‘
ಶಶಿಕಲಾ ವಸ್ತ್ರದ
ಅದೊಂದು ದಿನ ಗೆಳತಿ ಅಂದಳು, ‘ಕಲ್ಲಾದ ಅಹಲ್ಯೆಯ
ಮೈಯ ನೇವರಿಸಿ ಜೀವಸೆಲೆಯೊಡೆಸಿ ಬದುಕನುದ್ಧರಿಸಿದನು, ಶ್ರೀ ರಾಮ, ಕರುಣಾಸಾಗರ, ಸದ್ಗುಣದಾಗರ, ಉಘೇ ಉಘೇ ಎಂದಿತು ಜನಸಾಗರ, ಜಗಕೆಲ್ಲಾ
ಹೆಮ್ಮೆಯೋ ಹೆಮ್ಮೆ,
ಆದರಿನ್ನೊಮ್ಮೆ, ಇದೇ ಮಹಾತುಮಾ, ಉಕ್ಕುವ ಜೀವಗಳನು ಹೊತ್ತ, ಗರ್ಭಸ್ಥೆ
ಮಂದಸ್ಮಿತೆ, ಜೀವನೋತ್ಸಾಹದಲಿ ವಿಜೃಂಭಿಸುವ ಸತಿ-ಸೀತೆಯನ್ನು ಕಾಡುಪಾಲಾಗಿಸಿ, ಕೈ ತೊಳೆದನೀ ಸೀತಾರಾಮ.
‘ಕರುಣಾಳು ರಾಘವನಲಿ ತಪ್ಪಿಲ್ಲ’ ಎಂದತ್ತಳು ಮಾತೆ ಸೀತೆ, ಅಲ್ಲವೇನೇ?
ಈ ರಾಮಣ್ಣರೇ ಹೀಗೆ ಕಣೇ,
ನಿಜಸತಿಗೆ ಕಲ್ಲಾಗುವ ಇವರು
ಪರಸತಿಗೆ ಮಾತ್ರ ಬೆಲ್ಲವಾಗುತ್ತಾರೆ. ಹೌದಲ್ಲವೇನೇ?’ ಎಂದಳು ಗೆಳತಿ ಮತ್ತೆ,
ಏನು ಹೇಳಲಿ ನಾನು? ಹೇಗೆ
ಹೇಳಲಿ ಹೇಳಿ?
ಎದುರಿಗೇ ಕುಳಿತಿದ್ದ ಗಂಡ!!
ನನಗೊಂದು ಮುಖ, ತನ್ನ ಕಛೇರಿ ಕನ್ಯೆಗೊಂದು ಮುಖ
ಹೊತ್ತ ಗಂಡ-ಭೇರುಂಡ!!!!
ನಾನೇನು ಹೇಳುವೆನೋ ಎಂದು, ನನ್ನೆಡೆಗೇ ನೋಡುತ್ತಾ,
ಪುಸಲಾವಣೆಯ ನಗೆನಕ್ಕಾ,
ಮಹಾಪಕ್ಕಾ!!!!!
ನನಗೋ ಎದೆ ಒಳಗೇ ಪುಕಪುಕಾ!!!!
ಹಸಿರೆಲೆಯೂ ಇಲ್ಲದ ಬಯಲು
ಸೀಮೆಯ ನನಗೆ, ಇವ
ಕಾಡಿಗಟ್ಟುವ ಭಯವೂ ಇಲ್ಲ
ನೋಡಿ? ಹೀಗಾಗಿ, ‘ನೂರಕ್ಕೆ ನೂರು ನಿನ್ನ ಮಾತು ನಿಜ ಕಣೇ’ ಎಂದೆ, ಅವನೆಡೆಗೆ
ನೋಡದೇ ಧೀರಳಾಗಿ!!!!!!!!!!
0 ಪ್ರತಿಕ್ರಿಯೆಗಳು