ಶಿವಾನಂದ ತಗಡೂರು
ಕೂಲಿನಾಲಿ ಮಾಡಿ ಮಕ್ಕಳನ್ನು ಸಾಕಿ ಸಲುಹಿ, ಎದೆಮಟ್ಟ ಬೆಳೆದಾಗ ಇನ್ನು ಅವ ದುಡಿಯುತ್ತಾನೆ, ಒಂದಿಷ್ಟು ನೆಮ್ಮದಿಯಾಗಿರಬಹದು ಎಂದು ಅದೆಷ್ಟು ಕುಟುಂಬಗಳು ಕನಸು ಕಂಡು ಪರಿತಪಿಸುತ್ತವೊ ಲೆಕ್ಕವಿಲ್ಲ.
ಕೂಲಿ, ಮಧ್ಯಮ ವರ್ಗದ ಬಹು ಜನರ ಮನೆಯ ವಾಸ್ತವ ಸ್ಥಿತಿ ಇದು. ದುಡಿಮೆ ಪ್ರಾರಂಭಿಸಿದ ಮಗ
ಅವಘಡದಲ್ಲಿ ಮೃತಪಟ್ಟಾಗ ಹೆತ್ತವರಿಗೆ ಹೇಗಾಗಿರಬೇಡ?
ಇಂಥದ್ದೊಂದು ಘಟನೆ ನನಗೂ ಮನಕಲಕಿತು. ವಿಚಾರಕ್ಕೆ ಬರೋಣ.
ಚಾಮರಾಜನಗರ ಜಿಲ್ಲೆ ಯಳಂದೂರು ತಾಲ್ಲೂಕು ಮಾಂಬಳ್ಳಿ ಗ್ರಾಮದಲ್ಲಿ ಕೂಲಿನಾಲಿ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ ಕುಟುಂಬದ ಕಥೆಯಿದು.
ದುಡಿಯುವ ಅಪ್ಪನೂ ಸತ್ತ ಮೇಲೆ ತಾಯಿ ರಾಜಮ್ಮನ ಮೇಲೆ ಬದುಕಿನ ಹೊರೆ ಹೆಚ್ಚಾಯಿತು.
ಇಬ್ಬರು ಮಕ್ಕಳಲ್ಲಿ ಸೆಲ್ವರಾಜ್ ಹೇಗೊ ಪೋಟೊಗ್ರಫಿ ಕಲಿತು, ಹೊಟ್ಟೆ ತುಂಬಿಸಿಕೊಳ್ಳಲು ಫಸ್ಟ್ ನ್ಯೂಸ್ ಕ್ಯಾಮರಾಮೆನ್ ಆಗಿ ಸುದ್ದಿಮನೆಗೆ ಕಾಲಿರಿಸಿದ. ಇನ್ನೇನು ಬದುಕಿನ ಕಷ್ಟ ತೀರಲಿದೆ ಎಂದು ಸಮಾಧಾನದಿಂದ ಇರುವ ಆ ಕುಟುಂಬಕ್ಕೆ ಬೆಂಗಳೂರಿನಲ್ಲಿ ಸೆಲ್ವರಾಜ್ ಸಾವು ಬರಸಿಡಿಲಿನಂತೆ ಬಂದೆರಗಿದಾಗ ಹೆತ್ತ ತಾಯಿಗೆ ಹೇಗಾಗಿರಬೇಡ.
2021 ಫೆಬ್ರವರಿ 26.
ತನ್ನ ಸಹೋದರ ಮನೋಹರನ ಹುಟ್ಟು ಹಬ್ಬ. ಸೋದರನಿಗೆ ಸೆಲ್ವರಾಜ್ ಪೋನ್ ಮಾಡಿ ವಿಶ್ ಮಾಡಿದಾಗ ಮನೆ ತುಂಬಾ ಸಂಭ್ರಮ. ಅದು ಹೆಚ್ಚು ಹೊತ್ತು ಇರಲಿಲ್ಲ. ಮತ್ತೆ ಪೋನ್ ಬಂದಾಗ ಸೆಲ್ವರಾಜ್ ಬದುಕುಳಿದಿರಲಿಲ್ಲ
ಫಸ್ಟ್ ನ್ಯೂಸ್ ಕ್ಯಾಮರಾಮೆನ್ ಸೆಲ್ವರಾಜ್ ಮೃತಪಟ್ಟ ಸಂದರ್ಭದಲ್ಲಿ ಸಂತಾಪ ಸೂಚಿಸಿ ಸುಮ್ಮನಾಗಿದ್ದೆವು.
ವಿಧಾನಸೌಧದ ಬಳಿ ಕ್ಯಾಮರಾಮೆನ್ ಗಳು ಭೇಟಿ ಮಾಡಿ ಸೆಲ್ವರಾಜ್ ಅವರ ಕುಟುಂಬಕ್ಕೆ ನೆರವು ಕೊಡಿಸಿ ಎಂದರು.
ಮನಸ್ಸು ತಡೆಯಲಿಲ್ಲ. ಚಾಮರಾಜನಗರಕ್ಕೆ ಭೇಟಿ ನೀಡಿ ಪತ್ರಕರ್ತರ ಭವನದಲ್ಲಿ ಅವರಿಗೆ ಸಾಂತ್ವನ ಹೇಳಿ ಕೆಯುಡಬ್ಲ್ಯೂಜೆ ಆಪತ್ಬಾಂಧವ ನಿಧಿಯಿಂದ ಆ ತಾಯಿಗೆ 19 ಸಾವಿರ ನೆರವಿನ ಚೆಕ್ ನೀಡಿದಾಗ
ಅವರ ಕುಟುಂಬ ಕಣ್ಣೀರಾಯಿತು. ಹೊಲ ಜಮೀನು ಇದೆಯಾ ಎಂದು ಕೇಳಿದಾಗ ಏನೂ ಇಲ್ಲ ಸಾ, ಕೂಲಿ ಮಾಡಿ ಮಕ್ಕಳ ಸಾಕಿದೆ ಎಂದು ಮತ್ತೆ ದುಃಖಿತರಾದರು.
ಮತ್ತೆ ಮಾತು ಮುಂದುವರಿಸಲಿಲ್ಲ.
ಚಾಮರಾಜನಗರ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ದೇವರಾಜ್ ಮತ್ತು ಮಂಜುನಾಥ್ ಅವರು ಪೋನ್ ಮಾಡಿ ಸರ್ ಸೆಲ್ವರಾಜ್ ಕುಟುಂಬ ತೀವ್ರ ಸಂಕಷ್ಟದಲ್ಲಿದೆ ಏನಾದರೂ ಸಹಾಯ ಮಾಡಿಸಿಕೊಡಿ ಎಂದು ಹಲವಾರು ಬಾರಿ ಮನವಿ ಮಾಡಿದ್ದರು.
ಆಗ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರ ಬಳಿ ಅರ್ಜಿ ಹಿಡಿದು ಸೆಲ್ವರಾಜ್ ಕುಟುಂಬ ತೀವ್ರ ಸಂಕಷ್ಟದಲ್ಲಿದೆ ಸಹಾಯ ಮಾಡಿ ಸರ್ ಎಂದು ಕೇಳಿಕೊಂಡಾಗ, ಮರು ಮಾತನಾಡದೆ ಆ ಕುಟುಂಬಕ್ಕೆ
5 ಲಕ್ಷ ಪರಿಹಾರ ಮಂಜೂರು ಮಾಡಿದರು. ಇದೆಲ್ಲಾ ಆಗಿ ವರ್ಷ ಕಳೆದಿದೆ.
ತಾಂತ್ರಿಕ ಕಾರಣದಿಂದ ಪರಿಹಾರ ವಿಳಂಬವಾಗಿತ್ತು. ಎಲ್ಲವನ್ನೂ ಸರಿಪಡಿಸಿದ ಬಳಿಕ ಅವರ ಅಕೌಂಟ್ ಗೆ ಹಣ ಹೋಗುವ ವ್ಯವಸ್ಥೆ ಆಯಿತು.
ಈಗ ಅಕೌಂಟ್ ಗೆ ಹಣ ಬಂದಿರುವ ವಿಷಯವನ್ನು ಬ್ಯಾಂಕ್ ಗೆ ಹೋಗಿ ಖಚಿತ ಪಡಿಸಿಕೊಂಡ ಸೆಲ್ವರಾಜ್ ಕುಟುಂಬ ಪೋನ್ ಮಾಡಿ ಧನ್ಯವಾದ ತಿಳಿಸಿದಾಗ ನನಗೂ ಸಮಾಧಾನ. ಆ ಕುಟುಂಬಕ್ಕೆ ದೇವರು ಒಳ್ಳೆಯದು ಮಾಡಲಿ.
0 ಪ್ರತಿಕ್ರಿಯೆಗಳು