ಹಮ್ಮಿಯ ಹೂವಿನ ಚೆಬ್ಬೆ…

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ

ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ.ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ ಇಷ್ಟು ದಿನ ನಮಗೆ ‘ಮೀನುಪೇಟೆಯ ತಿರುವಿನಲ್ಲಿ’ ಸಿಗುತ್ತಿದ್ದರು. ಇನ್ನು ಮುಂದೆ ಪ್ರತಿ ಶುಕ್ರವಾರ ‘ಅವಧಿ’ಯ ‘ನನ್ನ ಶಾಲ್ಮಲೆ’ ಅಂಕಣದಲ್ಲಿ ಸಿಗಲಿದ್ದಾರೆ.

ಸುದರ್ಶನ್ ಕೆಫೆಯ ಬಾಗಿಲಲ್ಲಿ ಚಿಕ್ಕ ಹೂವಿನ ಚೆಬ್ಬೆ (ಬುಟ್ಟಿ)ಯೊಳಗೆ ಹಸಿರು ಬಾಳೆಯೆಲೆಯ ತುಂಡುಗಳನ್ನಿಟ್ಟು ಅದರ ಮೇಲೆ ಮುಟ್ಟಿದರೆಲ್ಲಿ ನೋಯುವುದೋ ಎಂಬಂತಹ ಒಂದಷ್ಟು ಗಮಗಮ ಜಾಜಿ, ಮಲ್ಲಿಗೆ, ಪಚ್ಚೆಕದಿರು, ಕನಕಾಂಬರ, ರಂಜಲ, ಉಪ್ಪಳಿ, ಮುತ್ತು ಮಲ್ಲಿಗೆ, ಗೆಂಟಿಗೆ, ಅಬ್ಬಲಿಗೆ ಮುಂತಾದ ಹೂವಿನ ಜಡೆಗಳನ್ನೂ, ಮಾಲೆಯನ್ನೂ ಇಟ್ಟು ಕಳೆದ ಸುಮಾರು ಹತ್ತು ವರ್ಷದಿಂದ “ಹೂವಿನ ಹಮ್ಮಿ” ಕುಳಿತುಕೊಳ್ಳುತ್ತಿದ್ದಾಳೆ.

ಹಿಂದೆಲ್ಲ ಅಂಕೋಲೆಯ ಬಸ್ಟ್ಯಾಂಡು, ಮೀನು ಪೇಟೆಯ ಮುರ್ಕಿ, ಜೈಹಿಂದ್ ಹೋಟೆಲ್ಲಿನ ಪಕ್ಕ ಹೀಗೆ ಎಲ್ಲೆಲ್ಲಿ ಹೆಣ್ಮಕ್ಕಳು ಹೆಚ್ಚಾಗಿ ಕಾಣಸಿಗುವರೋ ಅಲ್ಲೆಲ್ಲ ಹೂಬುಟ್ಟಿಯನ್ನು ತಳಗೈಯಲ್ಲಿ ಎತ್ತರಿಸಿ ಹಿಡಿದು “ಹೂ ಕೊಡ್ಲಾ ಮಗಾ?” ಎಂದು ಕೇಳುತ್ತ ತಿರುಗುತ್ತಿದ್ದ ಹಮ್ಮಿ ಇತ್ತೀಚಿನ ವರ್ಷಗಳಲ್ಲಿ ವಯಸ್ಸಾದ ಕಾರಣಕ್ಕೂ ಆಯ್ತು, ಹಾಗೇ ಮಂಡಿನೋವಿನ ಕಾರಣಕ್ಕೂ ಆಯ್ತು, ತಿರುಗಾಡಲಾಗದೇ ತುಸು ಹೆಚ್ಚು ಹಣ್ಣಾಗಿದ್ದಾಳೆ.

ಇಪ್ಪತ್ತೈದು ವರ್ಷಗಳ ಹಿಂದೆ ಅಪ್ಪನ ಜೊತೆ ಅಪರೂಪಕ್ಕೊಮ್ಮೆ ಉದ್ದನ್ನ ಎರಡು ಜಡೆ ಇಳಿಬಿಟ್ಟುಕೊಂಡು ಪೇಟೆಗೆ ಬರುತ್ತಿದ್ದ ನನ್ನನ್ನು ದೂರದಿಂದಲೇ ಗುರ್ತಿಸಿ ಹೂವು ಮುಡಿಸಲು ಓಡಿಬರುತ್ತಿದ್ದ ಅವಳು ಈಗ ಹತ್ತಿರ ಹೋದರೂ ನನ್ನ ಪರಿಚಯ ಮಾಡಳು. “ನಾನೆ ಹಮ್ಮೀ!! ಹೊನ್ನಪ್ಪನಾಯ್ಕರ ಮಗ್ಳು” ಎಂದರೆ ಹಣೆಹಣೆ ಬಡಿದು ತನ್ನ ಮಂದವಾಗುತ್ತಿರೋ ಕಣ್ಣುಗಳನ್ನ ಶಪಿಸಿಕೊಳ್ಳುತ್ತ, “ಕಡ್ಡಿಯ ಹಾಗಿದ್ದೆ ಮಗಾ ನೀನು. ಈಗ ದಪ್ಪಗೆ ಗುಂಡುಗುಂಡಗೆ ಆಗಿ ಅದ್ಕೆ ನಂಗೆ ಗುತ್ತಾಗುಲ್ವೇ” ಎಂದು ಕವಳಕೆಂಪಿನ ನಾಲ್ಕು ಹಲ್ಲಿನಲ್ಲಿ ಪಕಪಕನೆ ನಗುತ್ತ ನನ್ನನ್ನು ಗುರ್ತಿಸದ ಇನ್ನೊಂದು ಕಾರಣವನ್ನು ಹೇಳುತ್ತಾಳೆ. 

“ನಲವತ್ತು ವರ್ಷಕ್ಕೇ ಗಂಡ ಸತ್ತು ಮುಂಡೆಯಾಗಿಬಿಟ್ಟೆ. ನಿನ್ನಪ್ಪ ಹೊನ್ನಪ್ಪಣ್ಣ ಊರ ಪಟೇಲ. ನಮ್ಮಂತಹ ಎಲ್ಲ ಬಡ ವಿಧವೆಯರ ವಿಧವಾ ವೇತನ ಮಂಜೂರಿ ಮಾಡಿಸಿ ಪೈಸೆ ಲಾಭವನ್ನೂ ಹಿಡಿಯದೇ ಹರಕು ಅಂಗಿ ಮುರುಕು ಸೈಕಲ್ಲಿನಲ್ಲೇ ಸತ್ತ. ಅವರ ಜೀವ ತಣ್ಣಗಿರಲಿ. ಇಕಾ ಈ ಗಮಗುಡುವ ಉಪ್ಪಳಿ ಹೂವಿನ ಮಾಲೆ ಅವರ ಪಟಕ್ಕೆ ಏರಿಸು” ಎನ್ನುತ್ತ ಬಾಳೆಎಲೆ ಹರಿದು ಹೂ ಸುತ್ತಿ ನನ್ನ ಕೈಗಿಡುತ್ತಾಳೆ ಹಮ್ಮಿ.

ಸುಮ್ಮನೆ ನಿಟ್ಟುಸಿರನ್ನೂ, ಕಣ್ಣಲ್ಲೆರಡು ಬಿಂದು ನೀರನ್ನೂ ತುಂಬಿಕೊಂಡು ಅದುವರೆಗೂ ಅವಳನ್ನೇ ನಿಟ್ಟಿಸುತ್ತಿದ್ದ ನಾನು ಅವಳ ಕ್ಷೇಮ ಸಮಾಚಾರ ವಿಚಾರಿಸಿ ಅವಳು ಕೈಯಲ್ಲಿ ಹಿಡಿಯಲು ಸುತರಾಂ ಒಪ್ಪದ ಐವತ್ತು ರೂಪಾಯಿಯ ನೋಟೊಂದನ್ನು ಬುಟ್ಟಿಯಲ್ಲಿಟ್ಟು ಹೊರಡಲನುವಾಗುತ್ತಿದ್ದಂತೆಯೇ “ನಿಲ್ಲು.. ನಿಲ್ಲು.. ಹೆಣ್ಮಕ್ಕಳು ಬರೀ ತಲೇಲಿ ಇರಬಾರದು ಸಣ್ಣ ಅಬ್ಬಲಿ ಹೂವಿನ ಮಾಲೆ ಕೊಡುವೆ ಇರು” ಎನ್ನುತ್ತ ಮೊಳದುದ್ದದ ಅಬ್ಬಲಿಗೆ ಮಾಲೆಯನ್ನು ಮೊಂಡು ಬ್ಲೇಡಿನಲ್ಲಿ ಕತ್ತರಿಸಿ ಕೈಗಿಟ್ಟು ಆಗಿಂದಾಗ್ಲೇ ಮುಡಿ ಅಂತ ಜೋರೇ ಮಾಡುತ್ತಾಳೆ.

ನಡುಪೇಟೆಯ ತಾವಿನಲ್ಲೇ ಹೂ ಮುಡಿಸುವ, ಮುಡಿಯುವ ಪ್ರಕ್ರಿಯೆಗಳು ಆರಾಮಾಗಿ ಜರುಗುತ್ತ ಪಕ್ಕದ ಕಿರಾಣಿ ಅಂಗಡಿಗೆ ಬಂದ ಜಿ ಸಿ ಕಾಲೇಜಿನ ಮೇಡಮ್ಮು, ಬೇಕರಿಗೆ ಬಂದ ಶೀಳ್ಯದ ಸಣ್ತಮ್ಮ, ತನ್ನ ಎಮ್ಮೆಗಾಗಿ ದಾಂಬು ಕೊಳ್ಳಲು ಬಂದ ಹಾಲಕ್ಕಿ ವಾಸು, ಅಂಗಡಿ ಶೆಟ್ರು ಎಲ್ಲರೂ ಒಂದು ಸಣ್ಣ ಮಂದಹಾಸದೊಂದಿಗೆ ನಮ್ಮತ್ತಲೇ ನೋಡುತ್ತ ಆ ಖುಷಿಯಲ್ಲಿ ಭಾಗಿಗಳಾಗುತ್ತಾರೆ. ನಾನೂ ನಗುತ್ತ ಅವರನ್ನೊಮ್ಮೆ ನೋಡಿದರೆ “ಅಕ್ಕೋರೇ… ಹೂ ಮುಡಿಸೇ ಬಿಟ್ಳೇನು ಹಮ್ಮಿ..?” ಅಂತ ತಾವೂ ಒಂದು ಮಾತು ಹೊತಾಕುತ್ತಾರೆ. 

ಈಗಿನ ಈ ಗದ್ದಲ ಗೌಜಿಯ ಸರ್ವಾಂತರ‌್ಯಾಮೀ ಪೇಟೆಯಲ್ಲಿ ದೀಪಾವಳಿ, ಶ್ರಾವಣ, ಕಾರ್ತಿಕದ ಸಂದರ್ಭ ಬಿಟ್ರೆ ಹೂವಿಗಾಗಿಯೇ ಅಂತ ಹೇಳಿ ಈಗಿನ ಜನರೇಷನ್ನಿನ ಯಾರೆಂದರೆ ಯಾರೂ  ಬರುವುದಿಲ್ಲ ಅನ್ನೋ ಸತ್ಯ ಗೊತ್ತಿದೆ ಹಮ್ಮಿಗೆ.

ಹೂವಿಗಾಗಿ ಬರದೇ ತನ್ನ ಮಗಳ ಗ್ಯಾದರಿಂಗಿಗಾಗಿ ಶಾಲೆಯವರು ತರಲು ಹೇಳಿದ ಇದ್ದುದರಲ್ಲೇ ಸೋವಿ ಮತ್ತು ಚೆಂದದ ಕೆಂಪು ಫ್ರಿಲ್ಲಿನ ಅಂಗಿ ಸಿಗ್ತದೆಯೋ ಇಲ್ಲವೋ ಎಂಬ ಆತಂಕದೊಂದಿಗೆ ಸುವೇಗದಲ್ಲಿ ಬಟ್ಟೆಯಂಗಡಿ ಕಡೆ ಧಾವಿಸುವ ವಾಸಂತಿ, ಪಕ್ಕದ ಹಲ್ಲಿನ ಆಸ್ಪತ್ರೆಗೆ ನೋವು ತಡೆಯಲಾರದೇ ಸೆರಗು ಹೊದೆದು ಅದರ ಒಂದು ಚುಂಗಿನಲ್ಲಿ ಬಾಯಿಮುಚ್ಚಿಕೊಂಡು ಬಂದ ಕಮಲಕ್ಕ, ಎಲ್ಲ ಸಾಮಾನು ಕೊಂಡು ಮುಗಿದ ಮೇಲೆ ಕತ್ತಲೆಯಾಯ್ತು ಬೇಗ  ಹೋಗಬೇಕು ಮನೆಗೆ ಎಂಬ ಕ್ಷೀಣ ಭಯವನ್ನಿಟ್ಟುಕೊಂಡು ಸಾಹೇಬರ ಮೊಟ್ಟೆಯಂಗಡಿಗೆ ಬಂದು ಅರ್ಜಂಟಿನಲ್ಲಿ ಅರ್ಧ ಡಜನ್ ಮೊಟ್ಟೆಗಾಗಿ ಅವಸರಿಸುತ್ತಿರುವ ಪಾರತಕ್ಕ ಈ ಮುಂತಾದ ಎಲ್ಲರೂ ಹಮ್ಮಿಯ ಮುಂದಿಂದಲೇ ಹಾಯುತ್ತಾರೆ.

ಅವರೆಲ್ಲರ ಧಾವಂತದ ಅರಿವಿದೆ ಹಮ್ಮಿಗೆ. ಎಲ್ಲ ಸಾಮಾನು ಕೊಂಡಾದ ಮೇಲೆ ಬಾಕಿ ಸ್ವಲ್ಪ ಚಿಲ್ಲರೆ ಕೈಯಲ್ಲಿ ಉಳಿದರೆ ಮಾತ್ರ ಹೂವಿನ ವಿಚಾರ. ಮನಸ್ಸು ಖುಷಿ, ನೆಮ್ಮದಿಯಿಂದಿದ್ರೆ ಮಾತ್ರ ಹೂವಿನ ವಿಚಾರ. ದೇವರು ದಿಂಡರು ಎಂಬ ಭಯಭಕ್ತಿ ಇದ್ದರೆ ಮಾತ್ರ ಹೂವಿನ ವಿಚಾರ. ಅಂತಲೂ ಪಕ್ಕಾ ಗೊತ್ತಿದೆ ಹಮ್ಮಿಗೆ ಹಾಗಾಗಿ ಅವಳು ಅವಸರಿಸುವುದಿಲ್ಲ.

ಸಾವಧಾನದಿಂದಲೇ “ವಸ್ತ್ರ ತಕಣುಕೆ ಬಂದ್ರಿದ್ರೇನು ಅಮ್ಮಾ..? ಆರಾಮಾಗಿ ಹೋಗಿ ತಕಂಡು ಬನ್ನಿ ನಾ ಇಲ್ಲೇ ಕುಂತಿರ್ತೆ. ಹೋಗುವಾಗ ಒಂದ್ ಜಡೆ ಅಬ್ಬಲಿ ಹೂ ತಕಂಡೋಗುದು ಮರೀಬೇಡಿ…” ಎಂತಲೋ, “ತಂಗೀ… ಸಣ್ತಮ್ಮಗೆ ತಿಂಡಿ ತಕಣುಕೆ ಬೇಕರಿಗೆ ಬಂದೆಯಾ ಮಗಾ..? ಹೋಗು ಹೋಗು ತಕೊಂಡು ಬಾ. ಕಡೆಗೆ ಹೋಗುವಾಗ ಒಂದು ಮಲ್ಲಿಗೆ ಜಡೆ ಕೊಡ್ತಿ ಮುಡ್ಕಂಡು ಹೋಗು” ಅನ್ನುತ್ತಲೋ… ಗೋಪಾಲಣ್ಣನ ಹೊಟೇಲಿಗೆ ಜಿಲೇಬಿ ಕೊಳ್ಳಲು ಬಂದ ಹೊಸದಾಗಿ ಮದುವೆಯಾದ ಬೋಳೆಯ ಗೋಪುಗೆ “ತಮಾ ಆರಾಮಿದ್ದೀಯೇನು? ಈ ಅಜ್ಜಿಗೆ ನಿನ್ ಮದ್ವೆಗೆ ಕರೀದೇ ಹೋದೇ ನೀನು..? ಹೆಂಡ್ತಿ ಹೆಂಗೀದು..? ಒಂದಿನ ಕರ್ಕಂಡು ಬಾರೋ… ಮುದಕಿ ನೋಡ್ಕಂಡು ಸಾಯ್ತೆ. ಇಕಾ ಈ ಹೂ ತಕಂಡೋಗಿ ಮುಡ್ಸು ಅವಳಿಗೆ…”ಅನ್ನುತ್ತ  ಎಲ್ಲರನ್ನೂ ಒಳಗೊಳ್ಳುತ್ತಾಳೆ ಹಮ್ಮಿ.

ಸಿಡುಕು ಮುಖದ, ಹ್ಯಾಪ್ ಮೋರೆಯ, ಚಿಂತಾಕ್ರಾಂತ ಮನಸ್ಸಿನ ಎಲ್ಲ ಮಾನವ ಮಾನವಿಯರಿಗೂ ಕ್ಷಣಕಾಲವಾದರೂ ನೆಮ್ಮದಿ ಮತ್ತು ಹಸನ್ಮುಖತೆಯನ್ನು ದಯಪಾಲಿಸುವ ಶಕ್ತಿ ಹಮ್ಮಿ ಮತ್ತವಳ ಹೂವುಗಳಿಗೆ ಇದೆ. ಅವಳು ಕೊಟ್ಟ ಹೂ ಮಾಲೆ ಮುಡಿದು ಟೂ ವ್ಹೀಲರ್ ಮೇಲೆ ತಂಗಾಳಿಗೆ ಇನಿಯನ ನೆನಪಿಸಿಕೊಳ್ಳುತ್ತ ಹಿಂದೆ ಹೂ ಹಾರಾಡುವ ಅನುಭೂತಿಯನ್ನು ಮೈ ತುಂಬಿಕೊಂಡು, ಮನದುಂಬಿಕೊಂಡು ಸಣ್ಣಗೆ ಹಾಡು ಗುನುಗುತ್ತ ಹೊರಟ ಹೆಣ್ಮಕ್ಕಳ ಚೆಂದವನ್ನೋ… ಬೈಕ್‌ನ ಮುಂದಿನ ಪಾಕೆಟ್‌ನಲ್ಲಿ ಹೊಸ ಹೆಂಡತಿಗಾಗಿ ಹಮ್ಮಿ ಕೊಟ್ಟ ಮಲ್ಲಿಗೆ ಜಡೆಯನ್ನು ಬಾರಿ ಬಾರಿ ಮುಟ್ಟುತ್ತ ಹೊರಟ ಹೊಸಪೋರನನ್ನೋ ನೋಡಬೇಕೆಂದರೆ ನೀವು ಗಂಗಾವಳಿ ದಂಡೆಯ ನಮ್ಮ ಅಂಕೋಲೆಗೊಮ್ಮೆ ಸುಮ್ಮನೆ ಬಂದು ಹೋಗಬೇಕು.

ಊರಲ್ಲಿ ಮದುವೆ ಮುಂಜಿ ಮುಂತಾಗಿ ಆಗಿ ತಾವು ಹೂ ಮುಡಿಯುವ ಸಂದರ್ಭ ಬಂದದ್ದೇ ಹೌದಾದರೆ ಮಾಸಿದ, ಹಳತಾದ, ಹೂಗಳನ್ನಷ್ಟೇ ಬೇರೆಯಾಗಿಸಿ ಕಟ್ಟಿ ಮುಡಿಯುವ, ಹೊಸ ಹೂವು ಮಾರಾಟಕ್ಕೆ ಬಳಕೆಯಾದರೆ ಹೊತ್ತಿನ ಗಂಜಿಗಾದೀತು ಎಂದು ವಿಚಾರಮಾಡುವ, ಊಟ, ತಿಂಡಿ, ಶಿಕ್ಷಣ ಎಲ್ಲದಕ್ಕೂ ಲೋಕಲ್ ಹೂವಿನ ವ್ಯಾಪಾರವನ್ನೇ ಅವಲಂಬಿಸಿರುವ ಹಮ್ಮಿಯ ತರಹದ ಎಲ್ಲ ಜನರನ್ನೊಳಗೊಂಡ “ಪಡ್ತಿ” ಎಂಬ ಜನಪದವಿದೆ ಅಂಕೋಲೆಯಲ್ಲಿ.

ತಾಲೂಕಿನ ಹೊಸಗದ್ದೆ, ಬೇಳ, ಹನುಮಟ್ಟೆ ಮುಂತಾದ ಕಡೆ ನಾಕಾರು ಮನೆ ಇರುವ ಇವರ ಜನಾಂಗದ ಹೆಚ್ಚು ಮನೆಗಳಿರುವುದು “ಪೂಜಗೇರಿ” ಎಂಬ ಊರಿನಲ್ಲಿ. ಹೂವಿನ ಜೊತೆ ಎಲೆ-ಅಡಿಕೆ, ಬಾಳೆಹಣ್ಣು ಮಾರುವ ಸಣ್ಣ ಗೂಡಂಡಿಗಳನ್ನೂ “ಪಡ್ತೀರು” ಹೊಂದಿದ್ದಾರೆ. ಈಗಿನ ಹುಡುಗರು ರಿಕ್ಷಾ ಹೊಡೆಯುತ್ತಾರೆ.

ತಾಲೂಕಿನ ಜನ ಖಾಯಿಸ್ ಮಾಡುವ ಸ್ಥಳೀಯ ಊರುಕೇರಿಗಳಲ್ಲಿ ಬೆಳೆಯುವ ಹೂವು ಇವರ ಆದ್ಯತೆ ಮತ್ತು ಗುರಿ. ದೂರದ ಲಾರಿಗಳಿಂದ, ಗೂಡ್ಸ ಗಾಡಿಗಳಿಂದ ಬಂದು ರಸ್ತೆಯ ಯಾವುದೋ ಗುತ್ತಿನಲ್ಲಿ ನಸುಕಿನಲ್ಲಿ ಬಿದ್ದು ಗೋಣಿತಾಟಿನಲ್ಲಿ ಇದ್ದು ಎತ್ತಿಕೊಂಡೊಯ್ಯುವ ಯಾರಿಗಾಗಿಯೋ ಕಾಯುವ ಎಲ್ಲಿಂದಲೋ ಬರುವ ಹೂಗಳ ಕಡೆ ಅಪ್ಪಿತಪ್ಪಿಯೂ ದೃಷ್ಟಿ ಹಾಯಿಸರು ಇವರು.

ಕುಲದೇವ ವೆಂಕಟ್ರಮಣ, ಮಹಮ್ಮಾಯೆ, ಶಾಂತಾದುರ್ಗಾ, ಸ್ಥಳೀಯ ಚೌಡಿ, ಮಾಸ್ತಿ, ಜಟಗ, ಬೀರ, ಹೊನ್ನರಾಕ ಹೀಗೆ ಎಲ್ಲ ಅಂದರೆ ಎಲ್ಲ ದೇವಾನುದೇವತೆಯರು ಕೂಡ ಸ್ಥಳೀಯ ಹೂವಿಗೆ, ಗಮತಕ್ಕೆ ಮಾರು ಹೋದ ಹಾಗೆ ಟ್ರಕ್ಕುಗಳಲ್ಲಿ ಎಲ್ಲಿಂದಲೋ ಬರುವ ಸೇವಂತಿ, ಕಾಕಡಾ, ಡೇರೆ ಮುಂತಾದ ಅಷ್ಟೇನೂ ಸುವಾಸನೆಯಿಲ್ಲದ ಅರೆಜೀವ ಹೂಗಳಿಗೆ ಮರುಳಾಗಿಬಿಡುವುದಿಲ್ಲ.

ಹಾಗಾಗಿ ಸೊನಗಾರ ರಜನಿ, ಆಗೇರ ಸುಮನಾ, ಹಾಲಕ್ಕಿ ಸೋಮಿ, ನಾಡೋರ ಭವಾನಿ ಕೂಡ ಮಣಗಟ್ಟಲೆ ಕಂಗೊಳಿಸುವ ಸೇವಂತಿ, ಕಾಕಡಾ ಅಂಗಡಿಯನ್ನು ದಾಟಿ ಬಂದು ಪಡ್ತಿಗಳ ಚೆಬ್ಬೆಯನ್ನು ಎಡತಾಕುತ್ತಾರೆ. ಬಗ್ಗಿ ಬಗ್ಗಿ “ಜಾಜಿ ಹೂಂಗು ಈದೇನೇ?” “ದುಂಡು ಮಲ್ಲಿಗೆ ಜಡೆ ತರಲಾ ಇಂದೆ?” ಎನ್ನುತ್ತ ಇದ್ದುದರಲ್ಲೇ ಹೊಂದಿಕೆಯಾದ ಹೂವನ್ನು ಹಬ್ಬದ ದಿನಗಳಲ್ಲಿ ತುಟ್ಟಿಯಾದರೂ ದೇವರಿಗೊಂದಿಷ್ಟು ತಮಗೊಂದಿಷ್ಟು ಒಯ್ಯುತ್ತಾರೆ.

ಸದಾ ಹೂವಿನ ಸಂಸರ್ಗದಲ್ಲೇ ಇರುವ ಹಮ್ಮಿ ಮತ್ತು ಅವಳಂತ ಹೆಂಗಸರು ಸುತ್ತಲಿನ ಚೌಕದಳ್ಳಿಯ ಊರುಗಳ ಯಾರ‌್ಯಾರ ಮನೆಯಲ್ಲಿ ಯಾವ್ಯಾವ ಹೂಗಿಡದ ಓಳಿ ಮಾಡಿದ್ದಾರೆ ಎಂದು ಗುರ್ತಿಟ್ಟುಕೊಂಡು ನಸುಕಿಗೇ ಮನೆಮನೆಗಳಿಗೆ ಎಡತಾಕುತ್ತಾರೆ. ಈ ಕ್ರಿಯೆ ನೂರಾರು ವರ್ಷದಿಂದ ಅನೂಚಾನವಾಗಿ ನಡೆದುಕೊಂಡು ಬಂದಿದೆ. ಇದಲ್ಲದೆ ನುಗ್ಗೇಕಾಯಿ ಆಗುವ ದಿನಮಾನದಲ್ಲಿ ಮನೆಮನೆಗೆ ಹೋಗಿ ನುಗ್ಗೇಕಾಯಿ ತಂದು ಪೇಟೆಯಲ್ಲಿ ಗುತ್ತಿಗೆಗೆ ಮಾರುತ್ತಾರೆ..

ಹಾಗೇ ಊರೂರಿಗೆ ಹೋಗಿ ಸಾಕಿದವರ ಮನೆಯಿಂದ ನಾಟಿಕೋಳಿ ತಂದೂ ಒಂದು ಹುಂಜ ಒಂದು ಹೇಂಟೆ ಜೋಡಿಯನ್ನು ಕಾಲುಕಟ್ಟಿ ರಸ್ತೆಯ ಬದಿಗಿಟ್ಟು ವ್ಯಾಪಾರ ಮಾಡುತ್ತಾರೆ. ಇವರು ಹೋಗುವ ಊರಿನ ಎಲ್ಲ ಮನೆಯ ನಾಯಿಕುನ್ನಿಗಳೂ ಈ ಹಮ್ಮಿ ಗುಲಾಬಿ, ಸರೋಜಾ, ಸುಮಿತ್ರಾರನ್ನು ಬಾ ಆಡಿಸುತ್ತ ಅವ್ವಗಳಿರಾ ಅಕ್ಕಗಳಿರಾ ಎಂದು ಒಪ್ಪಿಕೊಂಡುಬಿಟ್ಟಿವೆ.

ಅಕಸ್ಮಾತ್ ಒಂದು ಬೊಗಳುವಿಕೆ ಎಲ್ಲಿಂದಾದರೂ ಹಾರಿ ಬಂತೋ, ಅಂದಿನ ಕಾಲದ “ಯಾಕೋ ಕರಿಯ..? ಇಂದೇನು ಹೊಸ ನಮೂನಿ ನಿಂದು..? ನಾನೋ ತಿಮ್ಮಿ. ಗುತ್ತಾಗುದಿಲ್ವೇನೋ ನಿಂಗೆ?” ಎಂಬ ಜಬರ್ದಸ್ತಿಯ ಧ್ವನಿ ಇಂದಿನ ಕಾಲಕ್ಕೆ “ಯಾಕೋ ಟೈಗರಪ್ಪಾ ಇಂದೇನೋ ಗೌಜಿ… ನಾನೋ ಸುಮಿತ್ರಾ ಹೂ ಕೊಯ್ಯುಕೆ ಬಂದಿ ಗುತ್ತಾಗುದಿಲ್ವೇನೋ ನಿಂಗೆ?” ಎಂದು ಪರಿವರ್ತನೆಯಾಗಿದೆ ಅಷ್ಟೇ ಬಿಟ್ರೆ ನಡೆಯುವ ಕ್ರಿಯೆಯಲ್ಲೇನೂ ಹುಂಡು ಬದಲಾವಣೆಯಿಲ್ಲ.

ಹಾಗಾಗಿ ‌ಹಾರಿ ಬಂದ  ಬೊಗಳಿನ ಏರುಧ್ವನಿ ಅಂತರ್ಧಾನವಾಗಿ ಅದಾಗಲೇ ಕುಂಯ್ ಕುಂಯ್ ಸಂಗೀತ ಹೂವಿನ ಮನೆಯ ಅಂಗಳದಲ್ಲಿ ಆರಂಭವಾಗಿಬಿಟ್ಟಿರುತ್ತದೆ. ಹಾಗೂ ಹೂವಿಗಾಗಿ ಬಂದ ಹೆಣ್ಣುಗಳ ನೈಲಾನ್ ಚೀಲದಲ್ಲಿ ಈ ಕುಂಯ್ ಕುಂಯ್‌ಗಳಿಗಾಗಿಯೇ ತರುವ ಬ್ರೆಡ್ಡು, ಟೋಸ್ಟಿನ ಚೂರುಗಳು ಅಂಗಳದಲ್ಲಿ ಬಿದ್ದು ಕರಿಯ, ಟಾಮಿಯಾದಿಯಾಗಿ ಸರ್ವ ಶ್ವಾನ ಕುಲವನ್ನು ಸಂತೃಪ್ತಿಪಡಿಸುತ್ತವೆ.

ಅನೂಚಾನವಾಗಿ ಅಂದಿನಿಂದ ಇಂದಿನವರೆಗೂ ಪಡ್ತಿಗಳು ಎರಡ್ಹೊತ್ತಿನ ಊಟ, ಮಕ್ಕಳ ಶಾಲೆ, ಎರಡು ಪಕ್ಕೆಯ ಚಿಕ್ಕ ಮನೆ ಹೀಗೆ ಬದುಕಿನ ಸೀಮಿತ ಪರಿಧಿಯಲ್ಲಿ ಹೂವಿನೊಂದಿಗೆ ಇದ್ದುದರಲ್ಲೇ ಅಚ್ಚುಕಟ್ಟಾಗಿದ್ದಾರೆ. ಸರದಿ ಸಾಲುಗಳ ಹಬ್ಬದ ತಿಂಗಳುಗಳಾದ ಜುಲೈ ಅಗಸ್ಟ್ ತಿಂಗಳ ಆರಂಭದಲ್ಲಿ ನಸುಕಿನ ಮೂರಕ್ಕೇ ಅವರಿಗೆ ಬೆಳಗಾಗಿ ಬಿಡುತ್ತದೆ. ಸುತ್ತಲಿನ ಬೇಣ, ಹಕ್ಕಲ ಇದ್ದವರು ನೆಟ್ಟು ಬೆಳೆಸಿದ ನೂರಾರು ಜಾಜಿ ಮತ್ತು ಮಲ್ಲಿಗೆ ಪೊದೆಗಳಲ್ಲಿ ಅಂದಿನ ಮೊಗ್ಗು ದೊಡ್ಡದಾಗುತ್ತಿರುವ ಹೊತ್ತು ಅದು. ಹೊತ್ತೇರಿದರೆ ಮೊಗ್ಗು ಅರಳಿ ಬಿಡುವ ಆತಂಕ.

ಹಾಗಾಗಿ ಒಂದಿಷ್ಟು ಆಳೂ ಕಾಳೂ ಹಾಕಿ ಅವರ ಜೊತೆಗೂಡಿ ಬೆಳಗಿನ ಏಳು ಎಂಟಕ್ಕೆಲ್ಲ ಮೊದಲೇ ಗುತ್ತಿಗೆ ಹಿಡಿದ ಪೊದೆಗಳ ಮೊಗ್ಗು ಬಿಡಿಸಿ ಕಟ್ಟುವ ಪ್ರಕ್ರಿಯೆ ಕೂಡ ಅಲ್ಲಿಗಲ್ಲಿಗೇ ನಡೆದು ಹೂವು ಮಾರುಕಟ್ಟೆಗೆ ಬಂದು ಬಿಡುತ್ತದೆ. ಘಮ ಸುತ್ತಲೂ ಹರಡಿ ತುಡುವೆಜೇನು, ಕೋಲುಜೇನು ಮುಂತಾದ ಸಣ್ಣಪುಟ್ಟ ಜೇನುಗಳೆಲ್ಲ ಬುಟ್ಟಿಗಳ ಸುತ್ತ ಹಾರಾಡುತ್ತ ಕೊಳ್ಳುವವರೂ ಮಾರುವವರಿಗೂ ನೆಂಟರಾಗಿಬಿಡುತ್ತವೆ.

ಬುಟ್ಟಿ ಹೊತ್ತು ತಿರುಗುವ ಹಮ್ಮಿಯ ಬೆನ್ನನ್ನೂ… ಹೂ ಮುಡಿದು ಸುಮ್ಮನೆ ರಸ್ತೆಯಂಚಿನಲ್ಲಿ ನಡೆವ ಹೆಂಗಸರ ಬೆನ್ನನ್ನೂ ಬಿಡದ ಅವುಗಳಿಂದ ಯಾರಿಗೂ ಏನೂ ತೊಂದರೆಯಿಲ್ಲದ ಕಾರಣ ಎಲ್ಲರೂ ಅವುಗಳನ್ನು ಒಪ್ಪಿಕೊಂಡುಬಿಟ್ಟಿದ್ದಾರೆ. ಎಲ್ಲ ಹೂವುಗಳೂ ಮಾರಾಟವಾದಂತೆ ನಾಕು ಕಾಸು ಕಂಡ ದುಡಿತದ ಕೈಗಳು ಹರುಷ ಉಕ್ಕಿ ಸಂಜೆ ಖಾಲಿ ಚೆಬ್ಬೆ ಹಿಡಿದುಕೊಂಡು ಒಂದೈವತ್ತು ರೂಪಾಯಿಯ ಮೀನು ತಕ್ಕೊಂಡು ಮನೆ ದಾರಿ ಹಿಡಿಯುತ್ತವೆ.  

ಮತ್ತೆ, ಮನೆ ತಲುಪಿ ಮಣ್ಣುಗೋಡೆಗೆ ಬೆನ್ನು ಚಾಚಿ ಅಂದಿನ ಹಣ ಎಣಿಸಿ ನಿದ್ದೆ ಹೋಗುತ್ತವೆ. ಕನಸಿನಲ್ಲಿ ನಸುಕಿನ ಮೊಗ್ಗುಗಳು ಅವರನ್ನು ಕೈ ಬೀಸಿ ಕರೆಯುತ್ತವೆ.

September 11, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

15 ಪ್ರತಿಕ್ರಿಯೆಗಳು

  1. Smitha Amrithraj.

    ಹೊಸತೊಂದು ಲೋಕದ ಅನಾವರಣ .ಹೊಸ ಬಗೆಯಲ್ಲಿ ನೀವು ನೋಡುವ ಲೋಕದ ಚಿತ್ರ ಚೆಂದ.ಇಷ್ಟ ಆಯಿತು ಬರಹ ಅಕ್ಕ

    ಪ್ರತಿಕ್ರಿಯೆ
    • ರೇಣುಕಾ ರಮಾನಂದ

      ಥ್ಯಾಂಕ್ಯೂ ಸ್ವೀಟ್ ಹಾರ್ಟ ಸ್ಮಿತಾ..ಲವ್ ಯು

      ಪ್ರತಿಕ್ರಿಯೆ
  2. ಕಿರಣ ಭಟ್

    ಅಂಕೋಲೆಯ ಬಸ್ ಸ್ಟ್ಯಾಂಡ್ ನಲ್ಲೂ ಇಂಥ ಮಹಿಳೆಯರು ಕಾಣಸಿಗುತ್ತಾರೆ. ಹೂ ಮತ್ತು ಕಾಡ ಹಣ್ಣುಗಳನ್ನ ಮಾರೋರು. ಅವರು ಮಾರೋ ಮುಳ್ಳೇಹಣ್ಣು ನನ್ನ ಫೇವರಿಟ್.
    ಒಳ್ಳೇ ಬರಹ.

    ಪ್ರತಿಕ್ರಿಯೆ
  3. ರೇಣುಕಾ ರಮಾನಂದ

    ಹೌದು ಕಿರಣ್ ಸರ್.ಕಾಲಕ್ಕಾಲದ ಹಣ್ಣುಗಳು ಹಾಲಕ್ಕಿಗಳು ತಂದು ಮಾರುತ್ತಾರೆ.ಥ್ಯಾಂಕ್ಯೂ ನಿಮ್ಮ ಪ್ರತಿಕ್ರಿಯೆ ಖುಷಿ ತಂತು

    ಪ್ರತಿಕ್ರಿಯೆ
  4. ರೇಣುಕಾ ರಮಾನಂದ

    ಥ್ಯಾಂಕ್ಯೂ ಹಮೀದ್ ಸರ್

    ಪ್ರತಿಕ್ರಿಯೆ
  5. ರೇಣುಕಾ ರಮಾನಂದ

    ಥ್ಯಾಂಕ್ಯೂ ನರೇನ್ ಸರ್

    ಪ್ರತಿಕ್ರಿಯೆ
  6. Rajani

    ಆಹಾ, ನಮ್ಮೂರಿಂದೆಲ್ಲ ನೆನಪಗ್ತದೆ…

    ಪ್ರತಿಕ್ರಿಯೆ
  7. ರೇಣುಕಾ ರಮಾನಂದ

    ಥ್ಯಾಂಕ್ಯೂ ವಿದ್ಯಾ ಮ್ಯಾಮ್

    ಪ್ರತಿಕ್ರಿಯೆ
  8. Sunanda

    ಹೂ ಮಾತೆಯರ ಅಕಾರಣ ಮಮತೆ ಮತ್ತು ಅದರ ಹಿಂದಿರುವ ಹಸಿವಿನ ಅರ್ಥ ಎರಡನ್ನೂ ಬ್ಯಾಲನ್ಸಿಂಗ್ ಆಗಿ ಹಿಡಿದಿಟ್ಟ ಬರೆಹವು ಅಂಕೋಲೆ ಪರಿಸರದ ಸೂಕ್ಷ್ಮಾತಿಸೂಕ್ಷ್ಮ ಒಳನೋಟಗಳಿಗೂ ಕನ್ನಡಿಯಾಗಿದೆ ರೇಣುಕಾ, ಬಹು ಹಿಂದೆ ಉದಯವಾಣಿಗೆ ನಾನು ಪಿಸುಗುಡುವ ಬೆಟ್ಟಸಾಲು ಅಂಕಣ ಬರೆಯುತ್ತಿದ್ದ ಸಂದರ್ಭ ನೆನಪಾಗಿ ಖುಷಿಯಾಯ್ತು..

    ಪ್ರತಿಕ್ರಿಯೆ
  9. ರೇಣುಕಾ ರಮಾನಂದ

    ಅಕ್ಕಾ ಖುಷಿಯಾಯ್ತು ನಿಮ್ಮ ಪ್ರತಿಕ್ರಿಯೆಗೆ.. ಪಿಸುಗುಡುವ ಬೆಟ್ಟಸಾಲು ಅದೆಷ್ಟು ಚಂದದ ಹೆಸರು..ನಿಮ್ಮ ಬರಹವೂ ಹಾಗೇ ಇದ್ದೀತು…ಖುಷಿಯಾಯ್ತು

    ಪ್ರತಿಕ್ರಿಯೆ
  10. Kala Bhagwat

    ಊರಿಗೆ ಹೋದಾಗ ಹಮ್ಮಿಯಂತ ಅಕ್ಕಂದಿರಿಂದ ಅನೇಕ ಬಗೆಯ ಹೂದಂಡೆಗಳನ್ನು ಕೊಂಡು ಮುಡಿಯುವುದೇ ನನಗೆ ಹಬ್ಬ. ಸೊಗಸಾದ ನಿರೂಪಣೆ.ಅಭಿನಂದನೆ ರೇಣುಕಾ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: