ಬಾಳೊಂದು ನೆನಪುಗಳ ಬುತ್ತಿ. ಜೀವನಯಾನದ ಹಾದಿಯಲಿ ದಟ್ಟವಾಗಿ ಬೆಳೆದ ಮರದ ನೆರಳ ಸೊಂಪಿನಲಿ ಹರಿವ ತೊರೆಯ ನಿನಾದವನನ್ನಾಲಿಸುತ್ತ ಬುಟ್ಟಿಯನ್ನು ಬಿಚ್ಚಿ ಉಣ್ಣಬಹುದು .
ಆ ಅನುಭವವನ್ನು ನಿಮ್ಮೆಲ್ಲರೊಡನೆ ಹಂಚಿಕೊಳ್ಳುವ ಪ್ರಯತ್ನ ಬಿರುಬಿಸಿಲ ಝಳ ಬಳ್ಳಾರಿಯಲಿ ಚುರುಗುಡುತ್ತಲಿತ್ತು. ಶಾಲೆಯಿಂದ ಗೆಳತಿಯರೊಡನೆ ಮನೆಗೆ ಹೊರಟರೆ ಬೆಳದಿಂಗಳಲಿ ಹೆಜ್ಜೆ ಹಾಕಿದ ಹಾಗಿರುತ್ತಿತ್ತು .
ನಮಗೆಲ್ಲ ಬಿಸಿಲಿನ ಬಗ್ಗೆ ಗಮನವೇ ಇರುತ್ತಿರಲಿಲ್ಲ ದೂರದಲಿ ಕಾಣುವ ಗುಡ್ಡದ ಮೇಲೆ ನನ್ನ ಗಮನವೆಲ್ಲ ಕೇಂದ್ರೀಕೃತವಾಗಿರುತ್ತಿತ್ತು. ನೂರಾರು ಪ್ರಶ್ನೆಗಳು ಪುಂಖಾನು ಪುಂಖವಾಗಿ ಹರಿದು ಬರುತ್ತಿದ್ದವು . ಕೌತುಕದ ಆಗರವಾಗಿತ್ತು ಗುಡ್ಡ ಗುಡ್ಡವನ್ನು ಹತ್ತುವ ಬಯಕೆ ಹಲವಾರು ಬಾರಿ ಬರುತಿತ್ತು.
ಆದರೆ ಅಲ್ಲಿ ನಡೆದ ಭಯಾನಕ ಕತೆಗಳನ್ನು ಕೇಳಿ ರಾತ್ರಿ ನಿದ್ರೆ ಬರುತ್ತಿರಲಿಲ್ಲ .ಹೀಗಾಗಿ ಗುಡ್ಡದ ಬಗ್ಗೆ ಒಂದು ನಿಗೂಢವಾದ ಕಲ್ಪನೆಯ ಬಲೆ ಹೆಣೆಯತೊಡಗಿತು ನನ್ನ ಮುಗ್ದ ಮನ.
ಬಿರುಬಿಸಿಲಿನಲ್ಲಿ ಎರೆಡು ತಿಂಗಳು ನಾಲ್ಕು ಜಿಲ್ಲೆಗಳಾದ ಬಳ್ಳಾರಿ, ರಾಯಚೂರು, ಬೀದರ್, ಗುಲ್ಬರ್ಗ ಗಳಿಗೆ ಒಪ್ಪತ್ತಿನ ಆಫೀಸು ಬೆಳಿಗ್ಗೆ ಒಂದು ಗಂಟೆಯವರೆಗೆ ಮಾತ್ರ. ಮಧ್ಯಾಹ್ನ ಅಪ್ಪ ದೊಡ್ಡಪ್ಪಂದಿರೆಲ್ಲ ಮನೆಯಲ್ಲೇ ಇರುತ್ತಿದ್ದರು ..
ಈಗಿನ ಹಾಗೆ AC ಗಳ ಭರಾಟೆ ಅಷ್ಟಾಗಿ ಇರಲಿಲ್ಲ. ಇಪ್ಪತ್ನಾಲ್ಕು ಗಂಟೆಯೂ ತಿರುಗುವ ಪಂಖಕ್ಕೆ ಪುರುಸೊತ್ತೇ ಇರಲಿಲ್ಲ. ಎಲ್ಲರ ಮನೆಗಳಲ್ಲಿ ಸಿಮೆಂಟಿನ ತೊಟ್ಟಿಗಳಿರುತ್ತಿತ್ತು. ಅದರ ತುಂಬಾ ಬೆಳಿಗ್ಗೆ ನೀರು ತುಂಬಿಸಿರುತ್ತಿದ್ದೆವು ..ಬೀಸಣಿಗೆಯನ್ನು ತೊಟ್ಟಿಯಲ್ಲಿ ಅದ್ದಿಕೊಂಡು ಓಡಿ ಹೋಗಿ ಅಪ್ಪನಿಗೆ ಕೊಡುತ್ತಿದ್ದೆವು .
ನೀರಿನಲ್ಲಿ ನೆನೆದ ಬೀಸಣಿಗೆಯಿಂದ ಹನಿಗಳು ಪ್ರೋಕ್ಷಣೆಯಾಗುತ್ತಿತ್ತು ಅಪ್ಪನ ಪಕ್ಕದಲ್ಲೇ ನಿಂತಿರುತ್ತಿದ್ದೆ. ಯಾರೆಬರಲಿ ಅಮ್ಮ ನಿಂಬೆಹಣ್ಣಿನ ಪಾನಕ ಸಿದ್ಧವಾಗಿಟ್ಟಿರುತ್ತಿದ್ದಳು, ಯಾವ ಊರಿಗೂ ಹೋಗುತ್ತಿರಲಿಲ್ಲ .
ನಾವು ಶ್ರೀರಾಮನವಮಿಯವರೆಗೆ, ಪಾನಕ ಕೊಸುಂಬರಿಗಳ ಆರ್ಭಟ, ಅಮ್ಮಕೊಟ್ಟ ಚಿಕ್ಕ ಗಿಂಡಿಯ ತುಂಬಾ ಪಾನಕ, ಕೋಸುಂಬರಿ ಹಿಡಿದುಕೊಂಡು ಅಂದಾಜು ೩ ಫರ್ಲಾಂಗು ಇರುವ ದೊಡ್ಡಪ್ಪನ ಮನೆಗೆ ಹೆಜ್ಜೆಯ ಮೇಲೆ ಹೆಜ್ಜೆಯಿಡುತ್ತ ಸಾಗಬೇಕು. ಸರ ಸರ ಹೊರಟರೆ ಪಾನಕ ತುಳುಕುತ್ತಿತ್ತು .
ಒಮ್ಮೆ ಪಾನಕವನ್ನು ಒಮ್ಮೆ ದೊಡ್ಡಪ್ಪನ ಮನೆಯ ದೂರವನ್ನು ಮನದಲ್ಲೇ ಹಳಿಯುತ್ತ ಹೋಗುತ್ತಿದ್ದೆ. ಸ್ವಲ್ಪದೂರ ಹೋದ ನಂತರ ಸುತ್ತಲೂ ತಿರುಗಿ ನಿರ್ಜನವಾದದ್ದು ಖಾತ್ರಿ ಪಡಿಸಿಕೊಂಡು ಗಿಂಡಿ ಎತ್ತಿ ಪಾನಕ ಬಾಯಿಗೆ ಹಾಕಿಕೊಳ್ಳುತ್ತಿದ್ದೆ .
ಅದು ತುಳುಕದಿರಲಿ ಹಾಗು ನನ್ನ ನಡಿಗೆಯ ವೇಗವನ್ನು ಹೆಚ್ಚಿಸುವ ಪ್ರಯತ್ನವಾಗಿತ್ತು .ಅಂತೂ ಇಂತೂ ದೊಡ್ಡಪ್ಪನ ಮನೆ ಬಂತು. ಗೇಟು ತೆಗೆಯಲುಬಾರದು ..
ಎರಡು ಕೈಯಲ್ಲಿ ಪಾನಕ ಕೋಸುಂಬರಿ. ಒಳಗಿನಿಂದ ನನ್ನಣ್ಣ ಮುರುಳಿ ಓಡುತ್ತ ಬಂದ. ಗೇಟನ್ನು ತೆರೆದು ನನ್ನ ಮುಂದೆ ನಿಂತ ನಾನೆತ್ತ ಸಾಗಿದರು ನನ್ನ ಹಾದಿಗೆ ಅಡ್ಡ ಬರುತ್ತಿದ್ದ ಅಂಗಲಾಚಿದರೂ ಬಿಡುತ್ತಿರಲಿಲ್ಲ ಪಾನಕ ಕೊಡು ಎಂದು ಪೀಡಿಸುತ್ತಿದ್ದ. ನಾನೋ ಹಾದಿಯಲ್ಲಿ ತುಳುಕಿಸಿಕೊಡು ತುಳುಕಬಾರದೆಂದು ಬಾಯಿಗೆ ಹಾಕಿಕೊಂಡು ಅದಾಗಲೇ ಕಾಲು ಭಾಗ ಕಮ್ಮಿಯಾಗಿ ಮುಕ್ಕಾಲು ಭಾಗ ಪಾನಕ ಮಾತ್ರ ಇತ್ತು.
ಇವನು ಕುಡಿದರೆ ಅಮ್ಮನಿಗೆ ಗೊತ್ತಾದರೆಂಬ ಭಯ. ಒಂದೇ ಒಂದು ಗುಟುಕು ಮಾತ್ರ ಕುಡಿಯಲು ಕೊಟ್ಟು ಒಳಗಡೆ ದೊಡ್ಡಮ್ಮನಿಗೆ ಕೊಟ್ಟೆ .
ಮಾರನೇ ದಿನ ಫಲಿತಾಂಶ. ನಾನು ಅಂದಿನ ದಿನ ಶಾಲೆಗೆ ಹೋಗುವಾಗ ಯಾರನ್ನು ಮಾತನಾಡಿಸುತ್ತಿರಲಿಲ್ಲ.
ದೇವರ ಧ್ಯಾನ ನನ್ನ ತಂದೆ ಆಫೀಸಿನಿಂದ ಜೀಪಿನಲ್ಲಿ ನನ್ನ ಶಾಲೆಗೇ ಬರುತ್ತಿದ್ದರು ನನ್ನ ಗುರುಗಳಿಂದ ಬರುವ ಪ್ರಶಂಸೆಗೆ ಹಿರಿ ಹಿರಿ ಹಿಗ್ಗುತ್ತಿದ್ದರು. ಅಪ್ಪನಿಗೆ ನನ್ನ ಉತ್ತಮ ದರ್ಜೆಯ ತೇರ್ಗಡೆಯ ಬಗ್ಗೆ ವಿಶ್ವಾಸವಿರುತ್ತಿತ್ತು .
ನನ್ನ ಫಲಿತಾಂಶಕ್ಕಿಂತ ನನಗೆ ಅಪ್ಪ ಠೀವಿಯಿಂದ ರೆಬಾನ್ಸ್ ಗ್ಲಾಸ್ ಸರಿಪಡಿಸುತ್ತಾ ಜೀಪಿನಿಂದ ಇಳಿದು ನನ್ನ ಬೆನ್ನು ತಟ್ಟುವ ಪರಿ ವರ್ಷವಿಡೀ ನನ್ನ ಅಭ್ಯಾಸಕ್ಕೆ ಉತ್ತೇಜನವಾಗುತಿತ್ತು ಅಪ್ಪನ ಮೊಗದಲ್ಲಿ ಆ ಹೆಮ್ಮೆಯ ನಗು ಕಾಣಬಯಸುತ್ತಿತ್ತು ಆ ನನ್ನ ಪುಟ್ಟ ಮನ.
ತಾತನ ಮನೆ ನಾಗಸಮುದ್ರ ನಮ್ಮ ಊಟಿ ಪಯಣಕೆ ಸಿದ್ಧವಾಗೋಣವೇ ?
ಇದು ಕತೆಯಾದರೂ ಅವಿನಾವಿರವಾದ ಭಾವನೆಗಳನ್ನು ಒಳಗೊಂಡಂತಿದೆ. ಇಂದಿನ ಓದುತ್ತಿರುವ ಕಾಲಚಕ್ರದಲ್ಲಿ ಕೂಡುಕುಟುಂಬ, ಬಾಲ್ಯ, ನೆಮ್ಮದಿ ಸಂಬಂಧಗಳ ಕೊಂಡಿಯ ಗಟ್ಟಿತನ ನಂಬಿಕೆ ನಂಬಿಕೆಯನ್ನು ಬೆಸೆಯುವತಿದೆ.