ಶ್ಯಾಮಲಾ ಮಾಧವ
ನಮ್ಮ ಮುಂಬೈ ಕನ್ನಡಿಗರ ಆಸ್ತಿ ಪೂಜ್ಯ, ಪ್ರಿಯ ಮಾನವ್ಯಕವಿ, ಪಂಪ ಪ್ರಶಸ್ತಿವಿಜೇತ ಮುಂಬೈ ಕನ್ನಡಿಗ ಬಾಬಾಸಾಹೇಬ ಅಪ್ಪಾಸಾಹೇಬ ಸನದಿ. ಅವರು ನಮ್ಮನ್ನಗಲಿದ್ದಾರೆ.
ನಮ್ಮ ಪಾಲಿಗೆ ಸದಾ ಅಮರರು, ಅವರು.
ಸಾಹಿತಿ, ಜೊತೆಗಾರ ವ್ಯಾಸರಾಯ ಬಲ್ಲಾಳರು ಮುಂಬೈ ತೊರೆವಾಗ ಕರ್ನಾಟಕ ಸಂಘದ ಬೀಳ್ಕೊಡುಗೆ ಸಮಾರಂಭದಲ್ಲಿ ಬೇಂದ್ರೆಯವರ ಹಾಡಿನಂತೆ ,
“ಘಮ ಘಮ ಘಮಾಸ್ತಾವ ಮಲ್ಲಿಗೀ
ನೀವು ಹೊರಟಿದ್ದೀಗ ಎಲ್ಲಿಗಿ? ” ಎಂದು ಕೇಳಿದವರು.
“ನಿಮ್ಮ ನೆನಪು
ಹಸಿರಾಗಿ ಉಳೀತಾವು
ನೀವೆಲ್ಲಿದ್ದರೂ ಹೋಗಿ
ನಂಬಿದ ಜನಗಳ
ಅಪಾರ ಎದಿಭಾರ
ನೀವ ನೋಡಿ ತೂಗಿ ”
ಎಂದು ಬಲ್ಲಾಳರಿಗೆ ಅವರು ಅಂದು ಮಾಡಿದ ನಿವೇದನೆಯೇ ಇಂದು ನಮ್ಮದು.
“ಕನ್ನಡ ಜನಮನದ ಸೇವೆಯಲಿ ಹೊರಟವರ
ಮಧುರ ಸ್ಮರಣೆಯ ನಾವು ಜಪ್ಪಿಸುವೆವು ”
ಎಂದು ಅವರು ಅಂದ ಮಾತನ್ನೇ ನಾವಿಂದು ಜಪ್ಪಿಸುತ್ತಿರುವೆವು.
ಮಾನವ್ಯ ಕವಿ ಪ್ರಿಯ ಸನದಿ ಅವರನ್ನು ಕಳಕೊಂಡು ಮುಂಬೈ, ಕನ್ನಡನಾಡು ಇಂದು ಬಡವಾಗಿದೆ.
ಕುಮಟಾಗೆ ಆವರಲ್ಲಿಗೆ ಭೇಟಿಗೆ ಬರುವೆವೆಂದು ಎಷ್ಟು ವರ್ಷಗಳಿಂದ ಹೊರಟಿದ್ದ ನಾವು – ಮಮತಾ, ನಾನು – ಕೊನೆಗೂ ಅಲ್ಲಿಗೆ ತಲುಪಲಿಲ್ಲ. ಎಣಿಸಿದ್ದನ್ನು ಕೂಡಲೇ ಮಾಡಬೇಕೆಂಬ ಪಾಠ ಇದು ಎಷ್ಟನೇ ಬಾರಿಯೋ! ಹೃದಯ ಭಾರವಾಗಿದೆ.
ಹೌದು, ಎಂಥ ಲವಲವಿಕೆ ಅವರ ಮಾತು ಕಥೆ.. ಸನದಿ ಸರ್ ಅಪ್ಪಟ ಕವಿ…