ಕೆ ಎ ದಯಾನಂದ ಅವರ `ಹಾದಿಗಲ್ಲು’ಕೃತಿಯಲ್ಲಿ ಕಂಡದ್ದು
ವೇಣು ಸಿ ಎ ಅವರ ಮುಖಾಂತರ
`ತೇಜಸ್ವಿಯವರು ತಮ್ಮ ಜಮೀನಿಗೆ ಕಾಫಿ ಕಂದಾಯ ನಿಗದಿಪಡಿಸಿಕೊಡುವಂತೆ ಮೂಡಿಗೆರೆ ತಹಶೀಲ್ದಾರರಿಗೆ ಪತ್ರ ಕಳಿಸಿದ್ದರು. ತಹಶೀಲ್ದಾರರು ಅರ್ಜಿಯ ಜೊತೆಗೆ ಮ್ಯುಟೇಶನ್, ಪಹಣಿ ಮತ್ತು ಆಕಾರ್ ಬಂದ್ ದಾಖಲೆಗಳನ್ನು ಸಲ್ಲಿಸುವಂತೆ ಮರು ಉತ್ತರ ಬರೆದಿದ್ದರು. ಆ ಪತ್ರದೊಂದಿಗೆ ತಹಶೀಲ್ದಾರರ ಕೊಠಡಿಗೆ ಬಂದ ತೇಜಸ್ವಿಯವರು `ತಹಶೀಲ್ದಾರರೇ, ಮ್ಯುಟೇಶನ್ ಎಲ್ಲಿ ಸಿಗುತ್ತದೆ?’ ಎಂದು ಕೇಳಿದರು. ಅದಕ್ಕೆ ತಹಶೀಲ್ದಾರರು `ನಮ್ಮ ಕಚೇರಿಲಿ ಸರ್’ ಎಂದರು.
`ಪಹಣಿ ಎಲ್ಲಿ ಸಿಗುತ್ತದೆ?’
`ನಮ್ಮ ಕಚೇರಿ ಕೌಂಟರಿನಲ್ಲಿ ಸಿಗುತ್ತದೆ, ಸರ್’
`ಆಕಾರ್ ಬಂದ್ ಎಲ್ಲಿ ಸಿಗುತ್ತದೆ?’
`ನಮ್ಮ ಕಚೇರಿ ರೆಕಾರ್ಡ್ ರೂಮಿನಲ್ಲಿ ಸಿಗುತ್ತೆ ಸರ್’
ಈ ಉತ್ತರಗಳನ್ನು ಪಡೆದ ತೇಜಸ್ವಿಯವರು ತಕ್ಷಣವೇ ಪೇಪರ್ ಒಂದನ್ನು ತೆಗೆದು `ತಾವೇ ಈಗ ತಿಳಿಸಿದಂತೆ, ತಾವು ಕೋರಿರುವ ಎಲ್ಲಾ ದಾಖಲೆಗಳು ತಮ್ಮ ಕಚೇರಿಯಲ್ಲಿಯೇ ಸಿಗುವುದರಿಂದ ಅವುಗಳನ್ನು ಪರಿಶೀಲಿಸಿ ಕಾಫಿ ಕಂದಾಯ ನಿಗದಿಪಡಿಸಲು ಕೋರಿದೆ. ಅನವಶ್ಯಕವಾಗಿ ಪತ್ರ ವ್ಯವಹಾರ ಮಾಡಿ ನಮ್ಮ ಹಾಗೂ ತಮ್ಮ ಕೆಲಸ ಹಾಗೂ ಸಮಯವನ್ನು ಹಾಳು ಮಾಡದಂತೆ ಎಚ್ಚರಿಕೆ ವಹಿಸಲು ಕೋರಿದೆ’ ಎಂದು ಪತ್ರ ಬರೆದು ಸಹಿ ಮಾಡಿ ತಹಶೀಲ್ದಾರರ ಕೈಗಿತ್ತು ಹೋಗಿದ್ದರು.
ಈ ಪ್ರಕರಣ ಅವರ ನಡವಳಿಕೆ ಮತ್ತು ಅವರ ಆಲೋಚನಾ ರೀತಿಗೆ ಹಿಡಿದ ಕೈಗನ್ನಡಿಯಾಗಿದೆ….(ಹಾದಿಗಲ್ಲು, ಪುಟ 213)
ಕೆ.ಎ.ದಯಾನಂದ ಅವರ ಆತ್ಮವೃತ್ತಾಂತದ ಮೊದಲ ಚರಣದ `ಸಾಧಕರ ನೆರಳಿನಲ್ಲಿ’ ಎಂಬ ಅಧ್ಯಾಯದಲ್ಲಿ ಪ್ರಸ್ತಾಪವಾದ ಮೇಲಿನ ಪ್ರಕರಣ ಮುಂದೆ ಹೇಗೆ ಇತ್ಯರ್ಥವಾಯಿತೆಂಬ ಬಗ್ಗೆ ವಿವರಗಳಿಲ್ಲ.
0 ಪ್ರತಿಕ್ರಿಯೆಗಳು