ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಮುನಾರಾಣಿ ಹೊಸ ಕವಿತೆ- ಒಡಲ ಅಂಗಳದ ಗಾಳಿಗೋಪುರ

ಜಮುನಾರಾಣಿ ಹೆಚ್ ಎಸ್ 

ಬದುಕು ಸಾಗುವುದನು
ಅದೇಕೋ ಮರೆತಂತಿದೆ
ಅನ್ನಿಸುತ್ತಿದೆ
ಅಥವಾ
ನಾನೇಕೆ ನಿನ್ನೊಟ್ಟಿಗೆ
ಸಾಗಬೇಕು ಎಂದು ಬಿಗುಮಾನದಿ
ನಿಂತಿಬಿಟ್ಟಿದೆ

ಜೀವಜಂತಿಗೆ ಮಾತ್ರ
ನಿತ್ಯದ ಹೊಯ್ದಾಟ
ಆದರೆ ಬದುಕಿಗೇನು ಗೊತ್ತು?
ಬದುಕು ಬದುಕಲೂ
ಹೆಣಗುತ್ತಿದೆಯೆಂದು..!

ಬದುಕಿನ ಬಂಧನದಲಿ
ಬಂಧಿಯಾಗಿರುವ
ಬದುಕು ಮೂಲೆಯಲೆಲ್ಲೋ
ಅಡಗಿ ಬಿಕ್ಕಿ ಬಿಕ್ಕಿ ಅಳುತ್ತಿದೆ
ತಾನು ಯಾರ ನೋವಿಗೂ
ಕಾರಣವಾಗಬಾರದೆಂದು
ತನ್ನ ನೋವು ಯಾರಿಗೂ
ಕಾಣಬಾರದೆಂದು

ಜಗತ್ತು ನಕ್ಷತ್ರಗಳ ಎಣಿಸುತ್ತಾ
ಹಗಲು ರಾತ್ರಿಯ
ನೆರಳು ಬೆಳಕಿನಾಟದಲಿ
ಮಿಂದೆದ್ದು ಮೀಯುತಿರುವಾಗ
ಎಣಿಕೆ ತಪ್ಪಿದ
ಬದುಕು ಬಾನಿನತ್ತ ಮುಖ ಮಾಡಿ
ಗಹಗಹಿಸಿ ನಗುತ್ತಿದೆ
ಹಲವು ಕಣ್ಣ ಹನಿಗಳು ಜಾರಿ
ಯಾರಿಗೂ ಕಾಣದೆ
ನೆಲ ಸೇರಿದವು
ಮತ್ತೆ ಕೆಲವು ಹಿಂಗಿ ಹೋದವು
ನಾಳೆಗಳಾದರೂ ನನ್ನವಾಗಬಹುದೆನ್ನುವ
ಸ್ವಾರ್ಥದ ಪರಮಾವಧಿಯಲ್ಲಿ

ಅದೆಷ್ಟೋ ಹುತ್ತಗಳು
ಬದುಕನ್ನು ಕಟ್ಟಿ ಹಾಕಲು
ಪ್ರಯತ್ನಿಸುತ್ತಲೇ ಇವೆ ಬಹುದಿನಗಳಿಂದ
ಬದುಕು ಬಸವಳಿದ ಹಾದಿಯಲಿ
ಬದುಕುವುದನೇ ಮರೆತಂತಿದೆ
ಅಥವಾ
ಗೊತ್ತೋ ಗೊತ್ತಿಲ್ಲದೆಯೋ
ಬಯಲಾಟಕ್ಕಿಳಿದು ಬಿಟ್ಟಿದೆ
ಕ್ಷಣಕಾದರೂ ನೆಮ್ಮದಿ
ಕೈಹಿಡಿದು ಬದುಕು ಹಸನಾದೀತೆ?
ಕಂಡ ಕನಸು ಕೈ ಹಿಡಿದೀತೆ?
ಬದುಕಿಗಷ್ಟೇ ಗೊತ್ತು
ತನ್ನ ಒಡಲ ಅಂಗಳದಿ ಕಟ್ಟಿಕೊಂಡ
ಗಾಳಿಗೋಪುರದ ಎತ್ತರ
ಅದನ್ನು ಮೆಟ್ಟಿ ನಿಲ್ಲುವ ಉತ್ತರ..!

‍ಲೇಖಕರು nalike

2 August, 2020

1 Comment

  1. ಮಹೇಶ ಬಾಬು

    ತುಂಬಾ ಅರ್ಥಪೂರ್ಣ ಕವನ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading