ಸತೀಶ ಕುಲಕರ್ಣಿ
ಇತ್ತೀಚೆಗೆ ಸಾಕಷ್ಟು ಚರ್ಚೆಗೊಳಗಾಗುತ್ತಿರು ಕವಿ ಹೆಬಸೂರ ರಂಜಾನ ಅವರ ‘ಮಂಜಿನೊಳಗಿನ ಕೆಂಡ’ ಹಾಯ್ಕು ಕವನ ಸಂಕಲನದ ಕುರಿತು ಆಪ್ತ ವಿಚಾರ ಸಂಕಿರಣ ಹಾವೇರಿಯಲ್ಲಿ ನಡೆಯಿತು.
ಹೊಸಮಠ, ಸಾಹಿತಿ ಕಲಾವಿದರ ಬಳಗ ಹಾಗೂ ಶಿಗ್ಗಾವಿಯ ಉತ್ತರ ಸಾಹಿತ್ಯ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ನಡೆದ ವಿಚಾರಣ ಸಂಕಿರಣವನ್ನು ನಾನು ಉದ್ಘಾಟಿಸಿದೆ.
ಹಲವು ಅರ್ಥಗಳನ್ನು ಪಡೆಯುವ ಜಪಾನಿ ಭಾಷೆಯ ಹಾಯ್ಕು ಚುಟುಕು ಕಾವ್ಯ ಪ್ರಕಾರ ನಮ್ಮ ಅನುಭವ ಮತ್ತು ಕಲ್ಪನಾ ಶಕ್ತಿಯನ್ನು ವಿಸ್ತರಿಸುವ ಶಕ್ತಿಯುಳ್ಳದ್ದು. ಜಪಾನಿನ ಹಾಯ್ಕು ಕಾವ್ಯಕ್ಕೆ ಛಂದಸ್ಸಿನ ನಿರ್ಬಂಧಗಳಿದ್ದರೂ, ಆ ಕಟ್ಟಳೆಗಳನ್ನು ಮುರಿದು ಜಗತ್ತಿನ ಎಲ್ಲ ಭಾಷೆಗಳಲ್ಲಿ ಮನ್ನಣೆ ಪಡೆದಿದೆ. ರಂಜಾನ ಹೆಬಸೂರರ ಮಂಜಿನೊಳಗಿನ ಕೆಂಡ ಇದನ್ನು ಸಮರ್ಥವಾಗಿ ಪ್ರಯೋಗಿಸಿದೆ. ಮಂಜು ಮತ್ತು ಕೆಂಡ ವೈರುಧ್ಯಗಳಾದರು, ವೈರುಧ್ಯಗಳನ್ನು ದಾಟುವುದೇ ಕಾವ್ಯದ ಗುಣ ಎಂದು ಹೇಳಿದೆ.
ಸಾನಿಧ್ಯವನ್ನು ವಹಿಸಿದ್ದ ಬಸವಶಾಂತಲಿಂಗ ಸ್ವಾಮಿಗಳು ರಂಜಾನರ ಕಾವ್ಯ ಸಮಾಜ ಜೀವನದ ಎಲ್ಲ ಸ್ಥಿತ್ಯಂತರಗಳನ್ನು ದಕ್ಕಿಸಿಕೊಂಡು ರಚಿತವಾದ ವಿಚಾರ ಕೆಂಡಗಳ ಕಾವ್ಯ. ಒಂದು ಪುಸ್ತಕವನ್ನು ಹಲವರು ಓದಿದಾಗ ಅನೇಕ ಅರ್ಥಗಳು ದಕ್ಕಿ ನಮ್ಮ ಕಾವ್ಯಾನುಭವವನ್ನು ವಿಸ್ತರಿಸುವ ಈ ವಿಚಾರ ಸಂಕಿರಣವಾಗಿದೆ. ಮಂತ್ರದಲ್ಲಿ ಶಬ್ದವಿಲ್ಲ, ಶಬ್ದಗಳೇ ಮಂತ್ರವಾಗುವ ಕಾವ್ಯವನ್ನು ರಂಜಾನ ರಚಿಸಿದ್ದರೆ. ಓದುವುದಕ್ಕಿಂತ ಕೇಳುವುದೇ ನಮ್ಮದಾಗಬೇಕು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಪ್ರೊ. ಮಾರುತಿ ಶಿಡ್ಲಾಪೂರ, ಹಾಯ್ಕುಗಳೆಂದರೆ ನಮ್ಮ ಶರಣರ ವಚನಗಳಿದ್ದಂತೆ. ಓದುತ್ತ ಹೋದಂತೆ ಹಲವು ಅರ್ಥ-ಅನುಭವಗಳನ್ನು ನೀಡುವ ಕಾವ್ಯ. ನಾಲ್ಕಾರು ಸಾಲುಗಳ ರಂಜಾನ ಒಂದೊಂದು ಪದ್ಯಗಳು ಮಹಾಕಾವ್ಯ, ಕಾದಂಬರಿಯಾಗುವಷ್ಟು ಸದೃಢವಾಗಿವೆ ಎಂದರು.
ಇನ್ನೋರ್ವ ಅತಿಥಿ ಪತ್ರಕರ್ತ ಮಾಲತೇಶ ಅಂಗೂರವರು ಇಂದಿನ ದಿನಮಾನಗಳ ಎಲ್ಲ ಸಾಮಾಜಿಕ ರಾಜಕೀಯ ಸ್ಥಿತಿಗಳನ್ನು ಜೀರ್ಣಿಸಿಕೊಂಡ ರಂಜಾನಾ ಹೆಬಸೂರರ ಹಾಯ್ಕು ಸಂಕಲನ ನಮ್ಮ ಜಿಲ್ಲೆಯಲ್ಲಿ ಹೊಸ ಪ್ರಯೋಗಕ್ಕೆ ಮತ್ತು ಪರಂಪರೆಗೆ ಚಾಲನೆ ನೀಡಿದೆ ಎಂದರು.
ಈ ಸಂದರ್ಭದಲ್ಲಿ ಕವಿ ರಂಜಾನ ಹೆಬಸೂರರನ್ನು ಮತ್ತು ಇತ್ತೀಚೆಗೆ ಕಿತ್ತೂರ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತೆ ರಾಜೇಶ್ವರಿ ರವಿ ಸಾರಂಗಮಠರನ್ನು ಎಲ್ಲ ಸಂಘಟನೆಗಳ ಪರವಾಗಿ ಸನ್ಮಾನಿಸಲಾಯಿತು.
ಸನ್ಮಾನಕ್ಕೆ ಉತ್ತರಿಸಿದ ಕವಿ ರಂಜಾನ ಅವರು ನಾನು ಕಂಡು ಕೊಂಡ ಸತ್ಯಗಳಿಗೆ ಕಾವ್ಯ ಮುಖೇನ ಉತ್ತರಗಳನ್ನು ಕಂಡು ಕೊಂಡಿರುವೆ. ಕಾವ್ಯ ವರ್ತಮಾನದ ಧ್ವನಿಯಾಗಬೇಕು ಮತ್ತು ಮನುಷ್ಯನ ಪರವಾಗಿ ಇರಬೇಕೆಂಬುದೇ ನನ್ನ ಉದ್ದೇಶ ಎಂದರು.
ವಿಚಾರ ಸಂಕಿರಣದಲ್ಲಿ ‘ಮಂಜಿನೊಳಗಿನ ಕೆಂಡ’ ಸಂಕಲನ ಕುರಿತು ಹಾವೇರಿ ಜಿಲ್ಲೆಯ ಪ್ರತಿಭಾವಂತ ಲೇಖಕರುಗಳಾದ ಜೀವರಾಜ ಛತ್ರದ, ಲಿಂಗರಾಜ ಸೊಟ್ಟಪ್ಪನವರ, ಕಾಂತೇಶ ಅಂಬಿಗೇರ, ಪರಿಮಳಾ ಜೈನ, ಕವಿತಾ ಸಾರಂಗಮಠ, ಡಾ. ಅಂಬಿಕಾ ಹಂಚಾಟೆ, ಎಸ್.ವ್ಹಿ. ಕುಲಕರ್ಣಿ, ಜಿ.ಎಂ. ಓಂಕಾರಣ್ಣನವರ, ವಾಗೀಶ ಹೂಗಾರ, ಮಹಾದೇವ ಕರಿಯಣ್ಣನವರ ಮುಂತಾದವರು ಮಾತನಾಡಿದರು.
0 ಪ್ರತಿಕ್ರಿಯೆಗಳು