ಆ ಕೋಣೆಯಲ್ಲಿ ಕನ್ನಡಿ ನಿಷಿದ್ಧ..

ಮಂಜುನಾಥ್ ಕಾಮತ್
ಮಲ್ಪೆಯಲ್ಲಿಂದು ಸಮಾರಂಭವಿತ್ತು. ಎಪ್ಪತ್ತಕ್ಕೂ ಹೆಚ್ಚು ಮಂದಿ ಮಂಗಳಮುಖಿಯರು ಸೇರಿದ್ದರು. ಅವರ ಪಾಲಿಗೆ ಈ ಸಮಾರಂಭವೇ ಮದುವೆ. ಈ ಸಮಾರಂಭವೇ ದೇವರ ಪೂಜೆ. ಮಂಗಳಮುಖಿಯರ ಪಂಗಡಕ್ಕೆ ಅಧಿಕೃತವಾಗಿ ಸೇರ್ಪಡೆಯಾಗುವ ವಿಧಿವಿಧಾನವಿದು.
ಸುಭಾಷ್ ಉಡುಪಿ ಜಿಲ್ಲೆಯವರು. ಒಂಬತ್ತನೇ ತರಗತಿಯವರೆಗೆ ಓದಿದ್ದಾರೆ. ಆ ನಂತರ ತಮ್ಮ ಭಾವನೆಗಳಿಗೆ ಬೆಲೆ ಕೊಟ್ಟು ಮಂಗಳಮುಖಿಯರ ಗುಂಪನ್ನು ಸೇರಿದ್ದಾರೆ. ‘ಆಶ್ರಯ’ ಸಂಘಟನೆಯಲ್ಲಿ ದುಡಿದಿದ್ದಾರೆ. ಹೆಣ್ಣಾಗಬೇಕೆಂಬ ಉತ್ಕಟ ಆಸೆಯಿಂದಾಗಿ 40 ದಿನಗಳ ಹಿಂದೆ ಲಿಂಗ ಪರಿವರ್ತನೆ ಮಾಡಿಕೊಂಡಿದ್ದಾರೆ.
ಇಂದು 41ನೇ ದಿನ. ನಿರ್ವಾಣ ಮಾಡಿಸಿಕೊಂಡಂದಿನಿಂದ ಇವತ್ತಿನವರೆಗೆ ಲಾವಣ್ಯ ಹೊರಗೆ ಬರುವಂತಿಲ್ಲ. ಕೋಣೆಯಲ್ಲಿಯೇ ಬಂಧಿ. ದೇವರ ಫೋಟೋ ನೋಡುವಂತಿಲ್ಲ. ತನ್ನ ಮುಖವನ್ನೂ ನೋಡಿಕೊಳ್ಳುವಂತಿಲ್ಲ. ಆ ಕೋಣೆಯಲ್ಲಿ ಕನ್ನಡಿ ನಿಷಿದ್ಧ. 41ನೇ ದಿನಕ್ಕೆ ಸಮುದ್ರ ಪೂಜೆಯಾಗಿ, ಸಾಗರಕ್ಕೆ ಹಾಲು ಸುರಿದು, ಸ್ನಾನವಾಗಿ, ಮುಖ ಮುಚ್ಚಿಕೊಂಡೇ ಬಂದು ದೇವರಿಗೆ ನಮಸ್ಕರಿಸಬೇಕು. ಆ ನಂತರ ಕನ್ನಡಿ.
ವೇದಿಕೆಯಲ್ಲಿ ಅವರ ಗುರು ಇರುತ್ತಾರೆ. ಮಗಳನ್ನಾಗಿ ಸ್ವೀಕರಿಸುವ ತಾಯಿಯೂ ಇರುತ್ತಾಳೆ. ಹಿರಿ ಕಿರಿಯ ಮಂಗಳಮುಖಿಯರ ಸಮ್ಮುಖದಲ್ಲಿ ಈ ಕಾರ್ಯಕ್ರಮ ನಡೆಯತ್ತದೆ.
ಕನ್ನಡಿಯಲ್ಲಿ ಮುಖ ನೋಡಿಕೊಂಡ ಮೇಲೆ ಹಿರಿಯರಿಗೆ ನಮಸ್ಕರಿಸಿ ಸಿಂಗಾರಗೊಂಡು ಮತ್ತೆ ವೇದಿಕೆಗೆ ಬರುತ್ತಾರೆ. ಅದು ಉಡುಗೊರೆ, ಆಶೀರ್ವಾದ ಕೊಡುವ, ನೀಡುವ ಸಮಯ. ಈ ನಡುವೆ ಮಂಗಳ ಮುಖಿಯರ ಕುಣಿತ. ಕುಣಿಯುವವರ ಮೆಲೆ ನೋಟುಗಳ ಮಳೆ ಸುರಿಸುತ್ತಾರೆ. ಸಂಭ್ರಮಿಸುತ್ತಾರೆ.
ಇಂದಿನ ಈ ಕಾರ್ಯಕ್ರಮದಲ್ಲಿ ಅತ್ಯಂತ ವಿಶೇಷವೆಂದರೆ ಲಾವಣ್ಯನ ತಾಯಿ, ಚಿಕ್ಕಪ್ಪ, ಚಿಕ್ಕಮ್ಮ, ಅಕ್ಕ, ಸಹೋದರ ಸಂಬಂಧಿಗಳು ಸಾಕ್ಷಿಯಾದದ್ದು. ಮಂಗಳಮುಖಿಯರ ಬದುಕು ದುಸ್ಥರವಾಗೋಕೆ ಪ್ರಮುಖ ಕಾರಣ ಮನೆಯವರ ನಿರಾಕರಣೆ.
ವರ್ತನೆಯಲ್ಲಿ ಬದಲಾವಣೆ ಆಯಿತೆಂದ ಕೂಡಲೇ ಮನೆಯವರಿಂದ ಹಿಂಸೆ ಆರಂಭವಾಗುತ್ತದೆ. ಆದರೆ ಲಾವಣ್ಯನ ಮನೆಯವರು ಹಾಗಲ್ಲ. ಪರಿಸ್ಥಿತಿಯನ್ನು ಅರಿತಿದ್ದಾರೆ. ಆತನಿಗೆ ಬೇಕಾದ ಬದುಕನ್ನು ಬದುಕಲು ಆತನಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ. ಈ ರೀತಿಯ ಒಪ್ಪುವಿಕೆ ಬಹಳವೇ ಅಪರೂಪ.
ಈ ಸಮಾರಂಭದ ಕೆಲವು ಚಿತ್ರಗಳು ಇಲ್ಲಿವೆ.






0 Comments