ಸುಗತ ಬರೆಯುತ್ತಾರೆ: ಜರ್ಮನ್ನರು ಮತ್ತು ಸಾಂಸ್ಕೃತಿಕ ರಾಜತಂತ್ರ

ಸುಗತ ಶ್ರೀನಿವಾಸರಾಜು

ವಿಜಯ ಕರ್ನಾಟಕದಲ್ಲಿ  ಪ್ರಕಟಿತ

ನಾನು ಅವರ ಮಾತನ್ನು ಬಹಳ ಕುತೂಹಲದಿಂದ ಕೇಳಿಸಿಕೊಳ್ಳುತ್ತಿದ್ದೆ. ಆ ಕುತೂಹಲದ ಹಿಂದೆ ಒಂದು ಪ್ರಶ್ನೆಯ ಸುಳಿ ಸುತ್ತುತಿತ್ತು: ‘ಇದು ಹೇಗೆ ಸಾಧ್ಯ? ಹೀಗೂ ಇರಲು ಸಾಧ್ಯವೇ?’ ಕುತೂಹಲ, ಪ್ರಶ್ನೆ, ಬೆರಗು, ಆತಂಕ ಇವೆಲ್ಲ ಎಂದೂ ನೀಟಾದ ಒಂದು ಸಾಲಿನಲ್ಲಿ, ಒಂದರ ಪಕ್ಕದಲ್ಲಿ ಇನ್ನೊಂದರಂತೆ ಜೋಡಿಸಲು ಸಾಧ್ಯವಿಲ್ಲ. ಅದೊಂದು ಮಿಳಿತ ಭಾವಗಳ ಚೆಂಡು. ಈ ಚೆಂಡು ಜರ್ಮನಿಯ ವಿದೇಶಾಂಗ ಸಚಿವರಾದ ಗುಯ್ಡೊ ವೆಸ್ಟರ್‌ವೆಲ್ ಮಾತನಾಡುತ್ತಿದ್ದಾಗ ನನ್ನ ಮನಸ್ಸಿನಲ್ಲಿ ನಿಲ್ಲದೆ ಚಿಮ್ಮುತ್ತಲೇ ಇತ್ತು.
ಅವರು, ಅಂದರೆ ವೆಸ್ಟರ್‌ವೆಲ್, ಹೇಳುತ್ತಿದ್ದದ್ದು ಸರಳವಾಗಿ, ಸ್ಪಷ್ಟವಾಗಿ ಇತ್ತು: 2017ರ ವೇಳೆಗೆ ಒಂದು ಸಾವಿರ ಕೇಂದ್ರೀಯ ವಿದ್ಯಾಲಯ ಶಾಲೆಗಳಲ್ಲಿ ಹತ್ತು ಲಕ್ಷ ಭಾರತೀಯ ಮಕ್ಕಳು ಜರ್ಮನ್ ಭಾಷೆಯನ್ನು ಕಲಿಯಬೇಕು ಎಂಬುದು ‘ನಮ್ಮ ಕನಸು’. ಈ ದಿಕ್ಕಿನಲ್ಲಿ ಅವರು ಈಗಾಗಲೇ ಸಾಕಷ್ಟು ಹಾದಿ ಕ್ರಮಿಸಿದ್ದಾರೆ ಎಂದೂ, ಜರ್ಮನ್ ಸರಕಾರ ಇದಕ್ಕಾಗಿ 1.3 ಮಿಲಿಯ ಯುರೋಗಳಷ್ಟು ಖರ್ಚು ಮಾಡುತ್ತಿದೆ ಎಂದೂ ಅವರು ಉತ್ಸಾಹದಿಂದ ನುಡಿದರು. ನಮ್ಮ ಪ್ರಧಾನಿ ಮನಮೋಹನ್ ಸಿಂಘ್ ಮತ್ತು ಅವರ ಮಂತ್ರಿಮಂಡಲದ ಐದು ಜನ ಸಹೋದ್ಯೋಗಿಗಳು ಈ ಮಾತುಗಳನ್ನು ಕರತಾಡನದ ಮೂಲಕ ಸ್ವಾಗತಿಸುತ್ತಿದ್ದರು. ಇದು ನಡೆದದ್ದು ಒಂದು ವಾರದ ಹಿಂದೆ ಪ್ರಧಾನಿ ಅವರ ಜರ್ಮನ್ ಭೇಟಿಯ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ‘ಜರ್ಮನಿಯಲ್ಲಿ ಭಾರತದ ದಿನಗಳು’ಎಂಬ ವರ್ಷಾಚರಣೆಯ ಸಮಾರೋಪ ಕಾರ್ಯಕ್ರಮದಲ್ಲಿ.
ವೆಸ್ಟರ್‌ವೆಲ್ ಅವರ ಭಾಷಣ ಕೇಳುತ್ತ ನನ್ನಲ್ಲಿ ಪ್ರಾರಂಭಗೊಂಡ ದಟ್ಟ ಪ್ರಶ್ನೆಗಳ ಸುಳಿಯಲ್ಲಿ ಹುಟ್ಟಿದ್ದು ಈ ವಿಚಾರ: ಭಾರತದಲ್ಲಿ ಸಾಂಸ್ಕತಿಕ ರಾಜತಂತ್ರ (cultural diplomacy) ಎಂಬುದು ಸತ್ತುಹೋಗಿದೆಯೇ? ಅಥವಾ, ಬಿರ್ಜು ಮಹಾರಾಜ್, ಹರಿಪ್ರಸಾದ್ ಚೌರಾಸಿಯಾ, ಎಲ್.ಸುಬ್ರಹ್ಮಣ್ಯಂ ತರಹದ ಹತ್ತು ಮಂದಿ ಕಲಾವಿದರಿಗೆ ಅದು ಸೀಮಿತಗೊಂಡಿದೆಯೆ? ಸಾಂಸ್ಕತಿಕ ರಾಜತಂತ್ರ ಎಂದರೆ ಸಂಗೀತ ಮತ್ತು ನೃತ್ಯ ಎಂದಷ್ಟೇ ನಾವು ಅರ್ಥೈಸಿದ್ದೇವೆಯೇ? ಭಾರತದ ಮಕ್ಕಳು ಜರ್ಮನ್ ಭಾಷೆಯನ್ನು ಕಲಿಯಬಹುದಾದರೆ, ಜರ್ಮನ್ ಮಕ್ಕಳು ಭಾರತೀಯ ಭಾಷೆಗಳನ್ನು ಕಲಿಯುವುದು, ಕಲಿಯುವಂತೆ ಪ್ರೇರೇಪಿಸುವುದು ನಮ್ಮ ಸಾಂಸ್ಕತಿಕ ರಾಜತಂತ್ರದ ಭಾಗವಾಗಬೇಕಲ್ಲವೆ? ಭಾರತೀಯ ಭಾಷೆಗಳು ಎಂದು ನಾನು ಹೇಳಲು ಕಾರಣ, ಅದು ಹಿಂದಿ ಅಲ್ಲದೆ ಕನ್ನಡದಂತಹ ಭಾರತದ ಇತರ ಭಾಷೆಗಳಿಗೂ ವಿಸ್ತಾರಗೊಳ್ಳಬೇಕು ಎಂಬ ಅರ್ಥದಲ್ಲಿ.

ನಮ್ಮ ಪ್ರಧಾನ ಮಂತ್ರಿ ಈ ವಿಚಾರ ಕುರಿತಂತೆ ತಮ್ಮ ಭಾಷಣದಲ್ಲಿ ಏನಾನ್ನಾದರೂ ಹೇಳಬಹುದು ಎಂದು ಆಸೆ ಇರಿಸಿಕೊಂಡಿದ್ದ ನನಗೆ ನಿರಾಸೆ ಕಾದಿತ್ತು. ಅವರು ತಮ್ಮ ಎಂದಿನಂತಿನ ನೀರಸ ಭಾಷಣದಲ್ಲಿ ಒಮ್ಮೆ ಮ್ಯಾಕ್ಸ್ ಮ್ಯೂಲ್ಹರ್‌ರನ್ನು ಪ್ರಸ್ತಾಪ ಮಾಡಿದ್ದು ಬಿಟ್ಟರೆ, ಉಳಿದಂತೆ ಭಾರತ ಸಾಧಿಸಬೇಕಾದ ಶೇ. 8ರ ಆರ್ಥಿಕ ಪ್ರಗತಿಯ ಸುತ್ತ ತಮ್ಮ ಮಾತನ್ನು ಹೆಣೆದರು. ನಾವು ನಮ್ಮ ಆರ್ಥಿಕ ಭವಿಷ್ಯದ ಬಗ್ಗೆ ಮಾತ್ರ ತಲೆಕೆಡಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ, ಜರ್ಮನ್ನರು ತಮ್ಮ ಸಾಂಸ್ಕೃತಿಕ ಭವಿಷ್ಯದಲ್ಲೂ ಹಣ ತೊಡಗಿಸುತ್ತಿದ್ದಾರೆ. ಮತ್ತೊಂದು ದೇಶದೊಂದಿಗೆ ವ್ಯಾಪಾರದ ನೆಂಟಸ್ತಿಕೆ ಬೆಳೆಸುವುದು ಎಂದರೆ ತಮ್ಮತನವನ್ನು, ತಮ್ಮ ಭಾಷೆ, ಸಂಸ್ಕತಿಯನ್ನು ಹೊರತುಪಡಿಸಿ ನಡೆಸುವುದು ಅಲ್ಲ ಎಂಬ ತಿಳಿವಳಿಕೆ, ಪ್ರಬುದ್ಧತೆ, ಜರ್ಮನ್ ಸರಕಾರಕ್ಕೆ ನಿಚ್ಚಳವಾಗಿದೆ. ಆದರೆ ನಮ್ಮ ಸರಕಾರದ ರಾಜತಂತ್ರದಲ್ಲಿ ಅದು ಕಾಟಾಚಾರದ ಒಂದಂಶ ಮಾತ್ರ. ಬಹಳಷ್ಟು ಐರೋಪ್ಯ ದೇಶಗಳು, ಚೀನಿಯರು ತಮ್ಮ ಆರ್ಥಿಕ ರಾಜತಂತ್ರಕ್ಕೆ (economic diplomacy) ಕೊಡುವಷ್ಟೆ ಪ್ರಾಮುಖ್ಯತೆಯನ್ನು ತಮ್ಮ ಸಾಂಸ್ಕೃತಿಕ ರಾಜತಂತ್ರಕ್ಕೂ ನೀಡುತ್ತಾರೆ. ಭಾರತ ಈ ವಿಚಾರದಲ್ಲಿ ಮೊದಲ ಹೆಜ್ಜೆಗಳನ್ನೂ ಸರಿಯಾಗಿ ಇರಿಸಿಲ್ಲ.
ಕೇಂದ್ರೀಯ ವಿದ್ಯಾಲಯದ ಸುಮಾರು ಇನ್ನೂರು ಶಾಲೆಗಳಲ್ಲಿ ಈಗಾಗಲೇ ಜರ್ಮನ್ ಭಾಷೆಯನ್ನು ತೃತೀಯ ಭಾಷೆಯಾಗಿ ಕಲಿಸಲಾಗುತ್ತಿದೆ. 2017ರ ಹೊತ್ತಿಗೆ ಇದು 1,000 ಶಾಲೆಗಳಿಗೆ ವ್ಯಾಪಿಸಬೇಕು ಎಂಬುದು ಜರ್ಮನ್ ಸರಕಾರದ ಗುರಿ. ದಿಲ್ಲಿಯ ಸಾದಿಕ್‌ನಗರದಲ್ಲಿರುವ ಶಾಲೆಯಲ್ಲಿ ಈಗಾಗಲೇ 218 ಮಕ್ಕಳು ಜರ್ಮನ್ ಭಾಷೆ ಕಲಿಯುತ್ತಿದ್ದಾರೆ. ಇದು ಆ ಶಾಲೆಯಲ್ಲಿ ಸಂಸ್ಕೃತ ಕಲಿಯುತ್ತಿರುವ ಮಕ್ಕಳ ಸಂಖ್ಯೆಗೆ ಸಮ ಎಂದು ಅಂಕಿ ಅಂಶಗಳು ತಿಳಿಸುತ್ತವೆ. ನಕ್ಸಲರ ಕಾರಣಕ್ಕಾಗಿ ನಮಗೆ ಪರಿಚಿತವಿರುವ ದಾಂತೇವಾಡ ತರಹದ ಊರಿನ ಶಾಲೆಯಲ್ಲಿ ಜರ್ಮನ್ ಕಲಿಸಲಾಗುತ್ತಿದ್ದು, ಈಗ ಭಾರತದಾದ್ಯಂತ ಜರ್ಮನ್ ಭಾಷೆಯ ಶಿಕ್ಷಕರಿಗಾಗಿ ಭರದ ಹುಡುಕಾಟ ಪ್ರಾರಂಭವಾಗಿದೆ.
ಕೇಂದ್ರೀಯ ವಿದ್ಯಾಲಯದ ಶಾಲೆಗಳಲ್ಲಿ ಈಗ ಜರ್ಮನ್ ಭಾಷೆಯಲ್ಲದೆ, ಫ್ರೆಂಚ್, ಸ್ಪ್ಯಾನಿಷ್, ಚೈನೀಸ್ ಮತ್ತು ಜಪಾನೀಸ್ ಭಾಷೆಗಳನ್ನು ಕಲಿಸಲಾಗುತ್ತಿದೆ. ನಮ್ಮ ಮಕ್ಕಳು ಜಗತ್ತಿನ ಪ್ರಜೆಗಳಾಗುವುದು ಬಹಳ ಮುಖ್ಯ. ವಿಶ್ವಮಾನವರಾಗುವ ಗುರಿ ಅವರ ಮಾನಸಿಕ ಆರೋಗ್ಯವನ್ನು ಹೆಚ್ಚಿಸುತ್ತದೆ. ಆದರೆ ಈ ಜಗತ್ತಿನ ಬೇರೆ ಭಾಷೆಗಳೊಂದಿಗೆ, ತಮ್ಮ ನೆರೆಯ ತಮಿಳು, ಕನ್ನಡ, ತೆಲುಗು, ಒಡಿಯಾ ಭಾಷೆಗಳನ್ನು ಕಲಿಯುವುದು, ಅವುಗಳ ಬಗ್ಗೆ ಕುತೂಹಲವಿರಿಸಿಕೊಳ್ಳುವುದು, ಪ್ರೀತಿಸುವುದೂ ಎಲ್ಲಕ್ಕಿಂತ ಮುಖ್ಯ. ಆ ದಿಕ್ಕಿನಲ್ಲಿ ಮಕ್ಕಳನ್ನು ಪ್ರೇರೇಪಿಸುವ ನೀತಿಯನ್ನು ನಾವು ರೂಪಿಸಬೇಕು. ಈ ವಿಚಾರದಲ್ಲಿ ನಾವು ವಿಫಲತೆಯ ಚಾದರವನ್ನೇ ಹೊದ್ದು ಕುಳಿತಿದ್ದೇವೆ. ಭಾರತೀಯ ಭಾಷೆಗಳಿಗೆ ಪ್ರಾಮುಖ್ಯತೆ ಸಿಗಬೇಕು ಎಂದು ಕೂಗು ಹಾಕಿದರೆ ಹಿಂದಿಯನ್ನು ಅಥವಾ ಸೈದ್ಧಾಂತಿಕ ಕಾರಣಗಳಿಗಾಗಿ ಸಂಸ್ಕೃತವನ್ನು ಮಾತ್ರ ಮುಂದುಮಾಡುವ ಖಯಾಲಿಯನ್ನು ನಾವು ಇನ್ನೂ ಬಿಟ್ಟಿಲ್ಲ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸಂಸ್ಕೃತಿಯ ಪ್ರಸರಣ ಎಂದರೆ ಲಂಡನ್‌ನಲ್ಲಿ ನೆಹರು ಕೇಂದ್ರವನ್ನೂ, ಬರ್ಲಿನ್‌ನಲ್ಲಿ ಟ್ಯಗೋರ್ ಕೇಂದ್ರವನ್ನೋ ಸ್ಥಾಪಿಸಿ ಜಯಂತಿಗಳನ್ನು ಆಚರಿಸುವುದು, ಭಾಷಣಗಳನ್ನು ಬಿಗಿಸುವುದು ಎಂದು ನಾವು ತಿಳಿದಿದ್ದೇವೆ. ಭಾರತದಲ್ಲಿ ಕಾರ್ಯನಿರ್ವಹಿಸುವ ಅಲಿಯಾನ್ಸ್ ಫ್ರಾನ್ಸೆಸ್ (ಫ್ರೆಂಚ್), ಅಥವಾ ಬ್ರಿಟೀಷ್ ಕೌನ್ಸಿಲ್ (ಇಂಗ್ಲಿಷ್) ಅಥವಾ ಗೋಯತ್ ಇನ್‌ಸ್ಟಿಟ್ಯೂಟ್ (ಜರ್ಮನ್) ತರಹದ ಸಾಂಸ್ಕೃತಿಕ ಕೇಂದ್ರಗಳು ಮಾಡುವ ಕೆಲಸದ ಸಣ್ಣ ಪ್ರಮಾಣದಷ್ಟನ್ನೂ ನಮ್ಮ ಅಂತಾರಾಷ್ಟ್ರೀಯ ಕೇಂದ್ರಗಳು ಮಾಡುತ್ತಿಲ್ಲ. ಈ ವಿದೇಶಿ ಕೇಂದ್ರಗಳ ಅಗಾಧ ಕಲ್ಪನೆ ಮತ್ತು ದೂರದೃಷ್ಟಿಯನ್ನು ನಮ್ಮ ಕೇಂದ್ರಗಳು ಹೊಂದಿಲ್ಲ.
ಕನ್ನಡದಂತಹ ಭಾಷೆಗೆ ನಮ್ಮ ರಾಜತಂತ್ರ ಬೆಂಗಾವಲಾಗಿ ನಿಲ್ಲುವುದು ಯಾವಾಗ ಎಂಬ ಪ್ರಶ್ನೆ ನನ್ನ ತಲೆಯಲ್ಲಿ ಹಾದು ಹೋಯಿತು. ಜರ್ಮನ್ನರು ತಮ್ಮ ಕಾರು, ತಮ್ಮ ತಂತ್ರಜ್ಞಾನದ ಜತೆಗೆ ತಮ್ಮ ಭಾಷೆಯನ್ನೂ ಬಿತ್ತರಿಸುತ್ತಿದ್ದಾರೆ. ಅಮೆರಿಕನ್ನರೂ ಹಾಗೇ ಮಾಡುತ್ತಿದ್ದಾರೆ. ಅವರು ತಮ್ಮ ಜೀವನಶೈಲಿಯನ್ನೇ ನಮ್ಮ ಯುವಕರಿಗೆ ಮಾದರಿಯಾಗಿ ಒಡ್ಡಿದ್ದಾರೆ. ಬ್ರಿಟೀಷರಂತೂ ಸರಿಯೇ ಸರಿ. ಅವರೊಂದಿಗೆ ನಮ್ಮದು ಚಾರಿತ್ರಿಕ ಸಂಬಂಧ. ಜಪಾನಿಯರು, ಚೀನಿಯರು ಈ ವಿಚಾರದಲ್ಲಿ ಹಿಂದುಳಿದಿಲ್ಲ. ಈ ಶತಮಾನದ ಶುರುವಿನಲ್ಲಿ ಬಹುಶಃ ಕನ್ನಡಕ್ಕೆ ಇದ್ದ ಒಂದು ಅವಕಾಶವನ್ನು ನಾವು ಕಳೆದುಕೊಂಡಿದ್ದೇವೆಯೇನೋ ಎಂದನ್ನಿಸುತ್ತದೆ. ಕರ್ನಾಟಕ/ಬೆಂಗಳೂರು ಸಾಫ್ಟ್‌ವೇರ್ ಉದ್ಯಮದ ನೆಲೆ ಎಂದು ಜಗದ್ವಿಖ್ಯಾತವಾದಾಗ, ನಮ್ಮ ಸಾಫ್ಟ್‌ವೇರ್ ದೊರೆಗಳು (ಎನ್. ಆರ್. ನಾರಾಯಣಮೂರ್ತಿ ಮತ್ತು ಅವರ ಜತೆಗಾರರು) ಉದ್ಯಮವನ್ನು, ವೃತ್ತಿಪರತೆಯನ್ನು ಮುಂದುವರಿಸುವುದರ ಜತೆಗೆ ತಾವು ಕೆಲಸ ಮಾಡುವ ರಾಜ್ಯದಲ್ಲಿ ಕನ್ನಡವು ಬಹುಸಂಖ್ಯಾತರ ಭಾಷೆ ಎಂದೂ, ತಮ್ಮ ಮಾತಭಾಷೆ ಕನ್ನಡ ಎಂದೂ ಹೇಳಿಕೊಳ್ಳುವ ದೂರದೃಷ್ಟಿಯನ್ನು ತೋರಿದ್ದರೆ; ಕನ್ನಡ ಭಾಷೆ ಮತ್ತು ಸಾಹಿತ್ಯ ಇಂಗ್ಲಿಷಿಗಿಂತಲೂ ಹಳೆಯದು ಎಂದು ಜಗತ್ತಿಗೆ ಪರಿಚಯಿಸಿದ್ದರೆ, ಅದೊಂದು ರೀತಿಯಲ್ಲಿ ಅನೌಪಚಾರಿಕ ಸಾಂಸ್ಕೃತಿಕ ರಾಜತಂತ್ರವಾಗುತ್ತಿತ್ತು. ನಾನು ಇಲ್ಲಿ ಹೇಳುತ್ತಿರುವುದು ಅಭಿಮಾನದ ಬಗ್ಗೆ ಮಾತ್ರ. ಬಂಡವಾಳ ಹೂಡಿಕೆಯ ಬಗ್ಗೆ ಅಲ್ಲ. ಅನೌಪಚಾರಿಕವಾದದ್ದು ನಂತರ ಔಪಚಾರಿಕದೆಡೆ ಹೊರಳುವುದು ಕಷ್ಟವಿರಲಿಲ್ಲ. ಆದರೆ ಇದನ್ನು ಮಾಡುವುದಿರಲಿ, ಅವರು ಇಂಗ್ಲಿಷಿನ ರಾಯಭಾರಿಗಳಾಗಿ ಹೊರಹೊಮ್ಮಿದರು. ನನ್ನ ಈ ಮಾತುಗಳಿಗೆ ಅಪಾರ್ಥ ಕಲ್ಪಿಸಬಾರದು. ಸಾಫ್ಟ್ ವೇರ್ ಉದ್ಯಮಿಗಳು ತಮ್ಮ ವೃತ್ತಿಯ, ಉದ್ಯಮದ ಬೇಕುಗಳನ್ನು ಕಡೆಗಣಿಸಬೇಕಿತ್ತು ಎಂದು ನಾನು ಹೇಳುತ್ತಿಲ್ಲ. ಒಂದು ಸ್ವಚ್ಛಂದ ಅಭಿಮಾನದ ಬಗ್ಗೆಯಷ್ಟೇ ಪ್ರಸ್ತಾಪಿಸುತ್ತಿದ್ದೇನೆ. ಅಭಿಮಾನವೆನ್ನುವುದು ಒಂದು ಭಾಷಾ ಸಮುದಾಯ ಹಲವು ಸೇತುವೆ ದಾಟುವ ಹಾಗೆ ಮಾಡುತ್ತದೆ ಎಂದಷ್ಟೇ ಹೇಳುತ್ತಿದ್ದೇನೆ. ವಿಪರ್ಯಾಸ ಎಂದರೆ ನಮ್ಮ ಮಂಡ್ಯದವರೇ ಆದ ಎಸ್.ಎಂ. ಕೃಷ್ಣ ಮೂರು ವರ್ಷಗಳ ಕಾಲ ವಿದೇಶಾಂಗ ಸಚಿವರಾಗಿದ್ದಾಗ ಕನ್ನಡ ಅಥವಾ ಭಾರತದ ಯಾವುದೇ ಭಾಷೆಯ ಪ್ರಸರಣೆಯ ವಿಚಾರವನ್ನು ತಮ್ಮ ರಾಜತಾಂತ್ರಿಕ ಅಜೆಂಡಾದ ಭಾಗ ಮಾಡಿಕೊಳ್ಳಲಿಲ್ಲ. ಇದಕ್ಕೆ ಅವಕಾಶ ಇರಲಿಲ್ಲ ಎಂದು ಅವರು ಹೇಳಿದರೆ ಅದು ತಪ್ಪಾಗುತ್ತದೆ.
ಕೊಂಚ ಆಲೋಚಿಸಿದರೆ, ತಮಿಳರಿಗೆ ಈ ಗುಣ ಇದೆ ಎಂದು ನಮಗೆ ಅನ್ನಿಸದೆ ಇರದು. ಅವರದು ಪರ್ಯಾಯ ಸಾಂಸ್ಕೃತಿಕ ರಾಜತಂತ್ರ. ತಮಿಳು ಭಾಷಿಕ ಸಮುದಾಯ ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಹರಡಿಕೊಂಡಿರುವುದರಿಂದ ಇದು ಅವರಿಗೆ ಸುಲಭ ಸಾಧ್ಯವೂ ಹೌದು. ಅಮಿತಾಭ್ ಬಚ್ಚನ್ ಮತ್ತು ಶಾರೂಕ್ ಖಾನ್‌ಗಿಂತಲೂ ಜಗತ್ತಿನಲ್ಲಿ ಹೆಚ್ಚು ಅಥವಾ ಸಮಾನವಾದ ಪ್ರಸಿದ್ಧಿ ಹೊಂದಿರುವ ನಟನೆಂದರೆ ರಜನೀಕಾಂತ್. ಜಗತ್ತಿನ ವಿಶ್ವವಿದ್ಯಾಲಯಗಳಲ್ಲಿ ತಮಿಳು ಅಧ್ಯಯನ ಕೇಂದ್ರಗಳು ಬಹಳಷ್ಟಿವೆ. ಸಂಸ್ಕೃತದ ಜತೆಗೆ ತಮ್ಮದೂ ಶಾಸ್ತ್ರೀಯ ಭಾಷೆ ಎಂಬ ವಿಚಾರವನ್ನು ಅವರು 2004ರ ಮುಂಚೆಯೇ ಜಗತ್ತಿಗೆ ತಿಳಿಸಿ ಹೇಳಿದ್ದರು. 2004ರಲ್ಲಿ ಯು.ಪಿ.ಎ ಸರಕಾರ ಈ ಮನ್ನಣೆಯನ್ನು ಅವರಿಗೆ ಕೊಡುವ ಮುನ್ನ, ಜಗತ್ತಿನ ಪ್ರಜ್ಞಾವಂತ ವಲಯ ಇದನ್ನು ಅವರಿಗೆ ದಯಪಾಲಿಸಿತ್ತು. ಈಗ ಜರ್ಮನ್ನರು ತಮ್ಮ ಬಂಡವಾಳ ಹೂಡಿಕೆಯ ಜತೆ ಜತೆಗೇ ತಮ್ಮ ಭಾಷೆಯ ವಿಚಾರವನ್ನು ಸೇರಿಸುತ್ತಿರುವ ರೀತಿಯಲ್ಲಿಯೇ, ಕೇಂದ್ರದ ಯು.ಪಿ.ಎ ಸರಕಾರಕ್ಕೆ ತಮ್ಮ ಸಮರ್ಥನೆಯ ಆಶ್ವಾಸನೆಯ ಜತೆಗೆ ತಮಿಳು ಭಾಷೆಯನ್ನು ಶಾಸ್ತ್ರೀಯ ಭಾಷೆ ಎಂದು ಘೋಷಿಸಬೇಕು ಎಂಬ ಷರತ್ತನ್ನು ಸೇರಿಸಿತ್ತು ಅಚ್ಚ ದ್ರಾವಿಡ ಡಿ.ಎಂ.ಕೆ ಪಕ್ಷ. ಇದೂ ರಾಜತಾಂತ್ರಿಕ ಕಲೆಯೇ ಎಂಬುದನ್ನು ನಾವು ಮರೆಯಬಾರದು.
ಶತಮಾನದ ಹಿಂದೆ ಮತ್ತು ಅದಕ್ಕೂ ಕೊಂಚ ಹಿಂದೆ ಭಾರತೀಯ ಭಾಷೆಗಳ ಬಗ್ಗೆ ಜಗತ್ತಿನ ವಸಾಹತುಶಾಹಿ ಶಕ್ತಿಗಳಿಗೆ ಒಂದು ರೀತಿಯ ಆಸಕ್ತಿ ಇತ್ತು. ಧರ್ಮ ಪ್ರಚಾರಕರೂ ಭಾರತೀಯ ಭಾಷೆಗಳ ಬಗ್ಗೆ ಉತ್ಸುಕರಾಗಿದ್ದರು. ಶೀತಲ ಸಮರದ (Cold war) ಕಾಲದಲ್ಲಿ ಅಮೆರಿಕಕ್ಕೆ ಭಾರತೀಯ ಭಾಷೆಗಳಲ್ಲಿ ಆಸಕ್ತಿ ಇತ್ತು. ಆಗ ಅಮೆರಿಕದ ರಕ್ಷಣಾ ಸಚಿವಾಲಯ (Pentagon) ಭಾಷಾ ಶಾಸ್ತ್ರ ವಿಭಾಗಗಳಿಗೆ ಹಣ ಹಂಚುತ್ತಿತ್ತು ಎಂದು ಭಾಷಾಶಾಸ್ತ್ರಜ್ಞ ನೋಮ್ ಚೋಮ್‌ಸ್ಕಿ ಒಂದು ಕಡೆ ಬರೆದಿದ್ದಾರೆ. ಈ ಆಸಕ್ತಿಗಳಿಗೆ ಒಡೆತನ ಸಾಧಿಸುವ ಪಿತೂರಿಯಿತ್ತು, ಅದು ಜಗತ್ತನ್ನು ಅರಿಯುವ ಮುಗ್ಧ ಜ್ಞಾನ ದಾಹವಾಗಿರಲಿಲ್ಲ. ಅಂತಹ ಮುಗ್ಧತೆ ಎಂಬುದು ಒಂದು ಕಲ್ಪಿತ ವಿಚಾರವಿರಬಹುದು ಎಂಬ ಗುಮಾನಿ ಕಳೆದ ಒಂದೆರಡು ದಶಕಗಳಲ್ಲಿ ಹೆಚ್ಚಾಗಿದೆ. ಹಾಗಾಗಿ, ನಾವು ಎಲ್ಲವನ್ನೂ ರಾಜತಾಂತ್ರಿಕ ಮಾರ್ಗದಲ್ಲೇ ಗೆಲ್ಲಬೇಕೇನೋ ಎಂಬಂತಾಗಿದೆ. ಆರ್ಥಿಕ ಕೊಡು-ಕೊಳ್ಳುವಿಕೆಯ ಪಟ್ಟಿಯ ನಡುವೆ ನಾವು ನಮ್ಮ ಭಾಷೆ ಮತ್ತು ಸಂಸ್ಕತಿಯನ್ನೂ ಸೇರಿಸಬೇಕಿದೆ.
ಕೊನೆಯದಾಗಿ, ಜರ್ಮನಿಯ ಜತೆ ಕನ್ನಡಕ್ಕೆ ಇರುವ ಒಂದು ಅನೌಪಚಾರಿಕ ಸಾಂಸ್ಕೃತಿಕ ರಾಜತಂತ್ರದ ಮಾರ್ಗವನ್ನು ನಾನು ನಮ್ಮ ಪ್ರಧಾನಿಯವರ ನೀರಸ ಭಾಷಣ ಕೇಳುತ್ತಿದ್ದಾಗ ನೆನಪಿಸಿಕೊಂಡೆ. ಆ ಮಾರ್ಗ ಕನ್ನಡಕ್ಕೆ ಮೊದಲ ಕನ್ನಡ-ಇಂಗ್ಲಿಷ್ ನಿಘಂಟು ಕೊಟ್ಟ ಫರ್ಡಿನ್ಯಾಂಡ್ ಕಿಟೆಲ್; ಕನ್ನಡದಲ್ಲಿ ಮೊದಲ ದಿನಪತ್ರಿಕೆ ಹೊರತಂದ ಹರ್ಮನ್ ಮೋಗ್ಲಿಂಗ್ ಮತ್ತು ವಿಶಾಲ ಲಾಲ್‌ಬಾಗ್ ಅನ್ನು ಪೋಷಿಸಿದ ಗುಸ್ತಾವ್ ಹರ್ಮನ್ ಕ್ರುಂಬಿಗಲ್ ನಡೆದ ಮಾರ್ಗ. ಇದು ನಾವು ಸರಕಾರದ ಹಂಗಿಲ್ಲದೆ ಸ್ವತಂತ್ರವಾಗಿ ಮುಂದೆಯೂ ಕ್ರಮಿಸಬಹುದಾದ ಹೆದ್ದಾರಿ.

‍ಲೇಖಕರು G

April 22, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

2 ಪ್ರತಿಕ್ರಿಯೆಗಳು

  1. na.damodara shetty

    Germannara bhaashaaprema mechuvantahaddu. english vyamohadinda avaru muktharagi iivarege nadedukondu bandiddaare. Parabhaashaa sahishnuthe illadilla.Alli kannada kalike kelavu vishwa vidyaalagalallide. Niivu helide haage namma bhaasheya thaakattannu itararige manavarike maadikoduva thaakattiddavare ithara bhaashege sharanaagiddare. Namma bhaasheya alivannu kannaare nodalu kaayuthiruva inthavarannu rashtrpati maaduva hunnaaravuu nadedittu.
    lekhana vichaara prachodaka!

    ಪ್ರತಿಕ್ರಿಯೆ
  2. shivananada

    ಇರುವಾಗ ನಮ್ಮ
    ಸಾಂಸ್ಕೃತಿಕ ರಾಜ – ಅತಂತ್ರ
    ಏನೆಲ್ಲಾ ಮಾಡಲು ಪರರು ಸ್ವತಂತ್ರ
    ನಾವು ಮಾತ್ರ ಅತಂತ್ರ !
    -ಶಿಹೊಂ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: