅಳುವಾಗುತ್ತನೆ
ಹಣ್ಣು-ಹಣ್ಣಾದ ಮುದುಕ
ರೋಗಿಷ್ಟ ಯುವಕ, ಬೀದಿ ಹೆಣ
ಏಲ್ಲವನ್ನು ನೋಡಿಯೂ ಕೂಡ
ಮತ್ತೊಬ್ಬ ಸಿಧ್ದಾರ್ಥ ಬುಧ್ದನಾಗಿ
ಪರಿವರ್ತನೆಯಾಗಲಿಲ್ಲವಲ್ಲ ಎಂಬ ಸಂಕಟದಿಂದ
ಓಡುವ ಕಾಲಕ್ಕೆ ಮರಣ ಶಾಸನವನ್ನು ಕೆತ್ತಿಸಿ
ಸ್ಥಗಿತಗೊಳಿಸುತ್ತೆನೆ
ಅಸಂಖ್ಯಾತವಾಗಿ ಹುಟ್ಟಿದ
ಇಂತಹ ಮಾತುಗಳ ಕೇಳಿ
ಅಪಹಾಸ್ಯ ಮಾಡದಿರು ಗೆಳೆಯ…..
ನನ್ನಲ್ಲಿಯೇ ಹೊಗೆಯಾಡುತ್ತಿರುವ
ಕೆಂಡದಂಥ ಕೆಸರಿನಲ್ಲಿ ಅರಳಿದ
ತಾವರೆಯ ಮೇಲೆ ಸಾಗರದಷ್ಟು ನೋವಿದೆ
ಅಷ್ಟೇ ಹಗೆಯೂ…..






0 Comments