ವಿಕಾಸ್ ಆರ್ ಮೌರ್ಯ
ಜೀವನ್ ಪ್ರಕಾಶನದ ರಾಜ್ಯಮಟ್ಟದ
ಯುಗಾದಿ ಕಾವ್ಯ ಸ್ಪರ್ಧೆ-2016ರ ಬಹುಮಾನಿತ ಕವಿತೆ
ಘಮ ಘಮ ರಾಗಿ ರೊಟ್ಟಿ
ಉಚ್ಚೆಳ್ ಚಟ್ನಿ
ಜೊತೆಗೆ ಈರುಳಿ ತುಂಡು
ಒಂದು ಮೆಣಸಿನ ಕಾಯಿ
ಗೌರ್ಮೆಂಟ್ ಎಮ್ಮೆಯ ಹಾಲು
ಪ್ರೀತಿ ಬಿಟ್ಟು ಬೇರೇನೂ ಬೆರೆಸಿಲ್ಲ
ಖಡಕ್ ಛಹಾ ಕಾಫಿ ಸವಿದು
ರುಚಿ ನೋಡುವಿರಂತೆ ಒಳ ಬನ್ನಿ
ಇದು ಹೊಲೆಮಾದಿಗರ ಹೋಟೆಲ್
ಅಮ್ಮನ ನೆನೆಸುವ ಮಮತೆ
ಅಪ್ಪನ ನೆನೆಸುವ ಸೇವೆ
ಅಣ್ಣ ತಮ್ಮನ ನೆನೆಸುವ ನಗೆ
ಅಕ್ಕ ತಂಗಿಯರ ನೆನೆಸುವ ಪ್ರೀತಿ
ಬಂಧುತ್ವ ಬಿಟ್ಟು ಮುನಿಸಿನ ಮಾತಿಲ್ಲ
ಹಕ್ಕನ್ನು ಭಿಕ್ಷೆಯೆಂದರೆ ತೆಪ್ಪಗಿರುವುದಿಲ್ಲ
ಅನ್ನ ನೀಡುವ ನಮ್ಮ ಹಕ್ಕಿಗೆ
ಉಂಡು ಬಂಧುತ್ವ ಬೆಸೆಯ ಬನ್ನಿ
ಇದು ಹೊಲೆಮಾದಿಗರ ಹೋಟೆಲ್
ಮನು ಯಾಜ್ಷವಲ್ಕ್ಯರ ಮೀರಿ
ಕಟ್ಟಿದ ಕನಸು
ಶಾಸ್ತ್ರ ಸ್ಮøತಿಗಳ ಮುರಿದು ಬೆಂಕಿಯಿಟ್ಟು
ಉರಿಸಿದ ಒಲೆ
ಸ್ವಾಭಿಮಾನವ ಕುದಿಸಿ ಇಂಗಿಸಿದ ಅನ್ನ
ಘನತೆ ಘನೀಭವಿಸಿದ ಮುದ್ದೆ
ಬುದ್ಧ ಮೈತ್ರಿಯ ಮೈಮರೆತು
ಬೆರೆಸಿದ ಸಾರು
ನಿಮ್ಮ ಹೊಟ್ಟೆ ತುಂಬುವವರೆಗೂ
ತಣ್ಣಗಾಗದ ಈ ಎದೆ
ತಣ್ಣಗಾಗುವಿರಂತೆ ಒಮ್ಮೆ ಒಳ ಬನ್ನಿ
ಇದು ಹೊಲೆಮಾದಿಗರ ಹೋಟೆಲ್
ಸಸ್ಯ ಮಾಂಸವೆಂಬ ಭೇದವಿಲ್ಲ
ಬಾಹ್ಮಣರೇ ಶ್ರೇಷ್ಟರೆಂಬ ಭ್ರಮೆಯಿಲ್ಲ
ಮೇಲು ಕೀಳೆಂಬ ಮಾತಿಲ್ಲ
ಬೆವರ ಸುರಿಸುವವರೇ ಶ್ರೇಷ್ಟರು
ಗುಣದೊಳಧಮರೇ ಕನಿಷ್ಟರು
ತಾರತಮ್ಯ ಬಿತ್ತುವ ಧರ್ಮವ ಧಿಕ್ಕರಿಸಿ
ಮನುಷ್ಯರಾಗಲು ಒಳ ಬನ್ನಿ
ಒಳ ಬಂದಿರಾ, ತಿಂದಿರಾ
ಹೃದಯದಿಂದೊಮ್ಮೆ ನೋಡಿ
ಈಗಿದು ಮನುಜರ ಹೋಟೆಲ್
Entha manavateya saaruva kavite manujara hotel ellavu ellarigu
ಮನುಷ್ಯತ್ವವನ್ನು ಉಸಿರಾಡುವ ಪದ್ಯ
Super sir
Manavateyannu usiragisikonda kavana