ಎಂ ಎಂ ಪ್ರಕಾಶ್
ಹಿಂದೆ ಅಗಾಧ
ಮುಂದೆ ವಿಶಾಲ
ನಡುವೆ ಬದುಕು
ಇದು ಜಗದ ನಕ್ಷೆ
ಇದನ್ನು ನಂಬಿದವ ನಾನು.
ಇದು ಸತ್ಯ ಕೂಡ.
ಒಮ್ಮೆ ಹಿಂದಿರುಗಿ ನೋಡಿದಾಗ, ಸಾಧಕರು ಎಲ್ಲವನ್ನು ಮಾಡಿಟ್ಟು ಚರಿತ್ರೆಯಾಗಿಸಿದ್ದಾರೆ. ಅದರ ಗುಣಾತ್ಮಕ ಅಂಶಗಳಿಂದ, ಸ್ಪೂರ್ತಿಯಿಂದ, ಕೆಲವೊಮ್ಮೆ ಮುರಿದು ಕಟ್ಟಬೇಕಿರುವುದು ಮುಂದಿರುವ ವಿಶಾಲವಾದ ಬಯಲಿನಲ್ಲಿ. ಅಲ್ಲಿ ಭವಿಷ್ಯದ ಕನಸುಗಳನ್ನ ನನಸಾಗಿಸುವ ಬಗ್ಗೆ ಕೃಷಿ ಮಾಡಬೇಕು. ಈ ಅನುಭವವಾಗಿದ್ದು, ಬೆಂಗಳೂರಿನ ಹನುಮಂತನಗರದಲ್ಲಿರುವ ರಾಮಾಂಜನೇಯ ಗುಡ್ಡದ ಹಿನ್ನಲೆಯನ್ನು ಸಾಕ್ಷ್ಯಚಿತ್ರದ ಮೂಲಕ ದಾಖಲಿಸುವಾಗ. ಗುಡ್ಡ, ಬಂಡೆ, ಅ.ನ.ಸು, ಬಿ.ಕೆ.ಎಸ್ ವರ್ಮ ಹೀಗೆ ಬಾಲ್ಯದ ನೆನಪುಗಳನ್ನು ಕೆದಕಿದಾಗ ಗೋಚರವಾದ ಸಂಗತಿಗಳು ಅನನ್ಯವೆನಿಸಿದವು.
ಪ್ರಕೃತಿಯ ಸಹಜತೆ, ಮಾನವನ ಮುಗ್ಧತೆ, ಪ್ರಾಮಾಣಿಕತೆ, ಕಲಾತ್ಮಕತೆ ಇವೆಲ್ಲವೂ ಕಲೆಯ ಮೂಲಕ ಜನತೆಯ ಮುಂದೆ ಅರಳಿದ ಸಮಯವದು. ಕಲಾವಿದನೊಂದಿಗೆ ಜನಸಮೂಹವೂ ಕಲಾಕೃತಿ ರಚನೆಯಲ್ಲಿ ಪಾಲ್ಗೊಂಡ ರೀತಿ ನಂಬಲಸಾಧ್ಯ. ಮುಗ್ಧ ಅಭಿವ್ಯಕ್ತಿಯ ಮೂಲಕ ಇಡೀ ಗುಡ್ಡವೇ ಕಲಾ ಚೈತನ್ಯದಿಂದ ಕೂಡಿತ್ತು, ಬಯಲು ಪ್ರದರ್ಶನಾಲಯವಾಗಿತ್ತು. ಅದನ್ನು ವೀಕ್ಷಿಸಲು ಜನಸಾಗರ ಸೇರುತ್ತಿತ್ತು. (1968-1985) ಮುಂದೆ, ಈ ಬಂಡೆಯ ಮೇಲಿನ ಕಲಾಭಿವ್ಯಕ್ತಿಗಳನ್ನು ಆಧುನಿಕತೆ, ಅಭಿವೃದ್ಧಿಯ ಹೆಸರಿನಲ್ಲಿ ಸಿಡಿಮದ್ದಿನ ಮೂಲಕ ಛಿದ್ರವಾಗಿಸಿದಾಗ ಮನಸ್ಸಿಗೆ ಆಘಾತವಾಗಿತ್ತು. ಅಸಹಾಯಕ ಸ್ಥಿತಿ ಮನೆಮಾಡಿತ್ತು. ಆದರೆ ಮನದಲ್ಲಿ ಮೂಡಿದ ಬಾಲ್ಯದ ಹಸಿರು ಮಾತ್ರ ಮಾಸದೆ ಶಾಶ್ವತವಾಗಿತ್ತು. ಆ ಹಸಿರನ್ನು ಉಸಿರಾಗಿಸುವ ಸಣ್ಣ ಪ್ರಯತ್ನವೇ ‘ಒಂದು ಗುಡ್ಡದ ಕಥೆ’ ಸಾಕ್ಷ್ಯಚಿತ್ರ.
ಅರ್ಪಣೆ: ಡಾ.ಬಿ.ಕೆ.ಎಸ್.ವರ್ಮ
ಪರಿಕಲ್ಪನೆ- ಛಾಯಾಗ್ರಹಣ- ಸಂಕಲನ: ಅನೂಪ ಸಿಂಹ
ಸಂಗೀತ, ಧ್ವನಿ ಸಂಸ್ಕರಣೆ: ನಚಿಕೇತ ಶರ್ಮ
ಇಂಗ್ಲಿಷ್ ಸಬ್ ಟೈಟಲ್ಸ್: ಕೆ. ವಿನೋದ್ ಕುಮಾರ್
ಕೃತಜ್ಞತೆಗಳು: ಶರತ್ ರಾಯ್ಸದ್, ಕೆ.ಎಸ್. ರಾಜರಾಂ, ನರಸಿಂಹ ಮೂರ್ತಿ ಹಾಗೂ ಹನುಮಂತನಗರ ಬಿಂಬ
ರಚನೆ- ನಿರ್ದೇಶನ: ಎ.ಎಂ.ಪ್ರಕಾಶ್
0 ಪ್ರತಿಕ್ರಿಯೆಗಳು