ನಾಗರಾಜ್ ಹರಪನಹಳ್ಳಿ
ನಿನ್ನ ತುಟಿಗಳಲ್ಲಿ ಚೆಲ್ಲಿದ ಹೂ ನಗೆ
ನನ್ನ ಬೊಗಸೆ ತುಂಬಿದೆ
ಹಾಗಾಗಿ ನಗು ನನ್ನ ಎದೆ ತುಂಬಿದೆ
ನಿನ್ನ ಕಂಗಳ ಬೆಳಕು ಮಗ್ಗಲಲ್ಲಿದೆ
ಹಾಗಾಗಿ ರಾತ್ರಿಯೂ ಬೆಚ್ಚಗಿದೆ
ಅದನ್ನೇ ಜಗಕೆ ಹಂಚಿದೆ
ಜನ ಸುಖ ನಿದ್ದೆಗೆ ಜಾರಿದರು
ನಾನು ಮಾತ್ರ ನಿನ್ನದೇ ಧ್ಯಾನದಿ ಎಚ್ಚರದಲ್ಲಿರುವೆ
ನೀನು ಮಾತಾಡದೆಯೂ ಆಡಿದ
ಮಾತು ಆಲಿಸಿದೆ
ಅಲ್ಲಿ ಶತಮಾನಗಳ ನೋವು ,ಹತಾಶೆ ಹಂಬಲ, ತಳಮಳ ದೊರೆತವು
ಅವುಗಳನ್ನು ದೇಶಗಳ ಸರಹದ್ದಿನಲಿ
ಹಂಚಿದೆ
ಹಾಗಾಗಿ ಎಲ್ಲ ಕಾಲದೇಶಗಳಲ್ಲೂ
ಅದೇ ತಲ್ಲಣ ಅದೇ ತವಕಗಳು
ಬೆಳೆಯುತ್ತಿವೆ
ನಿನ್ನ ಹೆಜ್ಜೆಯ ಸದ್ದಿಗೆ ಭೂಮಿಯಾಗಿ
ಕಿವಿಗೊಟ್ಟೆ
ಗಜ್ಜೆಯ ಸಪ್ಪಳದ ಜೊತೆ
ಕನಸುಗಳು ಸಿಕ್ಕವು
ಅವನ್ನೇ ಜಗಕೆ ಹಂಚಿದೆ , ಹಾಗಾಗಿ ಜನ ಕನಸು ಕಾಣುತ್ತಿದ್ದಾರೆ
ನಾನು ಮಾತ್ರ ವಿರಹಿಯಾಗಿದ್ದೇನೆ
ನಿನ್ನ ಬಿಂಕ ಬಳುಕು ಉತ್ಸಾಹವ
ಕಡ ತಂದು ಹಂಚಿದೆ
ಹಾಗಾಗಿ ನಗರದ ತುಂಬಾ ನಿನ್ನದೇ ಮಾತು
ನಾನು ಮಾತ್ರ ಒಬ್ಬಂಟಿಯಾಗಿ ದಂಡೆಯಲಿ ಅಲೆಯುತ್ತಿದ್ದೇನೆ
Touchy …sir