ಸುನೀತಾ ಬೆಟ್ಕೇರೂರ
ಪೃಥಿವಿವಲ್ಲಭನವನು ಅಪೂರ್ವ
ಕ್ಷಣದಲೊಮ್ಮೆ
ಸ್ಖಲಿಸಿ ವೀರ್ಯವನಿಲ್ಲಿ
ಹೊಕುಳ ಬಳ್ಳಿಯಲರೊಂದನ
ಅರಳಿಸಿಬಿಟ್ಟ
ಉಸಿರ ನೀಡಲು
ಹಸಿರ ಸಮೂಹವನಿಟ್ಟ
ದಣಿವ ತಣಿಸಲು
ಜಲನಿಧಿಯ ಹರಿಬಿಟ್ಟ
ತನ್ನುಸಿರ ಬೆಂಕಿತಾಗದಂತೆ
ವಾಯುವ್ಯೂಹವನಿಟ್ಟ
ಒಡಲಾಳದಲಿ
ಸಿರಿಸಂಪದವನಡಗಿಸಿಟ್ಟ
ವಸುಂಧರಾ ಎಂದವಳ
ಮೈದಡವಿಬಿಟ್ಟಾ….!
ನಿನ್ನಜ್ಜ, ಮುತ್ತಜ್ಜ, ಪಿತ್ತಜ್ಜರ
ಹಾಡಿದರ
‘ಎಲ್ಲಿ ಭೂರಮೆ….’
ಎಂದಂಗನೆಯ ಫಲಭಾಗಿನೈ
ಸಿರಿಯಕಂಡು.
ಮುತ್ತೈದೆ ತಾಯಗೆ
ನಮಿಸಿದರ
ತಾಯೊಡಲ ಸ್ವರ್ಗವದೆಂದೂ.
ವರಪುತ್ರ
ನೀಗೈವುದೇನಿಂದು
ತಾಯ್ ಬಸಿರ ಬಗೆವುದೆ…?
ಹಸಿರೊಡಲ ಬಯಲಾಗಿಸುವುದೆ….?
ಜಲನಿಧಿಯ ಹೊಲೆಯಾಗಿಸುವುದೆ…?
ನಿರ್ಮಲವ ನಿರ್ನಾಮಗೊಳಿಸುವುದೆ…?
ಇಲ್ಲಾ…,
ಹಬ್ಬಲಿ, ಸುಖಿಸಲಿ ನಿನ್ನದೇ
ಸಂತತಿ ತಿರುತಿರುಗಿ
ತಾಯೊಡಲೊಳ ಎನುತಾ
ಜತನದಿ ಪೊರೆವುದೆ…?
0 ಪ್ರತಿಕ್ರಿಯೆಗಳು