ಸುಬ್ರಾಯ ಮತ್ತೀಹಳ್ಳಿ
ಅಡವಿಯಲ್ಲಿ ಹುಲಿಗಳಿಲ್ಲ ಈಗ ಊರು ಸೇರಿವೆ.
ʻʻಹಸುಗಳಾ ಕಾಯಬೇಕುʼʼ ಎಂದು ಸಾರಿವೆ
ಹಾಡೇ ಹಗಲು ದಾರಿಯಲ್ಲಿ ಕೇಕೆ ಹಾಕಿವೆ.
ಏಕೋ ಏನೋ ಒಮ್ಮಿಂದೊಮ್ಮೆ ಪ್ರೀತಿ ಉಕ್ಕಿದೆ.
ಹಸುವ ಕಂಡು ಅಪ್ಪಿಕೊಂಡು ಕರುಣೆ ಬೀರಿದೆ.
ಹದ್ದು ತೋಳ ನರಿಗಳು ಸದ್ದಿಲ್ಲದೆ ಸೇರಿವೆ.
ನಮ್ಮ ನಿಷ್ಠೆ ಹುಲಿಯ ಕಡೆಗೆ ಸಾರಿ ಹೇಳಿವೆ.
ಹಸುಗಳೆಲ್ಲ ಹಿಂಡು ಹಿಂಡು ಹಿಂದೆ ಹೊರಟಿವೆ
ಹುಲಿಯ ಹಾಲಿನಾಸೆಗೆ ಜೊಲ್ಲು ಸುರಿಸಿವೆ.
ಹಸುವೂ ಹುಲಿಯೂ ಒಂದಾಗಿ ಭವ್ಯ ಕೋಟೆ ಕಟ್ಟಿವೆ.
ಮತ್ತೆ ನಾಡ ಕಾಡು ಮಾಡಲು ಪಣ ತೊಡುತಿವೆ.
ಹಸಿವೆಯಿಂದ ಹಸುವ ಬಿಡಿಸಿ ಹಸಿರ ಹುಚ್ಚ ಅವಕೆ ಹಿಡಿಸಿ
ಮಂದೆಯಲ್ಲಿ ಒಂದಾಗಲು ಅಮಲು ಬೀರಿವೆ.
ʻʻನಾವು ಉಚ್ಛ ಶ್ರೇಣಿಗಳು. ತ್ರಾಣಿಗಳು
ಪ್ರಾಣಿಗಳೆಲ್ಲ ಮೇಲೇರುವ ಏಣಿಗಳುʼʼ
ಮನಮೋಹಕ ಘೋಷಣೆ, ಹಸುವೇ….
ಎಚ್ಚರ ಕಟ್ಟೆಚ್ಚರ ಲಕ್ಷವಿರಲಿ….. ತುಸುವೇ.
0 ಪ್ರತಿಕ್ರಿಯೆಗಳು