ಬದುಕಿಗೆ ಕನ್ನಡಿ ಹಿಡಿದ ಕಥೆಗಳು
ಸುರೇಶ್ ಮಲ್ಲಿಗೆಮನೆ
“ಬದುಕು ಜಟಕಾಬಂಡಿ” ಕಥಾ ಸಂಕಲನವು ಗೆಳೆಯ ಅನಂತನ ಬದುಕಿನ ಯಶಸ್ಸಿನ ದಾರಿಗೆ ಮತ್ತೊಂದು ಗರಿಮೆಯನ್ನು ಮುಡಿಗೇರಿಸಿದೆಯೆಂದರೆ ತಪ್ಪಾಗಲಾರದು.
ಓದು, ಬರಹ, ರಂಗಭೂಮಿ, ಸಿನಿಮಾ, ಅವ್ವ ಪುಸ್ತಕಾಲಯ, ಅಪಾರ ಸ್ನೇಹಿತರ ಬಳಗ, ಸಾಹಿತ್ಯಿಕ ಚಟುವಟಿಕೆಗಳು ಹೀಗೆ ನಾನಾ ಚಟುವಟಿಕೆಗಳಲ್ಲಿ ಸದಾ ಕ್ರಿಯಾಶೀಲನಾಗಿರುವ ಗೆಳೆಯ ಅನಂತುವಿಗೆ ಕಥೆ ಬರೆಯಲು, ಓದಲಾದರೂ ಹೇಗೆ ಸಮಯ ಹೊಂದಿಸಿಕೊಳ್ಳುತ್ತಾನೋ ದೇವರು ಮತ್ತು ಅವನೇ ಬಲ್ಲ!
ಬಹುಶಃ ಅನಂತು ತನ್ನ ಕಾಯಕದಲ್ಲೇ ದೇವರನ್ನು ಕಾಣುತ್ತಾನೇನೋ..? ಇರಬಹುದು! ಯಾಕೆಂದರೆ ಇಂತಹ ಬ್ಯುಸಿ ಶೆಡ್ಯೂಲ್ ನಲ್ಲೂ ತನ್ನ ಐದನೇ ಪುಸ್ತಕವನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಿ ಓದುಗರ ಮುಂದಿರಿಸಿದಾನಲ್ಲಾ ಇದು ನನ್ನ ಪ್ರಕಾರ ದೊಡ್ಡ ವಿಷಯವೇ.. ಚಿಗುರು ಮೀಸೆಯ ಹುಡುಗ ಇನ್ನೂ ಇಪ್ಪತ್ತೈದರ ಮಳೆಗಾಲವನ್ನೂ ದಾಟಿಲ್ಲ. ಇಂತಹದರಲ್ಲಿ ಆತನ ಜವಾಬ್ದಾರಿ, ಬದುಕಿನ ಕುರಿತ ಸಕಾರಾತ್ಮಕ ಮನೋಧೋರಣೆ, ಎಲ್ಲರನ್ನೂ ತನ್ನಂತೆಯೇ ಬೆಳೆಸುವ ಸದ್ಗುಣವನ್ನು ಮೆಚ್ಚಲೇಬೇಕು.
ಈತನ ಕಥೆಗಳು ಬ್ರಿಟಿಷ್ ಕಾಲದಿಂದ ಶುರುವಾಗಿ 5g ಕಾಲದವರೆಗೂ ತಲುಪುತ್ತವೆ. ತನ್ನ ಸುತ್ತಮುತ್ತಲು ನಡೆಯುವಂತಹ ಸಮಾಜದ ಕೆಳಸ್ತರಗಳಲ್ಲಿನ ಘಟನೆಗಳನ್ನು ಅತೀ ಸೂಕ್ಷ್ಮತೆಯಿಂದ ಆಲಿಸುವ, ಗಮನಿಸುವ ಆತನನ್ನು ಅತಿಸೂಕ್ಷ್ಮ ವ್ಯಕ್ತಿಯೆಂದೇ ಹೇಳಬಹುದು. ತಾನು ಕಂಡುಂಡ, ಕೇಳಿದ, ನೋಡಿದ, ಅನುಭವಿಸಿದ ಘಟನೆಗಳನ್ನೇ ಕಥಾರೂಪಕ್ಕೆ ತಂದು ಕಥೆಗಳಿಗೆ ಬೇರೆಯದೇ ತೆರನಾಗಿ ಜೀವ ತುಂಬಿದ್ದಾನೆ.
“ಒಂದು ಹೋರಾಟದ ಕಥೆ” ಹಳೆಯ ಕಥಾಹಂದರ ಹೊಂದಿತ್ತಾದರೂ ಸಾಕವ್ವಳ ಸೇಡು ತೀರಿಸಿಕೊಳ್ಳುವ ಹೋರಾಟದ ಕಿಚ್ಚು ಖಂಡಿತವಾಗಿಯೂ ನಮ್ಮಲ್ಲಿ ಅನ್ಯಾಯದ ವಿರುದ್ಧ ಹೋರಾಟದ ಮನೋಭಾವನೆಯನ್ನು ಬಡಿದೆಬ್ಬಿಸುತ್ತದೆ.
“ಸರದಿ” ಮತ್ತು “ಬಯಲ ತೊರೆದ ಹಾಡು” ಕಥೆಯಲ್ಲಿ ಬದುಕು ಕಟ್ಟಿಕೊಳ್ಳಲು, ಒಪ್ಪತ್ತಿನ ಅನ್ನಕ್ಕಾಗಿ ಹೆಣಗುವ ಜೀವಿಗಳ ಮುಗ್ದತೆಯ ಜೀವನದ ಬವಣೆಗಳು ನಿಜಕ್ಕೂ ನಮ್ಮ ಕಣ್ಗಳಲ್ಲಿ ಕಣ್ಣಾಲೆಗಳನ್ನು ತರಿಸುತ್ತವೆ.
“ವಿಸರ್ಜನೆ” ಕಥೆಯಲ್ಲಿ ಕೊಳಗೇರಿ ನಿವಾಸಿಗಳ ಜೀವನ ಕ್ರಮವನ್ನು ಬಹಳ ಸೂಕ್ಷ್ಮವಾಗಿ ಹತ್ತಿರದಿಂದ ಅವಲೋಕಿಸಿ ಕಥೆ ಬರೆದಿದ್ದಾರೆ. ಈ ಕಥೆ ಕೊಳಗೇರಿ ನಿವಾಸಿಗಳಾದ ನಾಗಮ್ಮ, ಸಾಕಿ, ಮಂಜ, ಪಾಪಣ್ಣ, ಮಯೂರನ ಸುತ್ತಲೂ ಸುತ್ತುತ್ತಾ ಎಲ್ಲೋ ಒಂದು ಕಡೆ ಪಾಪಣ್ಣನ ಬವಣೆಯನ್ನು ವಿವರಿಸುತ್ತಾ ಸಾಗಿ, ಮಗನ ಆರೋಗ್ಯ ಸುಧಾರಣೆಗೆ ಮತ್ತು ಅವನ ತೃಷೆಯನ್ನು ತೀರಿಸಲು ಪ್ರಯತ್ನಿಸುತ್ತನಾದರೂ ಒಂದು ಒಪ್ಪದ ಕಾರಣಕ್ಕಾಗಿ ಸಾಕಿಯಿಂದ ಪರೋಕ್ಷವಾಗಿ ಸಾವನ್ನಪ್ಪುವ ಬಗೆ ಸ್ವಲ್ಪ ನೀರಸವೆನಿಸಿದರೂ, ಮಗನ ತೃಷೆ ಕೊನೆಯಲ್ಲಿ ಫಲಪ್ರದವಾದಾಗ ಪಾಪಣ್ಣ ಇಲ್ಲವಾದ್ದದ್ದು ತುಂಬಾ ಕನಿಕರ ಮತ್ತು ಬೇಸರವಾಗುತ್ತದೆ.
ಹೀಗೆ “ಬೆಂಗಳೂರಿಗೆ ಬಂದ ಬೋರೇಗೌಡ, ಕೆಂಪು ಬಸ್ಸಿನ ನೀಲಿ ಸೀಟು, ಮೇಟ್ಕುಳಿ, #ಟ್ಯಾಗ್” ಕಥೆಗಳು ಸಮಾಜದ ಪ್ರಸ್ತುತ ಸನ್ನಿವೇಶಕ್ಕೆ ಹಿಡಿದ ಕೈಗನ್ನಡಿಯಂತೆ ಕಾಣುತ್ತವೆ. “ದೇಹದ ದೇಗುಲ” ನನಗೆ ತುಂಬಾ ಇಷ್ಟವಾದ ಕಥೆ. ಇದನ್ನು ಆಡಿಯೋ ರೂಪದಲ್ಲೂ ಕೇಳಿ ಆನಂದಿಸಿದ್ದೇನೆ.
ofcourse, ಒಟ್ಟಿನಲ್ಲಿ ಎಲ್ಲಾ ಕಥೆಗಳು ವಾಸ್ತವ, ಇತಿಹಾಸ, ಸಾಮಾಜಿಕ, ರೋಚಕ ವಿಷಯಗಳನ್ನು ಒಳಗೊಂಡಂತೆ ಹೊಸ ಕಥೆ, ಹಳೆ ಕಥೆ, ಸುಖಾಂತ್ಯ, ದುಃಖಾಂತ್ಯ, ಸಣ್ಣ ಕಥೆ, ದೊಡ್ಡ ಕಥೆ, ಪುಟ್ಟ ಕಥೆ ಎಲ್ಲಾ ತರದ ಕಥೆಗಳಿಂದ ಕೂಡಿದೆ. ಪಾತ್ರದ ಮೂಲಕ ಮತ್ತು ಕಥೆಯ ಮೂಲಕ ಇನ್ನೊಂದು ಹೃದಯವನ್ನು ತಟ್ಟಿ ಮಾತನಾಡಿಸಲು ಹೊರಡುವ ಅನಂತನ ಧೋರಣೆ ನನಗೂ ಇಷ್ಟ. ಆದರೂ ಕೆಲವೊಂದು ಕತೆಗಳಲ್ಲಿ ಸ್ವಲ್ಪ ಹೊಸತನದ ಕೊರತೆ ಇದೆಯೇನೋ ಎಂದಿನಿಸುತ್ತದೆ. ಇನ್ನಷ್ಟು ಕ್ಯೂರಿಯಾಸಿಟಿ ಹುಟ್ಟಿಸುವ ಕಥೆಗಳು ಅನಂತನ ಲೇಖನಿಯಿಂದ ಮೂಡಿಬರಲಿ.
ಅನಂತನ ವಯಸ್ಸು ಚಿಕ್ಕದಾದರೂ ಆತನ ಅನುಭವ ದೊಡ್ಡದು ಮತ್ತು ಆತನ ಕಥೆಗಳು ಬಹಳ ವೈವಿದ್ಯತೆ ಮತ್ತು ಮೌಲ್ಯಯುತವಾದವು. ನಮ್ಮ ಬದುಕಿಗೆ ಸಂಬಂಧಿಸಿದ ಕಥೆಗಳನ್ನೇ ಒಳಗೊಂಡಿರುವ ಈ ಕಥಾ ಸಂಕಲವನ್ನು ಖಂಡಿತವಾಗಿಯೂ ಪ್ರತಿಯೊಬ್ಬರು ಓದಲೇಬೇಕು.
ಅನಂತನಿಗೆ ಒಳ್ಳೆಯದಾಗಲಿ. ನಾನಂತು ಅವನ ಮುಂಬರುವ ಕಥೆಗಳನ್ನು ಓದಲು ಕಾಯುತ್ತಿರುತ್ತೇನೆ.
0 ಪ್ರತಿಕ್ರಿಯೆಗಳು