ಸುಜಾತ ಲಕ್ಷ್ಮೀಪುರ
ಉರಿಯದ ಒಲೆಯ ಮುಂದೆ ಕುಳಿತು
ಹೊಗೆ ಕುಡಿದು ಕುಡಿದು ಕೆಮ್ಮಿ
ಶ್ವಾಸಕೋಶದ ತುಂಬಾ ಹೊಗೆ ತುಂಬಿಕೊಂಡು
ಕಣ್ಣುಗಳಿಗೆ ಬೂದಿ ಹಾರಿಸಿದ ಕಿಡಿ
ಮೈಕೈಯೆಲ್ಲಾ ಮಸಿ, ಕಸಿವಿಸಿ
ಚಿತ್ತ ಹುತ್ತಗಟ್ಟದೆಯೇ ಕೆತ್ತಿತೇನೋ!?
ಹಸಿವಿಗನ್ನದ ಚಿತ್ರ ಕಣ್ತುಂಬಿಕೊಳ್ಳುತ್ತ
ಹುತ್ತಗಟ್ಟಬೇಕು.
ಎಡೆಬಿಡದೆ ರಚ್ಚೆಹಿಡಿವ ಕಂದ
ತಳಸೇರಿದ ಬಾವಿಯೊಳಗಿನ ನೀರು
ಮೂಲೆಯಲಿ ಕುಟಾಣಿ ಸದ್ದು
ತಟ್ಟೆ ಹಿಡಿದು ಊಟ ಬೇಡುವ ಕೈಗಳು
ಬಡಿಸಿ, ಹಾಲೂಡಿ, ಬಳಿದು ಉಣ್ಣೊದೇ
ನಿತ್ಯ ದಿಗ್ವಿಜಯ.
ಸೋಲಿಲ್ಲ ಗೆಲುವಿಲ್ಲ. ಪ್ರಾಣ ತೆಗೆಯೋಲ್ಲ
ಬದುಕಿಸಿ ಬದುಕುವ ಪಾತ್ರ.
ಹೊಲದ ಸುತ್ತ ಬೇಲಿ ಪುಂಡದನಗಳ ಕಾಟ
ಸೆರಗು ಜಾರದಂತೆ ಬಿಗಿದು
ಮೊಣಕಾಲು ಕಾಣದಂತೆ ನಿಗಾ ಮಡಗಿ
ಬಗ್ಗಿ ನಾಟಿ ಮಾಡುವಾಗ ಹದ್ದಿನ ನೋಟಕೆ
ಸಿಕ್ಕಿಯೂ ಸಿಕ್ಕದಂತೆ ಉಳಿದರೂ
ಹಿತ್ತಲಿನಲಿ ಸರಿದ ಹಾವಿನ ಪೊರೆ.
ನೆತ್ತಿ ಮೇಲೆ ಸುಡುವ ಸೂರ್ಯ
ಗಾಳಿ ಬೀಸಲೂ ಬೇಸರಿಸುವ ಜವರಾಯ
ಎಷ್ಟು ಕುಡಿದರೂ ದಾಹ ತೀರದ ಹರೆಯ
ಮಡಿಲ ಮೇಲಾಡುವ ಕಂದನ ನಗೆಗೆ
ಉದರದೊಳಗಾಡುವ ಮೃಗಕೆ
ಕಂಡು ಕಾಣದ್ಹಂಗಿದ್ದು ಕೈಲಾಸ ಕಾಣಬೇಕು
ಇದ್ದಲ್ಲೇ ಇರುವಂತೆಯೇ ಚಿತ್ತ ಹುತ್ತಗಟ್ಟಬೇಕು.
0 ಪ್ರತಿಕ್ರಿಯೆಗಳು