ಸುಗತ ಬರೆಯುತ್ತಾರೆ: ಸ್ನೇಹಕೂಟದಲ್ಲಿ ಹುಟ್ಟಿದ ಕೆಲವು ಪ್ರಶ್ನೆಗಳು

ಸುಗತ ಶ್ರೀನಿವಾಸರಾಜು

ವಿಜಯ ಕರ್ನಾಟಕದಲ್ಲಿ ಪ್ರಕಟಿತ

ಮಾರ್ಚ್ 15 ಬ್ರಿಟನ್‌ನ ಮಹಾರಾಣಿ ಎರಡನೇ ಎಲಿಜಬೆತ್ ಅವರ ಹುಟ್ಟುಹಬ್ಬ. ಈ ಹುಟ್ಟುಹಬ್ಬವನ್ನು ಅವರು ಬ್ರಿಟನ್‌ನಲ್ಲಿ ಮಾತ್ರ ಆಚರಿಸದೆ, ಜಗತ್ತಿನ ಬೇರೆ ಬೇರೆ ಭಾಗಗಳಲ್ಲೂ ಆಚರಿಸುತ್ತಾರೆ. ಮುಖ್ಯವಾಗಿ ಕಾಮನ್‌ವೆಲ್ತ್ ರಾಷ್ಟ್ರಗಳಲ್ಲಿ ಇದಕ್ಕೊಂದು ವಿಶೇಷ ಮೆರುಗಿರುತ್ತದೆ. ಕಾಮನ್‌ವೆಲ್ತ್ ರಾಷ್ಟ್ರಗಳು ಎಂದರೆ ಹಿಂದೆ ಬ್ರಿಟನ್ ಆಳ್ವಿಕೆಗೆ ಒಳಪಟ್ಟು, ಆಮೇಲೆ ಬಿಡುಗಡೆ ಪಡೆದಂತಹವು. ಈ ರಾಷ್ಟ್ರಗಳಲ್ಲಿರುವ ಬ್ರಿಟಿಷ್ ರಾಯಭಾರಿಗಳು ರಾಣಿಯ ಹುಟ್ಟುಹಬ್ಬದಂದು ಒಂದು ಸ್ನೇಹಕೂಟವನ್ನು ಏರ್ಪಡಿಸುತ್ತಾರೆ ಮತ್ತು ಆಯಾ ದೇಶದ ಬೇರೆ ಬೇರೆ ಕ್ಷೇತ್ರದ ಪ್ರಮುಖರನ್ನು ಆಹ್ವಾನಿಸುತ್ತಾರೆ. ಕಳೆದ ಕೆಲವು ವರ್ಷಗಳಿಂದ ನನಗೆ ಈ ಸ್ನೇಹಕೂಟಕ್ಕೆ ಆಹ್ವಾನ ಬರುತ್ತಿತ್ತಾದರೂ, ಎಂದೂ ಹೋಗಲಾಗಿರಲಿಲ್ಲ. ಆದರೆ ಈ ಮಾರ್ಚ್ 15ರಂದು ಅಲ್ಲಿ ಹಾಜರಾಗಿದ್ದೆ.
ಇಲ್ಲಿ ಒಂದು ವಿಚಾರವನ್ನು ಸ್ಪಷ್ಟಪಡಿಸಬೇಕು. ಮಾರ್ಚ್ 15 ರಾಣಿಯ ಹುಟ್ಟುಹಬ್ಬದ ಆಚರಣೆಯ ದಿನಮಾತ್ರ. ಆಕೆ ನಿಜವಾಗಿ ಹುಟ್ಟಿದ ದಿನ ಅಲ್ಲ. ಆಕೆಯ ನಿಜವಾದ ಹುಟ್ಟಿನ ದಿನ ಎಪ್ರಿಲ್ 21. ಆಳ್ವಿಕೆಗೆ ಒಳಪಟ್ಟ ರಾಷ್ಟ್ರಗಳ ಹವಾಮಾನಕ್ಕೆ ತಕ್ಕಂತೆ ಬೇರೆ ಬೇರೆ ದಿನಗಳನ್ನು ಹುಟ್ಟುಹಬ್ಬದ ಆಚರಣೆಯ ದಿನಗಳಾಗಿ ಗುರುತಿಸಲಾಗಿದೆ. ಹಾಗಾಗಿ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಮತ್ತು ಇತರ ಕಾಮನ್‌ವೆಲ್ತ್ ರಾಷ್ಟ್ರಗಳಲ್ಲಿ ಆಚರಣೆಯ ದಿನಾಂಕಗಳು ಬದಲಾಗುತ್ತವೆ. ಒಂದರ್ಥದಲ್ಲಿ ರಾಣಿಯ ಹುಟ್ಟುಹಬ್ಬ ವರ್ಷವಿಡೀ ನಡೆಯುತ್ತದೆ. ಬ್ರಿಟನ್‌ನ ರಾಜಮನೆತನಕ್ಕೆ ಸಂಬಂಧಿಸಿದ ಹಲವು ವೈಭವದ ಆಚರಣೆಗಳಲ್ಲಿ ಈ ರೀತಿಯ ವೈಚಿತ್ರ್ಯ ಮತ್ತು ವೈರುಧ್ಯ ಸಹಜ.

ಬೆಂಗಳೂರಿನ ತಾಜ್ ವೆಸ್ಟ್‌ಎಂಡ್ ಹೊಟೇಲಿನ ಆವರಣದಲ್ಲಿ ‘ಪ್ರಿನ್ಸ್ ಆಫ್ ವೇಲ್ಸ್ ಲಾನ್ಸ್’ ಎಂದು ಕರೆಯಲಾಗುವ ಅಚ್ಚುಕಟ್ಟಾದ ಹುಲ್ಲು ಹಾಸಿನ ಅಂಗಣ ಇದೆ. ಆ ಅಂಗಣದ ಸುತ್ತಲಿನ ಸಜ್ಜಿಕೆ ಯುರೋಪಿನ ಗ್ರಾಮೀಣ ಪರಿಸರವನ್ನು ಹೋಲುತ್ತದೆ. ಅಲ್ಲಿ ನಿಮ್ಮನ್ನು ಎಲ್ಲೂ ದಾಟಿಸದ ಒಂದು ಪುಟ್ಟ ಸೇತುವೆಯೂ ಇದೆ. ಈ ಸ್ನೇಹಕೂಟವನ್ನು ಆ ಅಂಗಣದಲ್ಲಿ ಏರ್ಪಡಿಸಲಾಗಿತ್ತು. ನಾನು ಒಳಗೆ ಕಾಲಿಟ್ಟಾಗ ಆ ಸಂಜೆಗೆ ಸಲ್ಲುವ ಪುಟ್ಟ ಭಾಷಣಗಳು ನಡೆಯುತ್ತಿದ್ದವು. ಪರಿಚಯ ಇರುವ ಕೆಲವರಿಗೆ ನಮಸ್ಕರಿಸಿ, ನಾನು ಆ ಸೇತುವೆಯ ಮೇಲೆ ನಿಂತುಕೊಂಡೆ. ನಿಂತು ಯೋಚಿಸುತ್ತಿದ್ದಂತೆ ಹಲವು ಪ್ರಶ್ನೆಗಳು ನನ್ನ ತಲೆಯಲ್ಲಿ ಗಿರಿಗಿಟ್ಲೆ ಹೊಡೆಯಲು ಪ್ರಾರಂಭಿಸಿದವು.
ಸಾಮ್ರಾಜ್ಯವನ್ನು ಕಳೆದುಕೊಂಡು, ಕರ್ನಾಟಕಕ್ಕಿಂತಲೂ ಪುಟ್ಟದಾದ ಭೂಪ್ರದೇಶವಾಗಿ ಉಳಿದಿರುವ ಈ ದೇಶ, ರಾಣಿಯ ಹುಟ್ಟುಹಬ್ಬದ ಆಚರಣೆಯಲ್ಲಿ ಸಂಭ್ರಮವನ್ನು ಕಾಣುವುದು ಸೋಜಿಗದ ಸಂಗತಿ ಅಲ್ಲವೇ? ‘ನಾವು ಅಳಿದಿರಬಹುದು, ಆದರೆ ಹಿಂದೊಮ್ಮೆ ನಿಮ್ಮನ್ನು ಆಳಿದ್ದೆವು’ ಎಂಬ ಒಂದು ಕ್ಷುಲ್ಲಕ ಸಂಗತಿಯನ್ನು ತಿಳಿಸಿ ಹೇಳಲು ಇಷ್ಟೊಂದು ಹಣ ವ್ಯಯ ಮಾಡಬೇಕೆ, ಅದೂ ಬ್ರಿಟನ್ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಸಂದರ್ಭದಲ್ಲಿ? ಚರಿತ್ರೆಯ ಮೂಢಸಂಪ್ರದಾಯಕ್ಕೆ ಜೋತು ಬೀಳುವುದು ಎಂದರೆ ಇದೇ ಏನು? ಬೇರೆಯವರ ಕಣ್ಣಲ್ಲಿ ನಾವು ನಗೆಪಾಟಲಾದರೂ ಸರಿಯೆ, ನಾವು ನಮ್ಮ ತಲೆಭಾರವನ್ನು ಇಳಿಸೆವು, ‘ಬ್ರಿಟನ್’ ಹೆಸರಿನ ಹಿಂದೆ ಅಂಟಿಕೊಂಡಿರುವ ‘ಗ್ರೇಟ್’ ಎಂಬ ಶಬ್ದವನ್ನು ತೆಗೆಯೆವು ಎಂಬ ಹಠವೆ? ನಾನು ‘ಸರ್ವಶ್ರೇಷ್ಠ’, ನಾನು ‘ಉತ್ತಮೋತ್ತಮ’ ಎಂಬ ಕಲ್ಪಿತ ಭ್ರಮೆಯಲ್ಲಿ ಬೀಗುವ ಮನಸ್ಥಿತಿಯಲ್ಲಿರುವವರು ಯಾರು?

ಈ ಪ್ರಶ್ನೆಗಳು ನನ್ನಲ್ಲಿ ಸುಳಿದಾಡುತ್ತಿದ್ದಂತೆ ನನ್ನ ಮನಸ್ಸಿಗೆ ಬಂದದ್ದು ಈಚೆಗೆ ಲಂಡನ್‌ನಲ್ಲಿ ಸಂಭವಿಸಿದ ಮಂಗಳೂರಿನ ದಾದಿ ಜೆಸಿಂತಾಳ ಸಾವು. ಅನ್ಯಾಯದ ಆ ಸಾವಿನ ಹಿಂದಿರುವ ವ್ಯವಸ್ಥೆಯ ಕ್ರೌರ್ಯ ಮತ್ತು ಅದು ಹೇರಬಹುದಾದ ಒತ್ತಡ ದೊಡ್ಡ ಅಂಶವಾದರೆ, ಆ ಘಟನೆಯ ಮೂಲದಲ್ಲಿದ್ದದ್ದು ಬ್ರಿಟನ್‌ನ ರಾಜಮನೆತನದ ವ್ಯಂಗ್ಯ. ಆಸ್ಟ್ರೇಲಿಯಾದ ರೇಡಿಯೊ ಜಾಕಿಗಳು ಪ್ರಯತ್ನ ಪಟ್ಟಿದ್ದು ಎಲಿಜಬೆತ್ ರಾಣಿಯ ಅಣಕ. ಈ ಅಣಕ ಎಂದೋ ಒಮ್ಮೆ ನಡೆಯುವಂತಹುದಲ್ಲ. ಬ್ರಿಟನ್ ಮತ್ತು ಕಾಮನ್‌ವೆಲ್ತ್ ರಾಷ್ಟ್ರಗಳಲ್ಲಿ ಪ್ರತಿದಿನ ನಡೆಯುವಂತಹುದು. ಇದರ ನಡುವೆ ಜೆಸಿಂತಾ ಬಲಿಯಾದದ್ದು ಮಾತ್ರ ದುರದಷ್ಟ. ನಾನು ಹೇಳಲು ಪ್ರಯತ್ನಿಸುತ್ತಿರುವುದು ಬ್ರಿಟನ್‌ನ ರಾಜಮನೆತನ ವ್ಯಂಗ್ಯದ ಪ್ರಪಾತದಡಿಯಲ್ಲಿ ಸಿಕ್ಕಿಕೊಂಡಿದೆ ಮತ್ತು ಅದು ಬೇರೆ ಬೇರೆ ರೂಪಗಳಲ್ಲಿ ಲಂಡನ್‌ನ ಬೀದಿಗಳಲ್ಲಿ, ಮಾಧ್ಯಮಗಳಲ್ಲಿ ಪ್ರತಿದಿನ ಪ್ರದರ್ಶನಗೊಳ್ಳುತ್ತದೆ. ರಾಜಮನೆತನದ ವ್ಯಂಗ್ಯ ಮಾಡುವುದು ಒಂದು ಉದ್ಯೋಗಕ್ಷೇತ್ರವಾಗಿಯೂ ರೂಪುಗೊಂಡಿದೆ. ಇದು ಹಲವರ ಹೊಟ್ಟೆಪಾಡಿನ ಹಾದಿಯಾಗಿದೆ.
ರಾಜಕುಮಾರಿ ಕೇಟ್ ಮಿಡಲ್‌ಟನ್‌ಳ (ಡಯಾನಳ ಸೊಸೆ) ಅರೆನಗ್ನ ಚಿತ್ರಗಳನ್ನು ಯುರೋಪಿನ ಪತ್ರಿಕೆಗಳು ತಾ ಮುಂದು, ನಾ ಮುಂದು ಎನ್ನುವ ರೀತಿಯಲ್ಲಿ ಕೆಲವು ತಿಂಗಳುಗಳ ಹಿಂದೆ ಪ್ರಕಟಿಸಿದ್ದಾಗಲಿ; ರಾಜಕುಮಾರ ಹ್ಯಾರಿಯ (ಡಯಾನಾಳ ಎರಡನೇ ಮಗ) ಕೀಟಲೆಗಳನ್ನು ಯುಟ್ಯೂಬ್‌ನಲ್ಲಿ ಪ್ರಚಾರಗೊಳಿಸಿದ್ದಾಗಲಿ; ರಾಜಕುಮಾರ ಆ್ಯಂಡ್ರೂನ (ಎಲಿಜಬೆತ್ ರಾಣಿಯ ಎರಡನೇ ಮಗ) ವಿಚ್ಛೇದಿತ ಪತ್ನಿ ಸಾರಾ ರ್ಗ್ಯೂಸನ್‌ಳ ನಿಲ್ಲದ ಹಣದಾಹದ, ದುಂದುವೆಚ್ಚದ ಕತೆಗಳಾಗಲಿ; ರಾಜಕುಮಾರ ಚಾರ್ಲ್ಸ್ ಮತ್ತು ಕ್ಯಾಮಿಲ್ಲಾ ಪಾರ್ಕರ್ ಬೌಲ್ಸ್‌ನ ಇಳಿವಯಸ್ಸಿನ ಪ್ರೇಮದ ಕತೆಗಳಾಗಲಿ, ಬ್ರಿಟನ್‌ನ ರಾಜಮನೆತನದ ದಯನೀಯ ಸ್ಥಿತಿಯನ್ನು ತೋರಿಸುತ್ತವೆ. ಜನಮಾನಸಕ್ಕೆ ಇದು ಒಪ್ಪಿತವಾಗಿಲ್ಲದಿದ್ದರೆ ಮಾಧ್ಯಮಗಳು ಈ ಕತೆಗಳನ್ನು ಹೇಳಲು ಹಿಂಜರಿಯುತ್ತಿದ್ದವು. ಈಗ ರಾಜಮನೆತನವನ್ನು ಕೆಡಹುವುದು ಸರ್ವಋತುವಿನ ಆಟವಾಗಿ ರೂಪುಗೊಂಡಿದೆ. ಡಯಾನಾ ಬದುಕಿದ್ದಾಗ ರಾಜಮನೆತನದ ವಿರುದ್ಧ ವಿಷ ಕಾರಿದ್ದ ಸಂದರ್ಶನವನ್ನು ಬಿ.ಬಿ.ಸಿ ತರಹದ ‘ಸಭ್ಯ’ ವಾಹಿನಿಯೂ ಪ್ರಸಾರ ಮಾಡಿತ್ತು ಎಂಬುದನ್ನು ಮರೆಯಬಾರದು.
ಕೆಲವು ವಾರಗಳ ಹಿಂದೆ ಬ್ರಿಟನ್‌ನ ಪ್ರಧಾನ ಮಂತ್ರಿ ಡೇವಿಡ್ ಕ್ಯಾಮರೂನ್ ಭಾರತಕ್ಕೆ ಭೇಟಿ ಇತ್ತಾಗ, ಲಂಡನ್‌ನಿಂದ ಹೊರಡುವ ವಾರಪತ್ರಿಕೆ ‘ದಿ ಇಕಾನಮಿಸ್ಟ್’ (ಮುಕ್ತ ಮಾರುಕಟ್ಟೆ ವ್ಯವಸ್ಥೆಯ ಪರವಾಗಿ ಸದಾ ವಾದ ಮಂಡಿಸುವ ಪತ್ರಿಕೆ) ಕೂಡ ತನ್ನ ಅಂಕಣವೊಂದರಲ್ಲಿ ಬಳಸಿದ ಭಾಷೆ ಮತ್ತು ಚಿತ್ರ (illustration) ಜಾಗತಿಕ ಮಟ್ಟದಲ್ಲಿ ಬ್ರಿಟನ್‌ನ ಪರಿಸ್ಥಿತಿ ಮತ್ತು ಗ್ರಹಿಕೆಯನ್ನು ತೆರೆದಿಡುವಂತಿತ್ತು. ಆ ಚಿತ್ರದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಸೋನಿಯಾ ಗಾಂಧಿ ದಿಲ್ಲಿ ದರ್ಬಾರನ್ನು ನಡೆಸುತ್ತಿರುವ ಸಾಮ್ರಾಟ ಮತ್ತು ಸಾಮ್ರಾಜ್ಞಿಯಂತೆ ಕಂಡರೆ, ಕ್ಯಾಮರೂನ್ ಅವರ ಮುಂದೆ ಬಂಡವಾಳ ಹೂಡಿಕೆಯ ದಯಾಭಿಕ್ಷೆಯನ್ನು ಕೇಳುತ್ತಿರುವವನಂತೆ ಕಾಣುತ್ತಿದ್ದ. ಕಾಲಚಕ್ರ ಒಂದು ಪರಿಪೂರ್ಣ ಸುತ್ತು ಬಂದಿರುವುದಕ್ಕೆ ಈ ಚಿತ್ರ ಕನ್ನಡಿ ಹಿಡಿದಂತಿತ್ತು. ಬ್ರಿಟನ್‌ನ ಹಲವು ವಿಶ್ವವಿದ್ಯಾಲಯಗಳು ಇಂದು ನಡೆಯುತ್ತಿರುವುದು ಭಾರತ ಮತ್ತು ಇತರ ಕಾಮನ್‌ವೆಲ್ತ್ ರಾಷ್ಟ್ರಗಳ ವಿದ್ಯಾರ್ಥಿಗಳು ತೆರುತ್ತಿರುವ ದುಬಾರಿ ಶುಲ್ಕದಿಂದಾಗಿ ಎಂಬುದು ಬಹಳಷ್ಟು ಸತ್ಯ.
ಜನಸಾಮಾನ್ಯರ ವಲಯದಲ್ಲಿ ಮತ್ತು ಮಾಧ್ಯಮಗಳಲ್ಲಿ ಮಾತ್ರ ಬ್ರಿಟನ್ ಕುರಿತಾದ ಈ ರೀತಿಯ ವ್ಯಂಗ್ಯ, ಕುಚೇಷ್ಟೆ ಇದೆ ಎಂದರೆ ಅದು ಪೂರ್ಣ ಚಿತ್ರವನ್ನು ಕೊಟ್ಟಂತೆ ಆಗುವುದಿಲ್ಲ. ಇದು ಬೌದ್ಧಿಕ ಮತ್ತು ರಾಜತಾಂತ್ರಿಕ ವಲಯಗಳಲ್ಲಿ ಚರ್ಚೆಯ ಸರಕಾಗಿ ಹಲವು ದಶಕಗಳೇ ಕಳೆದಿವೆ. ಅಮೆರಿಕದ ಅಧ್ಯಕ್ಷ ಹ್ಯಾರಿ ಟ್ರೂಮನ್‌ನ ಸರಕಾರದಲ್ಲಿ ವಿದೇಶಾಂಗ ಸಚಿವರಾಗಿದ್ದ ಡೀನ್ ಎಚಿಸನ್ ಆಡಿದ ಮಾತುಗಳು ಈ ಚರ್ಚೆಗಳಲ್ಲಿ ಬಹಳಷ್ಟು ಪ್ರತಿಧ್ವನಿಸುತ್ತವೆ. ಅವರು ಒಮ್ಮೆ ”ಬ್ರಿಟನ್ ತನ್ನ ಸಾಮ್ರಾಜ್ಯವನ್ನು ಕಳೆದುಕೊಂಡ ನಂತರ ಜಗತ್ತಿನಲ್ಲಿ ತನ್ನ ಪಾತ್ರವೇನು ಎಂಬುದನ್ನು ಕಂಡುಕೊಳ್ಳಬೇಕಿದೆ,” ಎಂದು ಹೇಳಿದ್ದ. ಅವರು ಈ ಮಾತು ಆಡಿದ್ದು ಐದು ದಶಕಗಳ ಹಿಂದೆ. ಆದರೆ ಈ ಮಾತುಗಳು ಇಂದಿಗೂ ಪ್ರಸ್ತುತತೆಯ ತಾಜಾತನವನ್ನು ಹೊಂದಿವೆ. ಬ್ರಿಟನ್ ತನ್ನ ಪಾತ್ರದ ಕುರಿತಾದ ಗೊಂದಲವನ್ನು ಇನ್ನೂ ನಿವಾರಿಸಿಕೊಂಡಿಲ್ಲ. ಈ ಎಡೆಬಿಡಂಗಿತನದಿಂದ ಹೊರಬರಲು ಅದಕ್ಕೆ ಸಾಧ್ಯವಾಗದೆ ಇರುವುದಕ್ಕೆ ಸಾಕ್ಷಿಯಾಗಿ ಅದು ಕಳೆದ ಮೂರು ವರ್ಷಗಳಿಂದ ಮುದ್ರಿಸುತ್ತಿರುವ ಅಧಿಕತ ಕ್ಯಾಲೆಂಡರ್ ನೋಡಬೇಕು. ಆ ಕ್ಯಾಲೆಂಡರಿನಲ್ಲಿ ‘ಬ್ರಿಟನ್ ಗ್ರೇಟ್ ಏಕೆ?’ ಮತ್ತು ‘ಬ್ರಿಟನ್‌ನಲ್ಲಿ ಏನೇನು ಗ್ರೇಟ್?’ ಎಂಬ ಪ್ರಶ್ನೆಯಲ್ಲಿ ‘ಗ್ರೇಟ್’ ಎಂಬ ಪದವನ್ನು ಕೆಂಪಾಕ್ಷರಗಳಲ್ಲಿ ಅಚ್ಚುಹಾಕಿಸಿ ಒಂದು ರೀತಿಯ ವಿಸ್ಮತಿಗೆ, ಹಗಲುಗನಸಿಗೆ ಬಿದ್ದಿದ್ದಾರೆ. ಔನ್ನತ್ಯ ತಲುಪಿ ಕೆಳಗೆ ಬಿದ್ದವರ ಪಡಿಪಾಟಲು ಇದು. ಕೆಲವೊಮ್ಮೆ ನಮ್ಮದೇ ದೇಶದಲ್ಲಿ ಬೆಂಗಾಲಿಗಳಲ್ಲಿ ಈ ಪಡಿಪಾಟಲು ನಮಗೆ ಕಾಣ ಸಿಗುತ್ತದೆ.

ಸುಮಾರು 16 ವರ್ಷಗಳ ಹಿಂದೆ, ಅಂದರೆ 1997ರಲ್ಲಿ ಪ್ರತಿಷ್ಠಿತ ‘ಗ್ರಾಂಟ’ ಚಾತುರ್ಮಾಸಿಕ ಪತ್ರಿಕೆ ಬ್ರಿಟನ್‌ನ ಅವನತಿಯ ವಿಚಾರವನ್ನು ಕುರಿತಂತೆ ಒಂದು ವಿಶೇಷ ಸಂಚಿಕೆಯನ್ನು ಹೊರತಂದಿತು. ಅದರ ಮುಖಪುಟದ ಮೇಲಿನ ಶೀರ್ಷಿಕೆ ಹೀಗಿತ್ತು: ‘What Happened To Us? Britain’s Valedictory Realism’ (ನಮಗೇನಾಯಿತು? ಬ್ರಿಟನ್‌ನ ವಿದಾಯದ ವಾಸ್ತವತಾವಾದ). ಅದರಲ್ಲಿ ಪತ್ರಿಕೆಯ ಸಂಪಾದಕ ಇಯಾನ್ ಜ್ಯಾಕ್ ಆ ದೇಶದ ಸ್ಥಿತಿಯನ್ನು ವಿಸ್ತೃತವಾಗಿ ವಿವರಿಸುತ್ತಾರೆ. ಅವರ ಮಾತಿನ ಸಾರ ಹೀಗಿದೆ: ‘ಬ್ರಿಟಿಷ್ ರಾಜಕಾರಣ ಅದರ ಅವನತಿಯನ್ನು ಸುಧಾರಿಸುವ ಕಾರ್ಯಕ್ಕಾಗಿಯೇ ಇದೆಯೇನೋ ಎಂಬಂತಾಗಿದೆ. ಬ್ರಿಟನ್‌ನ ಅವನತಿ ಎಂದರೆ ನಾವು ಅದನ್ನು ತಪ್ಪಾಗಿ ಗ್ರಹಿಸಿದ್ದೆವು. ನಾವು ಈ ಅವನತಿಯನ್ನು ತಾತ್ಕಾಲಿಕ ಎಂದು ತಿಳಿದಿದ್ದೆವು, ಶರತ್ಕಾಲದಲ್ಲಿ ಎಲೆಗಳ ಮುದುರುವಿಕೆಯಂತೆ. ಇದು ನಮ್ಮ ಬೇರುಗಳಿಗೇ ಬಡಿಯುತ್ತದೆ ಎಂದು ನಾವು ಭಾವಿಸಿರಲಿಲ್ಲ. ಬ್ರಿಟಿಷ್ ಸಾಮ್ರಾಜ್ಯದ ಗಳಿಕೆಗಳು ಎಂಬ ಕೊಂಬೆಗಳು ಸ್ವಲ್ಪ ಅಲುಗಾಡಿ, ಹಳೆಯ ಕೆಲವು ಉದುರಿಹೋಗಬಹುದು, ಆದರೆ ಭೂಮಿಯಲ್ಲಿ ಬೇರಿನ ಹಾಗೆ ಅಡಗಿರುವ ನಮ್ಮ ಮಾಂತ್ರಿಕ ಒಡವೆಗಳಿಗೆ ಯಾವುದೇ ತೊಂದರೆಯಿಲ್ಲ ಎಂಬ ಗ್ರಹಿಕೆಯಲ್ಲಿದ್ದೆವು. ಆ ಒಡವೆಗಳೆಂದರೆ, ನಮ್ಮ ರಾಜ ಮನೆತನ, ನಮ್ಮ ಸಂಸತ್ತು, ಬಿ.ಬಿ.ಸಿ, ‘ಸಂಭಾವಿತರು’ ಎಂದು ಕರೆಯಲ್ಪಡುವ ನಮ್ಮ ಜನ ಮತ್ತು ನಮ್ಮ ಮನೆ ಬಾಗಿಲಿಗೆ ಬಂದು ತಲುಪುವ ಹಾಲಿನ ಬಾಟಲು. ನಮ್ಮ ಮೂಲ ಸೆಲೆಗೆ ಎಳ್ಳಷ್ಟೂ ತೊಂದರೆ ಇಲ್ಲ ಎಂದು ತಿಳಿದಿದ್ದೆವು. 1980ರ ದಶಕದಲ್ಲಿ ಮಾರ್ಗರೆಟ್ ಥ್ಯಾಚರ್ ನಮ್ಮ ಪ್ರಧಾನಿಯಾಗಿದ್ದಾಗ, ಅದು ಪುನರುತ್ಥಾನದ ಕಾಲ ಎಂದೇ ಹಲವರು ತಿಳಿದಿದ್ದರು. ಅರ್ಜೇಂಟೀನಾದಲ್ಲಿ ನಾವು ಯುದ್ಧ ಗೆದ್ದೆವು, ರಾಜಮನೆತನಕ್ಕೆ ಡಯಾನಾ ಎಂಬ ಸುಂದರ ರಾಜಕುಮಾರಿಯನ್ನು ಕರೆತಂದೆವು, ಕೆಲವರು ಬಡವರಾಗಿ ಉಳಿದರೂ, ಬಹಳಷ್ಟು ಜನ ಶ್ರೀಮಂತರಾದರು. ಥ್ಯಾಚರ್ ಬ್ರಿಟನ್‌ನ ಹಿಂದೆ ‘ಗ್ರೇಟ್’ ಎಂಬ ಪದವನ್ನು ಮತ್ತೆ ತೊಡಿಸಿಯೇ ತೊಡಿಸುತ್ತೇನೆ ಎಂಬ ಹಠ ತೊಟ್ಟಂತಿದ್ದರು. ಅಮೆರಿಕದ ರೋನಾಲ್ಡ್ ರೇಗನ್ ಜತೆ ಕೈಜೋಡಿಸಿ ಮುಂದೆ ನಡೆದರು. ಆದರೆ ಆ ಕಾಲವನ್ನು ಈಗ ನಾವು ಒಂದು ಕನಸೆಂದು ಮಾತ್ರ ಕರೆಯಬಹುದು. ಬಹುಶಃ 80ರ ದಶಕ ಬ್ರಿಟಿಷ್ ಗರಿಮೆಯ ಕೊನೆಯ ಬೀಸಿನ ಕಾಲ. ಇಂದು ಬ್ರಿಟಿಷ್ ಸಂಸ್ಥೆಗಳು ತಮ್ಮ ಗರಿಮಾವಸ್ಥೆಯ ಪ್ರಶಾಂತತೆಯನ್ನು ಕಳೆದುಕೊಂಡಿವೆ. ಇದೆಲ್ಲದರ ಕೇಂದ್ರದಲ್ಲಿ ನಮ್ಮ ರಾಜಮನೆತನವಿದೆ.’ ಇವು ಇಯಾನ್ ಜ್ಯಾಕ್‌ರ ಆತ್ಮಶೋಧದ ಮಾತುಗಳೇ ಸರಿ.
ನಾನು ಸ್ನೇಹಕೂಟಕ್ಕೆ ತೆರಳಿದ್ದ ವೆಸ್ಟ್‌ಎಂಡ್ ಹೊಟೇಲಿನ ಹುಲ್ಲುಹಾಸಿನ ಮೂಲೆಯಲ್ಲಿ ಬ್ರಿಟಿಷ್ ಹೆಗ್ಗಳಿಕೆಯ ಗುರುತಾಗಿ ‘ಜಾಗ್ವಾರ್’ ಕಾರೊಂದನ್ನು ನಿಲ್ಲಿಸಲಾಗಿತ್ತು. ನನಗೆ ಒಂದು ಸಣ್ಣ ನಗು ಬಂತು. ‘ಜಾಗ್ವಾರ್’ ಈಗ ಅಚ್ಚ ಬ್ರಿಟಿಷ್ ಕಾರಾಗಿ ಉಳಿದಿಲ್ಲ. ಅದರ ಮಾಲೀಕತ್ವದ ಬಹುಭಾಗ ನಮ್ಮ ದೇಶದ ಟಾಟಾಗಳದ್ದು. ಎಂತಹ ವಿಪರ್ಯಾಸ!
 

‍ಲೇಖಕರು G

March 25, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

೧ ಪ್ರತಿಕ್ರಿಯೆ

  1. laxminarasimha

    ನಿಜಾಮರ ಆಡಳಿತದಲ್ಲಿದ್ದ ಪ್ರದೇಶದಿಂದ ಬಂದವನಾದ ನಾನು, ಚಿಕ್ಕಂದಿನಲ್ಲಿ ಕೇಳುತ್ತಿದ್ದ ವ್ಯಂಗ್ಯಪೂರ್ಣವಾದ ಕಥೆ ಇದು: ಒಂದೊಮ್ಮೆ ರಾಜಾಶ್ರಯದಲ್ಲಿ ಮರಿ ರಾಜನಂತೆ ಮೆರೆದು, ರಾಜಾಶ್ರಯ ತಪ್ಪಿಹೋದಮೇಲೆ, ತನ್ನ ಹೊಟ್ಟೆ ಹೊರೆಯಲೆಂದು, ಹೊಲ, ಬೆಟ್ಟಗಳಿಂದ, ಕಟ್ಟಿಗೆಯನ್ನು ಆಯ್ದು ಮಾರಿ ಜೀವನ ನಡೆಸಬೇಕಾಗಿ ಬಂದ ವ್ಯಕ್ತಿಯೊಬ್ಬರ ಕತೆಯಿದು. ಹೀಗೆ ಒಂದು ದಿನ ಕಟ್ಟಿಗೆಯ ’ಹೊರೆ’ಕಟ್ಟಿಕೊಂಡು, ಮನೆ ಕಡೆ ಬರುರುವಾಗ ಒಬ್ಬ ವಯಸ್ಸಾದ ರೈತನೊಬ್ಬ ಎದುರಾಗಿ ಮುಗ್ಧವಾಗಿಯೇ ತನ್ನ ಮಾಮೂಲಿನಂತೆ ತಲೆ ಬಾಗೆ ಈತನಿಗೆ ವಂದಿಸಿದ. ಆದರೆ ಅದರಿಂದ ತೃಪ್ತನಾಗದ ಈ ಮಾಜೀ ಮರಿರಾಜ, ಆ ರೈತನನ್ನು, ತಡೆದು ನಿಲ್ಲಿಸಿ; ತನ್ನ ತಲೆಯಮೇಲಿನ ಕಟ್ಟಿಗೆ ಹೊರೆಯನ್ನು ನೆಲಕ್ಕೆ ಹಾಕಿ, ತಾನು ಆ ಹೊರೆಯಮೇಲೆ “ಆಸೀನನಾಗಿ” ನಂತರ ಆ ರೈತನನ್ನು ಕರೆದು ಅತಿ ಗಂಭೀರವಾಗಿ ಹೇಳಿದ: “ಈಗ ಸಲಾಂ ಮಾಡು”!!!!!. ಈಗಿನ ಬ್ರಿಟಿಷ್ “ರಾಣಿ”ಯ :ಹುಟ್ಟು ಹಬ್ಬದ ಸಂಭ್ರಮ’ವನ್ನು ಸುಗತ ಅವರು ವರ್ಣಿಸುತ್ತಿರುವ ರೀತಿ ಕಂಡು ಈ ಕತೆ ನೆನಪಾಯಿತು. ಸುಗತ ಅವರದು ಸಮತೂಕದ ಬರಹ. ಢನ್ಯವಾದ– ಲಕ್ಷ್ಮೀನರಸಿಂಹ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: