ಲಕ್ಮ್ಷಣ್ ಕೆ ಪಿ
ಅಭಿನಯ ಮತ್ತು ಭಾಷೆಯ ಕುರಿತು ಸರಿಯಾದ ಗ್ರಹಿಕೆ ಇಲ್ಲದವರು ಮಾತ್ರ ಸ್ಪಷ್ಟ ಅಥವಾ ಶುದ್ಧ ಉಚ್ಚಾರಣೆಯನ್ನು ನಟನೆಯಲ್ಲಿ ಬಹುಮುಖ್ಯ ಸಂಗತಿಯಾಗಿ ಭಾವಿಸುವರು. ಭಾಷೆ ಅಭಿನಯದ ಒಂದು ಭಾಗವಷ್ಟೆ ಆದರೆ ಅದನ್ನೇ ಮುಖ್ಯವಾಗಿಸಿ ಇಡಿಯಾಗಿ ನಟನೆಯ ಕಸುಬನ್ನು ಅಳೆಯುವುದು ನಟನೆಯ ಮಾಧ್ಯಮವನ್ನು ಮಿತಿಗೊಳಿಸಿದಂತೆ . ಹಾಗೆ ನೋಡಿದರೆ ಭಾಷೆಗೂ ದಾಟಿಸಲು ಸಾಧ್ಯ ಆಗದ್ದನ್ನು ನಟನೆಯು ದಾಟಿಸಬಲ್ಲದು , ದಾಟಿಸಬೇಕು. ಸ್ಪಷ್ಟವಾಗಿ ಓದಲು ಬರೆಯಲು ಬರದ ಅಪ್ರತಿಮ ನಟ/ನಟಿಯರು ನಮ್ಮೊಡನೆ ಇದ್ದಾರೆ. ತುಂಬ ಚನ್ನಾಗಿ ಓದಬಲ್ಲ ಅದರ ಆಚೆಗೆ ಕಿಂಚಿತ್ ಒಳನೋಟವನ್ನು ನಟನೆಯಲ್ಲಿ ಕಾಣಿಸಲಾಗದ ‘ಸ್ಪಷ್ಟ ಉಚ್ಚಾರಣೆಯ ನಟರು ‘ ನಮ್ಮ ನಡುವೆ ಇದ್ದಾರೆ.
ನಾವು ಈತನಕ ರಂಗಭೂಮಿ ಮತ್ತು ಸಿನಿಮಾ ಮಾಧ್ಯಮಗಳಲ್ಲಿ ಶುದ್ದ ಮತ್ತು ಸ್ಪಷ್ಟ ಉಚ್ಚಾರಣೆಯ ಬಾಷೆಯ ಕಾಯಿಲೆಗೆ ಬಿದ್ದು ನಮ್ಮ ನಡುವಿನ ಹಲವು ಸೊಗಡಿನ ಆಡು ಕನ್ನಡ ,ನುಡಿ ಕನ್ನಡದಿಂದ ವಂಚಿತರಾಗಿದ್ದೇವೆ.ಪ್ರಾದೇಶಿಕ ಆಡುಮಾತನ್ನು ಚನ್ನಾಗಿ ದುಡಿಸಿಕೊಂಡ ನಾಟಕಗಳು ಇತರೆ ಸಾಹಿತ್ಯ ಪ್ರಕಾರಗಳಿಗೆ ಹೋಲಿಸಿದರೆ ಇಲ್ಲವೇ ಇಲ್ಲ ಅನ್ನುವಷ್ಟು ಕಡಿಮೆ. ಅಷ್ಟರ ಮಟ್ಟಿಗೆ ರಂಗಭೂಮಿ ಹಲವು ನುಡಿ ಬೆಡಗುಗಳಿಂದ ವಂಚಿತ. ಶುದ್ಧವಾಗಿ ಉಳಿಯಲು ಬಯಸಿದ ಕಾರಣದಿಂದಾಗಿ ಆದ ದುರಂತವಿದು.
ಇನ್ನು ಅಭಿನಯ ಕಲಿಸುವಾಗ ನಕಾರ, ಣಕಾರ, ಳಕಾರ, ಲಕಾರ, ಅಕಾರ, ಹಕಾರ ಇದನ್ನು ತಿದ್ದುವುದನ್ನೆ ಅಭಿನಯ ಹೇಳಿ ಕೊಟ್ಟಂತೆ ಎಂದು ಬಿಂಬಿಸಲಾಗುತ್ತದೆ. ಹಲವು ಬಗೆ ಬಾಷೆಯನ್ನು ನುಡಿಸಲು ಕಲಿಯುವುದು ನಟರಿಗೆ ಬಹಳ ಮುಖ್ಯ ಆದರೆ ಅದೊಂದು ಕೌಶಲ್ಯವಷ್ಟೆ ಅದೇ ಅಭಿನಯ ಅಲ್ಲ. ಹಲವು ಪ್ರಾದೇಶಿಕ ಹಿನ್ನೆಲೆಯ ನಟರು ಈ ಉಚ್ಚಾರದ ಕಾರಣಕ್ಕೆ ಕೀಳರಿಮೆ ಅನುಭವಿಸಿ ನಟನೆಯಿಂದ ದೂರ ಉಳಿಯುವುದನ್ನ ನಾನು ಕಂಡಿದ್ದೇನೆ. ಇದು ಸಾಂಸ್ಕೃತಿಕ ದಬ್ಬಾಳಿಕೆಯ ಪಲಿತಾಂಶವಲ್ಲದೆ ಮತ್ತೇನು ಅಲ್ಲ. ಇನ್ನು ಶುದ್ಧ ಕನ್ನಡದ, ಸ್ಪಷ್ಟ ಉಚ್ಚಾರದ ಪ್ರಾಣ ಹಿಂಡುವವರು ತಾವು ‘ಅಶುದ್ಧ’ ಅಥವ ‘ಒರಟು’ಎಂದು ಭಾವಿಸುವ ಕನ್ನಡವನ್ನು ಆಡಿ ನೋಡಬೇಕು. ಅದರ ಚೆಲುವನ್ನು ಕೇಳಿಸಿಕೊಳ್ಳಬೇಕು. ಇನ್ನು ಅಭಿನಯದಲ್ಲಿ ಒಳಗೊಳ್ಳುವುದು ದೂರದ ಮಾತು.
ಈಚೆಗೆ ಶಕೀಲ್ ಅಹಮದ್ ನಿರ್ದೇಶಿಸಿ ಶೋಧನ್, ವಿಶಾಲ್ ಮತ್ತು ಸುಮಂತ ನಟಿಸಿದ ‘ ಅನಾಮಿಕನ ಸಾವು ‘ ನಾಟಕವು ಪ್ರಾದೇಶಿಕ ಭಾಷೆಯನ್ನು ತನ್ನ ಅಭಿವ್ಯಕ್ತಿ ಭಾಗವಾಗಿಸಿಕೊಂಡು,ಅಭಿನಯದಲ್ಲಿಯೂ ಅದನ್ನು ಒಗ್ಗಿಸಿಕೊಂಡ ಅಪರೂಪದ ಪ್ರಯೋಗ.
ಮುಂದೊಂದುದಿನ ಹಳೆ ಮೈಸೂರಿನವರು ಬೀದರ್ ಸೊಗಡನ್ನು, ಮಂಗಳೂರಿನವರು ಕೋಲಾರದ ಸೊಗಡನ್ನು ಲೀಲಾಜಾಲವಾಗಿ ಬಳಸಿ ಅಭಿನಯಿಸಲಿ.
( ವಿ. ಸೂಚನೆ: ಹಳೆ ಕನ್ನಡವನ್ನೋ ಅದಕ್ಕಿಂತ ಕ್ಲಿಷ್ಟ ಅನಿಸುವುದನ್ನೋ ಕಲಿಯಬೇಡಿ ಎಂದು ನಾನಿಲ್ಲಿ ಹೇಳಿಲ್ಲ )
ಒಳ್ಳೆಯ ಲೇಖನ