ಕಾಡುವ ಕವಿತೆ
ವಿನಯಾ ನಾಯಕ್
ಕವಿತೆ ಕೆಲವೊಮ್ಮೆ
ಕಾಡಿ ಬೇಡಿ ಹುಟ್ಟಿಬಿಡುತ್ತದೆ
ಪ್ರಾಸ, ವ್ಯಾಕರಣ
ಲಯಲಾಸ್ಯದ ಹಂಗೇ ಬೇಡವೆನ್ನುತ್ತದೆ.
ಸಹಾಯ ಮಾಡಲಾಗದ ಪ್ರಾಯಶ್ಚಿತ್ತಕ್ಕೆ
ಪ್ರೀತಿಸಿದವರ ನೋಯಿಸಿದ್ದಕ್ಕೆ
ಪರ ಊರೊಂದು ನಮ್ಮೂರಾಗಿ ಬದಲಾದ ಸೋಜಿಗಕ್ಕೆ
ಕಳೆದುಕೊಂಡದ್ದೇನೆಂದು ಅರ್ಥವಾಗದೆ ಆಗುವ ಹತಾಶೆಗೆ
ಸಾಕಿದ ನಾಯಿ ಮುಪ್ಪಾಯಿತೆಂದು ಬೆದರಿಸುವ ಸಾವಿಗೆ
ಅಂದದ ಕೃಷ್ಣನ ಪಟ ನೀಡುವ ಸಾಂತ್ವನಕ್ಕೆ
ಜಗದ ಮೂಲೆ ಮೂಲೆಯಲ್ಲೂ
ಕವಿತೆ ಹುಟ್ಟುತ್ತದೆ
ಅಳುವಾಗಿ, ನಗುವಾಗಿ
ಅಕ್ಷರವಾಗಿ, ಮೌನವಾಗಿ
ಓರೆ ಕೋರೆ, ನೋವು ನಲಿವು, ತಪ್ಪು ಒಪ್ಪುಗಳೆಲ್ಲ
ಭಾಷೆಯೊಂದರ ಆಸರೆ ಪಡೆದು
ಅಕ್ಷರವಾದ ಕವಿತೆಗಳು
ಪುಸ್ತಕದಲ್ಲಿ ಉಳಿದುಕೊಳುತ್ತವೆ.
ಮತ್ತೊಂದಿಷ್ಟು ಹಳೆ ಟ್ರಂಕುಗಳಲ್ಲಿ
ಕೆಲವು ಹಾಡಾಗುತ್ತವೆ
ಭಾಷೆ, ಸದ್ದುಗಳ ಹಂಗಿಲ್ಲದ
ಕವಿತೆಗಳು ಹುಟ್ಟಿದ ಮನದಲ್ಲೇ
ಆಸರೆಯಾಗಿ ಉಳಿದುಕೊಳ್ಳುತ್ತವೆ.
ಒಳ್ಳೆಯದ್ದೋ, ಕೆಟ್ಟದ್ದೋ
ನನ್ನ ಕವಿತೆ ನಾನೇ ಬರೆದುಕೊಳ್ಳಬೇಕು
ಹಗುರಾಗಬೇಕು.
ಇಷ್ಟ ವೋ, ಕಷ್ಟ ವೋ, ಒಳ್ಳೆಯ ದೋ ಕೆಟ್ಟ ದ್ದೋ ನಮ್ಮ ಕವಿತೆ ನಾವೇ ಬರೆದು ಕೊಳ್ಳಬೇಕು, ಹಗುರಾಗಬೇಕು.
ಕವಿತೆ ಇಷ್ಟ ವಾಯಿತು
ಚೆಂದಿದೆ ಹಗುರವಾಗಿಸುವ ಕವಿತೆ