ಇಂದು ಶ್ರೀ ಶಿವಕುಮಾರಸ್ವಾಮೀಜಿ ಅವರ ಹುಟ್ಟುಹಬ್ಬ.
ಆ ಪ್ರಯುಕ್ತ ಕವಿತೆ
ಅಕ್ಷರ
ಸುನೀತ / ಕುಶಾಲನಗರ
ಹಣತೆ ಹಚ್ಚಿ ತೈಲವನ್ನೂ ಎರೆದಿರುವಿರಿ
ಈಗ ಬೆಳಕಿನ ಪ್ರಭೆ ಊರಗಲ ಹಬ್ಬುತ್ತಿದೆ
ಎಲ್ಲರ ಕಣ್ಣುಗಳಲ್ಲೂ ಕನಸು ಜಿಗಿಯುತ್ತಿದೆ
ಅನ್ನ ಅಕ್ಷರಗಳೊಳಗೆ ಹೀಗೂ ಪವಾಡಗಳೇ !
ಓಡಲಾಗದಿದ್ದರೆ ನಡೆ, ನಡೆಯಲಾಗದಿದ್ದರೆ ತೆವಳು
ಕ್ರಿಯಾಶೀಲತೆಗೆ ಎಷ್ಟೊಂದು ಆಯಾಮಗಳು !
ಸದ್ದಿಲ್ಲದೆ ಕಲಿಸಿದ ಪಾಠ
ಹಾಗೆ ಎದೆಗಿಳಿದಿದೆ
ಹೊಸ ದಾರಿಯೊಂದು
ಅರಿವಿಲ್ಲದೆಯೇ ತೆರೆದುಕೊಳ್ಳುತ್ತಿದೆ
ಕತ್ತಲು ಕವಿಯುವುದು ಸಹಜ
ಬೆಳಕು ನಂದಬಾರದಷ್ಟೆ
ಅಲೆಗಳ ಅಬ್ಬರವಿಳಿತದ ನಡುವೆಯೂ
ಹುಟ್ಟು ಹಾಕುತ್ತಲೇ ಇರಬೇಕು
ಒಳಗೊಳಗೆ ಮೊಳೆಯುತ್ತಿದೆ
ಹೊಸದೊಂದು ಭಾವ
ನಿಮ್ಮುಸಿರು ನಿಂತಿದೆ
ಕೇಳಲು ಕಷ್ಟವಾಗುತ್ತದೆ
ನೀವು ಬಿಟ್ಟ ಗಾಳಿ ನಮಗೀಗ ಉಸಿರು
ಹಚ್ಚಿಟ್ಟ ಹಣತೆಯನ್ನು ಎದೆಯಿಂದ
ಎದೆಗೆ ದಾಟಿಸುವ ಕೆಲಸದಲ್ಲಿ
ನಾವೀಗ ನಿರತರಾಗಿದ್ದೇವೆ
0 ಪ್ರತಿಕ್ರಿಯೆಗಳು