ಸುಗತ ಬರೆಯುತ್ತಾರೆ: ರುಶ್ದಿಯ ಲೇಖನ ಮತ್ತು ಚುನಾವಣೆ ಪಾಠಗಳು

ಸುಗತ ಶ್ರೀನಿವಾಸರಾಜು

‘ವಿಜಯ ಕರ್ನಾಟಕ’ದಲ್ಲಿ ಪ್ರಕಟಿತ

ನಾವು ದೇಹವನ್ನು ದಂಡಿಸಿ ಪ್ರದರ್ಶಿಸುವ ಶೌರ್ಯಕ್ಕೆ (physical bravery) ಕೊಡುವ ಮಹತ್ವವನ್ನು ಈಚಿನ ದಿನಗಳಲ್ಲಿ ನೈತಿಕ ಧೈರ್ಯಕ್ಕೆ (moral courage) ನೀಡುತ್ತಿಲ್ಲ ಎಂಬ ಮಾತನ್ನು ಲೇಖಕ ಸಲ್ಮಾನ್ ರುಶ್ದಿ, ಕಳೆದ ವಾರ ‘ನ್ಯೂಯಾರ್ಕ್ ಟೈಮ್ಸ್’ನಲ್ಲಿ ಬರೆದ ಲೇಖನದಲ್ಲಿ ಪ್ರತಿಪಾದಿಸಿದ್ದಾರೆ. ಬಹಳ ಸ್ಫುಟವಾಗಿ, ನಿದರ್ಶನಗಳ ಸಹಿತ ಬರೆದಿರುವ ಈ ಲೇಖನ ನನಗೆ ಬಹಳ ಮೆಚ್ಚುಗೆಯಾಯಿತು. ಒಂದು ಸ್ವತಂತ್ರ ಲೇಖನವಾಗಿ ಅದು ನನಗೆ ಇಷ್ಟವಾಗುವುದರ ಜೊತೆಗೆ, ಈಗ ನಡೆಯುತ್ತಿರುವ ಚುನಾವಣೆಯ ಹಿನ್ನೆಲೆಯಲ್ಲಿ ಅದು ಹುಟ್ಟಿಸಿದ ಸಾಂದರ್ಭಿಕ ರಿಂಗಣಗಳಿಂದಾಗಿ ಮತ್ತಷ್ಟು ಆಪ್ತವಾಯಿತು.
ಆ ಲೇಖನದಲ್ಲಿ ರುಶ್ದಿ ಪ್ರತಿಪಾದಿಸುವ ಕೆಲವು ಮುಖ್ಯ ಅಂಶಗಳನ್ನು ಮೊದಲು ಅರ್ಥಮಾಡಿಕೊಂಡು, ತದನಂತರ ನಮ್ಮ ಸಂದರ್ಭದ ಮಾತುಗಳನ್ನು ಒರೆಗೆ ಹಚ್ಚಿ ನೋಡಬಹುದು: ನಾವು ಬದುಕುತ್ತಿರುವ ಈ ಗೊಂದಲದ ಸಮಯದಲ್ಲಿ ‘ನೈತಿಕ ಧೈರ್ಯ’ವನ್ನು ಅಂದಾಜು ಮಾಡಿ ಅರ್ಥಮಾಡಿಕೊಳ್ಳುವುದಕ್ಕಿಂತ, ನೇರವಾಗಿ ಕಣ್ಣಿಗೆ ಕಟ್ಟುವ ‘ಶೌರ್ಯ’ವನ್ನು ಮಾತ್ರ ನಾವು ಮೆಚ್ಚುತ್ತಿದ್ದೇವೆ. ಬಾಸ್ಟನ್ ಬಾಂಬ್ ಸ್ಫೋಟದ ಉದಾಹರಣೆಯನ್ನಿತ್ತು ಅವರು ಹೇಳುತ್ತಾರೆ, ಅಲ್ಲಿ ಮುನ್ನುಗ್ಗಿ ಜನರ ಜೀವ ಉಳಿಸಿದ ವ್ಯಕ್ತಿ, ಅಥವಾ ಪೋಲಿಸರು ಮಾಡಿದ ಸಾಹಸ ನಮಗೆ ಸುಲಭವಾಗಿ ಅರ್ಥವಾಗುತ್ತದೆ, ಹಾಗಾಗಿ ಅವರನ್ನು ನಾವು ಅತಿ ಶೀಘ್ರವಾಗಿ ಹೀರೋಗಳನ್ನಾಗಿಸುತ್ತೇವೆ. ಹಾಗೆಯೇ ಯುದ್ಧಕ್ಕೆ ಹೋಗುವ ಯೋಧರನ್ನು ಅಥವಾ ಯುದ್ಧದ ಮೈದಾನದಿಂದ ಹಿಂತಿರುಗುವ ಹುತಾತ್ಮರನ್ನು ನಾವು ತಕ್ಷಣವೆ ಸಾಹಸಿಗಳೆಂದು, ಶೌರ್ಯವಂತರೆಂದು ಒಪ್ಪಿಕೊಂಡು, ಅವರಿಗಾಗಿ ಹಾರ-ತುರಾಯಿಗಳನ್ನು ಸಿದ್ಧಪಡಿಸುತ್ತೇವೆ. ಇದರಲ್ಲಿ ಏನೂ ತಪ್ಪಿಲ್ಲ, ಆದರೆ ಅಧಿಕಾರದೊಂದಿಗೆ, ಬಲಿಷ್ಠ ಸರಕಾರಗಳೊಂದಿಗೆ ರಾಜಿ ಮಾಡಿಕೊಳ್ಳದೆ, ತಮಗೆ ಸರಿ ಕಂಡದ್ದನ್ನು, ಅನಿಸಿದ್ದನ್ನು ಹೇಳುತ್ತ, ಬರೆಯುತ್ತ ಹತ್ತಾರು ವರ್ಷ ಕಳೆಯುವವರ ನೈತಿಕ ಧೈರ್ಯವನ್ನು ಈಚಿನ ದಿನಗಳಲ್ಲಿ ನಾವು ಸಿನಿಕರಾಗಿ ಕಡೆಗಣಿಸಿದ್ದೇವೆಯೇನೋ ಎಂದು ಅನುಮಾನಪಡುತ್ತಾರೆ.

ನಮ್ಮ ಕಾಲದಲ್ಲಿ ಒಬ್ಬ ನೆಲ್ಸನ್ ಮಂಡೇಲಾ, ಒಬ್ಬಳು ಆಂಗ್ ಸ್ಯಾನ್ ಸೂ ಚಿ ತರಹದ ರಾಜಕಾರಣಿಗಳನ್ನು ಬಿಟ್ಟು ನಾವು ಬೇರೆ ಯಾರನ್ನೂ ಧೈರ್ಯವಂತರು, ಸಾಹಸಿಗಳು ಎಂದು ಸುಲಭವಾಗಿ ಒಪ್ಪುವುದಿಲ್ಲ. ನಮ್ಮ ಹಿಂದಿನ ತಲೆಮಾರಿನವರಾದ ಗಾಂಧಿ, ಲಿಂಕನ್ ತರಹದವರು ಈಗ ನಮ್ಮ ನಡುವೆ ಇಲ್ಲ ಎಂಬ ಸಿನಿಕತನವನ್ನು ನಾವು ಬೆಳೆಸಿಕೊಂಡಂತಿದೆ. ಈಗ ಒಬ್ಬರ ಹೀರೋ (ಹ್ಯೂಗೋ ಚಾವೆಜ್‌ ಅಥವ ಫಿಡೆಲ್ ಕ್ಯಾಸ್ಟ್ರೊ ತರಹದವರು) ಮತ್ತೊಬ್ಬರ ಖಳನಾಯಕರಾಗಿರುತ್ತಾರೆ. ನಾಯಕರ ಬಗ್ಗೆ, ನಾಯಕತ್ವದ ಬಗ್ಗೆ, ನೈತಿಕ ಧೈರ್ಯದ ಬಗ್ಗೆ ನಮಗೆ ಒಮ್ಮತವಿಲ್ಲ. ನಮ್ಮ ನಡುವಿನ ಕೆಲವು ರಾಜಕೀಯ ನಾಯಕರು ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡಾಗ ನಾವು ಅದನ್ನು ತಕ್ಕ ಪ್ರಮಾಣದಲ್ಲಿ ಶ್ಲಾಘಿಸುವುದಿಲ್ಲ. ಉದಾಹರಣೆಗೆ, ಫ್ರಾನ್ಸ್‌ನ ಮಾಜಿ ಅಧ್ಯಕ್ಷ ನಿಕೊಲಾಸ್ ಸರ್ಕೋಜಿ, ಲಿಬ್ಯಾದ ಸರ್ವಾಧಿಕಾರಿ ಗಡಾಫಿ ತರಹದವರ ವಿರುದ್ಧ ಎದ್ದ ಬಂಡಾಯದ ಅಲೆಯನ್ನು ನೇರವಾಗಿ ಪೋಷಿಸಿ, ಅವನ ಪಾರುಪತ್ಯ ಅಂತ್ಯವಾಗುವ ಹಾಗೆ ಮಾಡಿದ್ದನ್ನು ನಾವು ದೊಡ್ಡ ಮಾತುಗಳಲ್ಲಿ ಸ್ವಾಗತಿಸಲಿಲ್ಲ. ಸರ್ಕೋಜಿಯ ಆ ರೀತಿಯ ನಡೆಗೆ, ನಿಲುವಿಗೆ ಇದ್ದಿರಬಹುದಾದ ಉದ್ದೇಶವೇನು? ಆ ರೀತಿಯ ಮಧ್ಯಪ್ರವೇಶದಿಂದ ಅವನಿಗಾಗಿರುವ ರಾಜಕೀಯ ಲಾಭಗಳೇನು? ಎಂದಷ್ಟೇ ಯೋಚಿಸುತ್ತೇವೆಯೇ ಹೊರತು, ಆ ಮಧ್ಯಪ್ರವೇಶಿಕೆಯ ಹಿಂದಿದ್ದ ಛಲ ಮತ್ತು ಧೈರ್ಯದ ಖಾನೇಶುಮಾರಿ ಮಾಡುವುದಿಲ್ಲ ಎಂದು ರುಶ್ದಿ ಪ್ರತಿಪಾದಿಸುತ್ತಾರೆ. ಅಧಿಕಾರದ ದುರ್ಬಳಕೆ ಮಾಡುವವರ ವಿರುದ್ಧ ನಿಲುವು ತೆಗೆದುಕೊಳ್ಳುವವರನ್ನು ನಾವು ಸಂಶಯದ ಕಣ್ಣುಗಳಿಂದ ನೋಡಲು ಪ್ರಾರಂಭಿಸಿದ್ದೇವೆ ಎಂದೂ ಅವರು ಹೇಳುತ್ತಾರೆ.
ರುಶ್ದಿ ತಮ್ಮ ವಾದ ಮುಂದುವರಿಸುತ್ತ, ಕೆಲವು ದಶಕಗಳ ಹಿಂದೆ ಇದು ಹೀಗೆ ಇರಲಿಲ್ಲ, ಕಮ್ಯೂನಿಸ್ಟ್ ಸರ್ವಾಧಿಕಾರದ ವಿರುದ್ಧ ಸೆಟೆದು ನಿಂತ ಕಾದಂಬರಿಕಾರ ಶೋಲ್‌ಜನೆಸ್ಟೀನ್, ವಿಜ್ಞಾನಿ ಶಾಕರೋವ್ ಥರದವರನ್ನು ನಾವು ಕೊಂಡಾಡಿದ್ದನ್ನು ಸ್ಮರಿಸುತ್ತಾರೆ. ಹಾಗೆಯೇ ಸ್ಟ್ಯಾಲಿನ್‌ನ ವಿರುದ್ಧ ದನಿಯೇರಿಸಿ ಗಲ್ಲು ಶಿಕ್ಷೆಗೆ ಒಳಗಾದ ಕವಿ ಆಸಿಪ್ ಮಾನ್‌ಡೆಲ್‌ಸ್ಟಾಮ್‌ನ ನೈತಿಕ ಧೈರ್ಯವನ್ನು ನೆನಪಿಸಿಕೊಳ್ಳುತ್ತಾರೆ. ಆದರೆ ಈಗ, ನಮ್ಮ ಪ್ರಸ್ತುತದಲ್ಲಿ ಹಾಗೆ ಆಗುತ್ತಿಲ್ಲ. ನಾವು ರಷಿಯನ್ ಆರ್ಥೋಡಾಕ್ಸ್ ಚರ್ಚ್‌ನ ವಿರುದ್ಧ ಸೆಣಸಾಡುತ್ತಿರುವ ‘ಪುಸ್ಸಿ ರಯಟ್’ ಎಂಬ ಸಂಗೀತ ವಂದದ ಬಗ್ಗೆಯಾಗಲಿ; ಮೂಲಭೂತವಾದಿಗಳ ಗುಂಡಿಗೆ ಬಲಿಯಾದ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸಲ್ಮಾನ್ ತಸೀರ್ ಬಗ್ಗೆಯಾಗಲಿ; ತನ್ನ ಕೆಲವು ಟ್ವೀಟ್‌ಗಳಲ್ಲಿ ತನ್ನ ದೇವರನ್ನು ಆಪ್ತವಾಗಿ ಮಾತಾಡಿಸಿದ್ದಕ್ಕೆ ಜೈಲು ಸೇರಿದ ಸೌದಿ ಅರೇಬಿಯಾದ ಕವಿ ಹಂಜಕಶ್‌ಗರಿಯ ಕುರಿತಾಗಲಿ; ಮೂಲಭೂತವಾದಿಗಳಿಂದ ದೇಶದಿಂದ ಹೊರಗಟ್ಟಲ್ಪಟ್ಟ ಕಲಾವಿದ ಎಂ.ಎಫ್.ಹುಸೇನರ ಕುರಿತಾಗಲಿ ನಾವು ತಲೆಕೆಡಿಸಿಕೊಳ್ಳುತ್ತಿಲ್ಲ. ಅಸಹನೆ ಅಥವಾ ಅರ್ಥವಾಗದ ಮೌನ ಮಾತ್ರ ಈ ವ್ಯಕ್ತಿಗಳೊಂದಿಗೆ, ಅವರ ವಿಚಾರಗಳೊಂದಿಗೆ ಸ್ಪಂದಿಸಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ರುಶ್ದಿ. ಅಮೇರಿಕದಂತಹ ದೇಶದಲ್ಲಿ ಕೂಡ ನೋಮ್ ಚಾಮ್‌ಸ್ಕಿ ಮತ್ತು ಎಡ್ವರ್ಡ್ ಸಯೀದ್ ತರಹದವರ ಮಾತುಗಳ ಬಗ್ಗೆ ಇರುವ ಅಸಹನೆಯನ್ನು ಕೂಡ ಅವರು ಖಂಡಿಸುತ್ತಾರೆ. ಈ ಚಿಂತಕರ ಮಾತುಗಳು ನಮಗೆ ಪೂರ್ಣ ಒಪ್ಪಿಗೆ ಆಗದಿರಬಹುದು, ಆದರೆ ಅವರ ಮಾತನ್ನು ನಾವು ಆಲಿಸುವುದು ಮುಖ್ಯ; ಒಂದು ವ್ಯವಸ್ಥೆಯನ್ನು ಅಷ್ಟು ನಿರ್ದಾಕ್ಷಿಣ್ಯವಾಗಿ ಜರೆಯಲು ಅವರು ಪ್ರದರ್ಶಿಸುವ ಧೈರ್ಯವನ್ನು, ನೈತಿಕ ಶಕ್ತಿಯನ್ನು ನಾವು ಅವಗಾಹನೆಗೆ ತೆಗೆದುಕೊಳ್ಳುವ, ಮೆಚ್ಚುವ, ಸಂಭ್ರಮಿಸುವ ಅಗತ್ಯ ಇದೆ ಎಂದು ವಾದಿಸುತ್ತಾರೆ. ಹೀಗೆ, ‘ಶೌರ್ಯ’ದ ಪಕ್ಕದಲ್ಲಿ ‘ನೈತಿಕ ಧೈರ್ಯ’ವನ್ನು ಇರಿಸಿ, ಅನೇಕ ನಿದರ್ಶನಗಳ ಮೂಲಕ ಒಂದು ತರ್ಕಬದ್ಧ ಲೇಖನವನ್ನು ಹೆಣೆಯುತ್ತಾರೆ.


ರುಶ್ದಿ ಹೇಳಿರುವ ಮೂಲ ವಿಚಾರ ಮಾತ್ರ ನನಗೆ ಇಲ್ಲಿ ಮುಖ್ಯ. ಅವರು ಮುಂದುಮಾಡುವ ಕೆಲವು ಉದಾಹರಣೆಗಳಲ್ಲಿ ಗೊಂದಲಗಳಿವೆ, ಅದು ನಮಗೆ ಈ ಸಂದರ್ಭದಲ್ಲಿ ಮುಖ್ಯವಲ್ಲ. ಹಾಗೇ ರುಶ್ದಿಯ ನಿಲುವಿನಲ್ಲಿ ಒಂದು ರೀತಿಯ ಚಾರಿತ್ರಿಕ ಮುಗ್ಧತೆ ಇದೆ ಎಂಬುದನ್ನೂ ನಾವು ಗಮನಿಸಬೇಕು. ಆದರೂ ‘ನೈತಿಕ ಧೈರ್ಯ’ ಮತ್ತು ದೈಹಿಕ ‘ಶೌರ್ಯ’ವನ್ನು ನಾವುಗಳು ಗ್ರಹಿಸುತ್ತಿರುವ ಕುರಿತಾದ ಅವರ ಒಳನೋಟ ಸರಿಯೇ. ‘ನೈತಿಕ’ ಎಂಬುದರ ಸುತ್ತ ಈಚಿನ ವರ್ಷಗಳಲ್ಲಿ ಬೆಳೆದಿರುವ ಜಿಜ್ಞಾಸೆ, ಜೊತೆಗೆ ಅದರ ಸಾರ್ವತ್ರಿಕತೆಯ ಸುತ್ತ ಎದ್ದಿರುವ ಪ್ರಶ್ನೆಗಳು ನಮ್ಮ ತಲೆಮಾರನ್ನು ಒಂದು ಸಂಕೀರ್ಣ ಸನ್ನಿವೇಶದತ್ತ, ಗೊಂದಲದತ್ತ ದೂಡಿವೆ. ಇದರ ನಿವಾರಣೆಗೆ ಬೇಕಾದ ಪ್ರಖರ ತಾತ್ತ್ವಿಕ ಹೊಳಹು ನಮ್ಮಿಂದ ದೂರವೇ ಉಳಿದಿದೆ. ಇಂತಹ ಸಂದರ್ಭಗಳಲ್ಲಿ ನಾವು ‘ಶೌರ್ಯ’ದಂತಹ ಸುಲಭ ಗ್ರಹಿಕೆಗಳತ್ತ ತಿರುಗಿದ್ದೇವೆ. ಕ್ಲಿಷ್ಟವಾದುದೆಲ್ಲವನ್ನೂ ಬದಿಗಿಟ್ಟಿದ್ದೇವೆ ಅಥವಾ ಅದು ಇಲ್ಲವೇ ಇಲ್ಲ ಎಂಬಂತೆ ಭ್ರಾಂತನ್ನು ತಂದುಕೊಂಡಿದ್ದೇವೆ. ನಮ್ಮ ಸುತ್ತ ಈಗ ಇರುವುದೆಲ್ಲ ಸರಳೀಕರಣದ ಉಪಕರಣಗಳೇ. ಈ ನಮ್ಮ ಪರಿಸ್ಥಿತಿಯನ್ನು ರುಶ್ದಿಯ ಲೇಖನ ನೆನಪಿಸುತ್ತದೆ ಎಂಬ ಕಾರಣಕ್ಕೆ ಅದು ಮುಖ್ಯವಾಗುತ್ತದೆ. ಅವರ ಮಾತನ್ನು ಇಲ್ಲಿಗೆ ಬಿಟ್ಟು, ನಮ್ಮ ಸುತ್ತಲಿನ ಮಾತಿಗೆ ಬರೋಣ.
ನಮ್ಮ ವಿಧಾನ ಸಭೆಗೆ ಇಂದು ನಡೆಯುತ್ತಿರುವ ಚುನಾವಣೆಯಲ್ಲಿ ಅನೇಕ ಜನ ಸ್ವತಂತ್ರ ಅಭ್ಯರ್ಥಿಗಳು, ಪುಟ್ಟ, ಹೊಸ ಪಕ್ಷಗಳ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ದೊಡ್ಡ ಪಕ್ಷಗಳ ಬಿ-ಫಾರಂ ಸಿಗದೆ ಪಕ್ಷೇತರರಾಗಿರುವ ಅಥವಾ ಮತ್ತೊಬ್ಬರ ಜಾತಿಯ ಮತಗಳನ್ನು ಕೀಳಲೆಂದೇ ಸ್ಪರ್ಧಿಸುತ್ತಿರುವ ಪ್ರಾಯೋಜಿತ ಅಭ್ಯರ್ಥಿಗಳ ಬಗ್ಗೆ ನಾನಿಲ್ಲಿ ಮಾತಾಡುತ್ತಿಲ್ಲ. ವ್ಯವಸ್ಥೆಯನ್ನು ಬದಲಿಸಬೇಕು, ಭ್ರಷ್ಟ ವಾತಾವರಣಕ್ಕೆ ತಿಲಾಂಜಲಿ ಇಡಬೇಕು ಎಂದು ದೊಡ್ಡ ಆದರ್ಶ ಹೊತ್ತು, ತಮ್ಮ ವ್ಯವಹಾರ, ವತ್ತಿಯನ್ನು ಬಿಟ್ಟು, ಅಥವಾ ಹೊರದೇಶದಿಂದ ಸ್ವದೇಶಕ್ಕೆ ಮರಳಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಬಗ್ಗೆ ಮಾತನಾಡುತ್ತಿದ್ದೇನೆ. ಈ ಅಭ್ಯರ್ಥಿಗಳ ಬಗ್ಗೆ ಮಾತನಾಡಬೇಕಾದರೆ, ಅವರಿಗೆ ಅಥವಾ ಅವರ ಪ್ರಣಾಳಿಕೆಗೆ ಪತ್ರಿಕೆಯಲ್ಲಿ ಸ್ಥಳಾವಕಾಶ ಮಾಡಿಕೊಡಬೇಕಾದರೆ ನಾವು ಅತ್ಯಂತ ಸಿನಿಕರಾಗುತ್ತೇವೆ. ಇವರು ಠೇವಣಿಯನ್ನು ಉಳಿಸಿಕೊಳ್ಳಲಾರದವರು, ಎಂದು ಲೇವಡಿ ಮಾಡುತ್ತೇವೆ. ಇದು ರುಶ್ದಿ ತಮ್ಮ ಲೇಖನದಲ್ಲಿ ಹೇಳುವ ಸಿನಿಕತನಕ್ಕೆ ಬಹಳ ಹತ್ತಿರವಾದದ್ದು. ಒಂದು ದೊಡ್ಡ, ಬೇರೂರಿರುವ ವ್ಯವಸ್ಥೆಯನ್ನು ಎದುರು ಹಾಕಿಕೊಂಡು ಸೆಣಸುವ ಈ ಮಂದಿಯ ನೈತಿಕ ಪ್ರಜ್ಞೆಯ ಬಗ್ಗೆ, ಧೈರ್ಯದ ಬಗ್ಗೆ ನಾವು ಮೌನವಹಿಸಿದ್ದೇವೆ. ಹಣ ಚೆಲ್ಲಿ, ಪಕ್ಷ ಬಲ, ಜಾತಿ ಬಲದಿಂದ ಗೆಲ್ಲುವ ಕುದುರೆಗಳತ್ತ ಮಾತ್ರ ನಾವು ನಮ್ಮ ಚಿತ್ತ ಹರಿಸಿ ತಪ್ಪು ಮಾಡಿದ್ದೇವೆಯೇನೊ ಎಂದು ಕೆಲವೊಮ್ಮೆ ಬೇಸರವಾಗುತ್ತದೆ. ಪರ್ಯಾಯ ವ್ಯವಸ್ಥೆಯ ಮಂತ್ರವನ್ನು ಹೆಸರಿಗೆ ಮಾತ್ರ ಜಪಿಸಿ ಅತೀ ಹೆಚ್ಚು ಪ್ರಚಾರ ಕೊಟ್ಟದ್ದು ವ್ಯವಸ್ಥೆಯನ್ನು ಯಥಾಸ್ಥಿತಿಯಲ್ಲಿ ಉಳಿಸಲು ಹಠ ತೊಟ್ಟವರಿಗೆ, ಎಂದೂ ಅನಿಸುತ್ತದೆ. ‘ಇದು ಮುಖ್ಯವಾಹಿನಿಯ ಮಿತಿ’ ಎಂದು ಅರ್ಥೈಸಿ, ನಮ್ಮ ತಪ್ಪುಗಳನ್ನು ಅದರ ಹೆಗಲಿಗೆ ಹೊರಿಸಿ, ಜವಾಬ್ದಾರಿಯಿಂದ ಕಳಚಿಕೊಳ್ಳುವ ಪ್ರಯತ್ನ ನಡೆಸುತ್ತೇವೆ. ಆದರೆ ಇದು ರುಶ್ದಿ ಹೇಳುವ ಹಾಗೆ ಮತ್ತೊಬ್ಬರ ನೈತಿಕ ಧೈರ್ಯಕ್ಕೆ ಪ್ರತಿಸ್ಪಂದಿಸದೇ ಇರುವುದರ ಸೂಚನೆ. ಅವರ ಪ್ರಣಾಳಿಕೆ, ಅವರ ನಿಲುವು ನಮಗೆ ಒಪ್ಪಿತವಾಗದೆ ಇರಬಹುದು, ಅವರ ಮಾತು ಬಾಲಿಶ ಎನಿಸಬಹುದು, ಆದರೆ ಅವರ ಸಾಹಸವನ್ನು ನಾವು ಕಡೆಗಣಿಸುವಂತಿಲ್ಲ. ಆದರ್ಶ ಎಷ್ಟೇ ಮುಗ್ಧವಾದರೂ ಅದನ್ನು ನಾವು ಹೊಸಕಿ ಹಾಕಬಾರದು. ರುಶ್ದಿ ಕೊಡುವ ದೊಡ್ಡ ಉದಾಹರಣೆಗಳ ಮೂಲಕವೇ ನಾವು ನಮ್ಮ ಆಸಡ್ಡೆ, ಅಸೂಕ್ಷ್ಮತೆಯನ್ನು ಅರಿಯುವ ಅಗತ್ಯವಿಲ್ಲ; ಇಂತಹ ಸಣ್ಣ, ದಿನನಿತ್ಯದ ಅಜಾಗರೂಕತೆಯೂ ಸಾಕು.
ಈ ಚುನಾವಣೆಯ ಸಂದರ್ಭದಲ್ಲಿ ಮತ್ತೊಂದು ಸೋಜಿಗದ ಸಂಗತಿಯೆಂದರೆ ಪರ್ಯಾಯ ಮಾರ್ಗಗಳನ್ನು ಅನ್ವೇಷಿಸಬೇಕಾದ ನಮ್ಮ ಅನೇಕ ಬುದ್ಧಿಜೀವಿಗಳು ಬೆಂಬಲಿಸಲು ಹುಡುಕಿಕೊಂಡದ್ದು ಮುಖ್ಯವಾಹಿನಿಯಲ್ಲಿರುವ ಪಕ್ಷಗಳನ್ನು ಮತ್ತು ಅಧಿಕಾರದ ಹೊಸ್ತಿಲಲ್ಲಿ ನಿಂತಿರುವ ವ್ಯಕ್ತಿಗಳನ್ನು. ಈ ತರಹದ ಆಯ್ಕೆಗೆ ನೈತಿಕ ಧೈರ್ಯದ ಅಗತ್ಯವಿರುವುದಿಲ್ಲ, ಅನುಕೂಲದ ಪಠ್ಯ ಮಾತ್ರ ತಿಳಿದಿರಬೇಕಾಗುತ್ತದೆ.
ತಮ್ಮ ಸ್ವಾತಂತ್ರವನ್ನು ಕಾಪಾಡಿಕೊಳ್ಳಬೇಕಾದ ಸಂದರ್ಭದಲ್ಲಿ ಒಂದು ಪಕ್ಷದ ಕಡೆಗೆ ವಾಲುವುದು ಅನೇಕ ಅನುಮಾನಗಳಿಗೆ ಎಡೆ ಮಾಡಿ ಕೊಡುತ್ತದೆ. ಇದು ವ್ಯವಸ್ಥೆಯ ಪರ್ಯಾಯ ಹುಡುಕುವ ಮಾರ್ಗವಲ್ಲ, ಅಧಿಕಾರದೊಂದಿಗೆ ಸಂಧಾನ ನಡೆಸುವ ಮಾರ್ಗ. ಸಮಾಜದ ಒಳಿತಿಗಾಗಿ, ಸುಸ್ಥಿರ ವ್ಯವಸ್ಥೆಯ ಕಾರಣಕ್ಕಾಗಿ ಒಂದಲ್ಲ ಒಂದು ದೊಡ್ಡ ಪಕ್ಷದೊಂದಿಗೆ ಗುರುತಿಸಿಕೊಳ್ಳುವ ಅನಿವಾರ್ಯ ಇದೆ ಎಂದು ಅವರು ವಾದ ಮಂಡಿಸಬಹುದು, ತಾವೂ ಒಂದು ಪಕ್ಷದ ರಾಜಕಾರಣಿಗಳ ವಿರುದ್ಧ ಮಾತನಾಡಿ ನೈತಿಕ ಧೈರ್ಯ ಮೆರೆಯುತ್ತಿದ್ದೇವೆ ಎಂದು ಅವರು ಹೇಳಬಹುದು, ಆದರೆ ಅವರಲ್ಲಿರುವುದು ಸಾತ್ವಿಕ ಅಥವಾ ಸೈದ್ಧಾಂತಿಕ ಸಿಟ್ಟು ಮಾತ್ರ ಎಂದು ನಾವು ನಂಬಬೇಕಾದರೆ ಅವರು ನಮಗೆ ಕೆಲವು ಆಶ್ವಾಸನೆಗಳನ್ನು ಕೊಡಬೇಕಾಗುತ್ತದೆ. ಆ ಆಶ್ವಾಸನೆಗಳಲ್ಲಿ ಅವರು ಮೊದಲು ಹೇಳಬೇಕಾದ್ದು, ತಾವು ಬೆಂಬಲಿಸಿದ ಪಕ್ಷ ಅಥವಾ ವ್ಯಕ್ತಿ ಅಧಿಕಾರಕ್ಕೆ ಬಂದರೆ ತಾವು ಯಾವುದೇ ಆಯಕಟ್ಟಿನ ಸ್ಥಾನಗಳನ್ನು ತಮಗಾಗಲೀ, ತಮ್ಮ ಮಿತ್ರರಿಗಾಗಲೀ ಅರಸಿ ಹೋಗುವುದಿಲ್ಲ ಎಂದು. ನಂತರ ಅವರು ಶಿಫಾರಸ್ಸು ಪತ್ರಗಳನ್ನು ಬರೆಯುವ ಚಾಳಿಗೆ ಬೀಳುವುದಿಲ್ಲ ಮತ್ತು ಸರಕಾರಿ ನಿವೇಶನಗಳಿಗಾಗಿ ಅರ್ಜಿ ಹಾಕುವುದಿಲ್ಲ ಎಂದೂ ಹೇಳಬೇಕಾಗುತ್ತದೆ. ಕನಿಷ್ಠ ಇದಿಷ್ಟು ಹೇಳಿದರೆ ಅವರನ್ನು ನಾವು ಸಮಾಜ ಮುಖಿ ಚಿಂತಕರು (public intellectuals) ಎಂದು ಒಪ್ಪಬಹುದು. ಅವರ ನೈತಿಕ ಧೈರ್ಯವನ್ನು, ಬೌದ್ಧಿಕ ಸ್ವಾತಂತ್ರ್ಯವನ್ನು ಶ್ಲಾಘಿಸಬಹುದು. ಇಲ್ಲವಾದರೆ ಇಲ್ಲ.

‍ಲೇಖಕರು G

May 6, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

5 ಪ್ರತಿಕ್ರಿಯೆಗಳು

  1. shashikala

    thank you for bringing a thought provoking article to avadhi readers with your perspective added on

    ಪ್ರತಿಕ್ರಿಯೆ
  2. ರವಿಪ್ರಕಾಶ

    ಇದಕ್ಕೆ ಇನ್ನೊಂದು ಉದಾಹರಣೆಯನ್ನು ಸೇರಿಸ ಬಯಸುತ್ತೇನೆ. ಚುನಾವಣೆಯ ಸಂದರ್ಭದಲ್ಲಿ ಹಲವು ಮಾಧ್ಯಮಗಳಲ್ಲಿ ಚುನಾವಣಾ ಆಯೋಗದ ಕಾರ್ಯವೈಖರಿಯ ಬಗ್ಗೆ ದೂಷಿಸುತ್ತಿದ್ದರು. ಚುನಾವಣೆಯಲ್ಲಿ ಜಾತ್ರೆಯ ರೀತಿಯಲ್ಲಿ ನಡೆಯಬೇಕೆಂತೆ, ಅದು ಹೆಚ್ಚು ಪ್ರಜಾಸತ್ತ್ಮಾಕವಂತೆ. ಸರಕಾರದ ಅಂಗಗಳಲೆ್ಲಲ್ಲಾ ಚುನಾವಣೆಯೊಂದೆ ಹೆಚ್ಚು ನಿಷ್ಪಕ್ಷಪಾತವಾಗಿ , ಕಟ್ಟುನಿಟ್ಟಿನಿಂದ ನಡೆಯುತ್ತಿರುವುದು. ಅದನ್ನು ಶ್ಲಾಘಿಸದೆ ನಕರಾತ್ಮಕ ಧೋರಣೆಯನ್ನು ಪ್ರದರ್ಶಿಸುತ್ತಿದ್ದರು(ಬುದ್ಧಿಜೀವಿಗಳು?).

    ಪ್ರತಿಕ್ರಿಯೆ
  3. deepaG

    ತುಂಬಾ ಅರ್ಥಪೂರ್ಣ ಲೇಖನ .. ಧನ್ಯವಾದಗಳು..

    ಪ್ರತಿಕ್ರಿಯೆ
  4. Sumangala

    ಸುಗತ ಅವರು ಕೊನೆಯಲ್ಲಿ ಹೇಳಿರುವುದು ಇಡೀ ಲೇಖನದ ಮಹತ್ವವನ್ನು ನಮ್ಮ ಸಂದರ್ಭದಲ್ಲಿ ಹೆಚ್ಚಿಸಿದೆ. ಒಂದು ಪಕ್ಷದ ಪರವಾಗಿ ಮತ ನೀಡಿ ಎಂದು ಪತ್ರಿಕೆಗಳಲ್ಲಿ ಕರೆನೀಡಿದ ಬುದ್ಧಿಜೀವಿಗಳ ಮಾತಿನಲ್ಲಿ ಸಮಾಜಮುಖಿ ಎನ್ನಲು ಪೂರಕವಾದ ಯಾವುದೇ ರೀತಿಯ ನೈತಿಕ ಕಟ್ಟೆಚ್ಚರವಂತೂ ಕಂಡುಬಂದಿರಲಿಲ್ಲ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: