-ಅಜಯ್ ಅಂಗಡಿ
ಕಥಾನಾಯಕ
ಹೊಸ ಪುಟದಲ್ಲಿ
ಹೊಸದೊಂದು ಕಥೆ
ಈಗ ತಾನೆ ಆರಂಭ
ಶುರುವಾತಿನಲ್ಲಿ ಸಮುದ್ರ
ನಡುವೆ ಸುಳಿದು ಹೋಗುವ ಬಯಲು
ಊರ ಮಧ್ಯದ ಮರದ ನೆರಳು
ಬೆಳಕಿನ ಕೋಲು ಬದುಕಿನ ಅಳಲು
ಪಾತ್ರಗಳು ಹಲವು
ಒಂದೊಂದರೊಳಗೂ ನೂರು ಭಾವ
ಕತ್ತಲು ಕರಗಿ ಮೂಡಿದಂತೆ ಬೆಳಗು ಜಾವ
ಸುತ್ತಲೂ ಅಮಾಯಕ ಮುಖವಾಡ
ಹೊದ್ದ ಕ್ರೂರ ಮುಖಗಳು
ಕಥೆಯ ಹಿನ್ನೆಲೆಯಿದು ಹೀಗಿಹುದು
ಕಥಾನಾಯಕ
ಕನಸಿನ ಬೆನ್ನೇರಿದ ನಾವಿಕ
ಸಮುದ್ರದ ಅಲೆಗಳಂತೆ
ಅಪ್ಪಳಿಸಲು ಕಾದ ಮುಖವಾಡಗಳ
ಕಳಚಿ ಬೀಳಿಸುವ ತನಕ
ವಿರಮಿಸದ ಸೈನಿಕ
ಎಲ್ಲ ಮುಗಿದ ಬಳಿಕ
ಸಮುದ್ರದ ದಂಡೆಯ ಮೇಲಿನ ಮರದಲ್ಲಿ
ಕೂತು ಸ್ವತಂತ್ರವಾಗಿ, ಸ್ವಚ್ಛಂದವಾಗಿ
ಇಂಚರವ ಹೊರಡಿಸುವ ಗಾಯಕ
ಅವಮಾನಿಸಿದ ಮುಖವಾಡಗಳು
ಅಭಿಮಾನದ ಮುಖ ತೋರಿಸುವರು ಆಗ
ಕಥೆ ಇಲ್ಲಿಗೇ ಮುಗಿಯದು
ಮುಗಿಯಲೂಬಾರದು
ಮುಗಿದರೂ ಮತ್ತೊಂದು
ಹೊಸ ಕಥೆ ಹುಟ್ಟುವುದು






0 Comments