ಲಕ್ಷ್ಮಿ ಕೆ ಬಿ
ತಾಯಿ ಹಕ್ಕಿಯೊಂದು ಅಳುತಿದೆ
ಮರಿಯ ಜೀವ ಹಾರಿ ಹೋಯಿತೆಂದು
ಮರಿಯೊಂದು ಚಡಪಡಿಸುತಿದೆ
ವಾತ್ಸಲ್ಯದ ತಾಯಿ ಏಕೆ ಬಿಟ್ಟು ಹೋದಳೆಂದು?
ಒಲವ ಜೋಡಿಹಕ್ಕಿಗಳು ಕನವರಿಸುತಿವೆ
ಅನುರಾಗ ಕಣ್ಣೀರ ಕಡಲಾಯಿತೆಂದು
ಜೀವ ಜಡವಾಯಿತು ನೊಂದು
ತನ್ನೆಲ್ಲಾ ಬಳಗವನು ಕಳೆದುಕೊಂಡು
ಪ್ರಕೃತಿಯಿಂದು ಸಾವಿನ ಮನೆಯಾಗಿದೆ
ಉರಿಯುತಿವೆ ಮನಸ್ಸುಗಳು
ಉರಿಯುತ್ತಿರುವ ಹಚ್ಚಹಸಿರಾದ
ಉಸಿರುಗಳ ಕಂಡು
ಕಾಲವಾದವರೂ ಗೋಳಿಡುತ್ತಿದ್ದಾರೆ
ಸಂಸ್ಕಾರವಿಲ್ಲದೆ ಹೊರಟ ಆತ್ಮಕ್ಕೆ ಶಾಂತಿ ಇಲ್ಲವೆಂದು
ಕಟ್ಟಿದ ಬಂಗಲೆಗಳಲ್ಲಿ ಇರಲಿ
ಸ್ಮಶಾನದಲ್ಲೂ ವಿಶ್ರಮಿಸಲು ಜಾಗ ವಿಲ್ಲವೆಂದು
ಕಾಲವಾಯಿತು ಕಾಲ, ಕಾಲನ ಕೈಯ ಮೀರಿ
ಕಾಳಸಂತೆಯಲ್ಲಿ ಗಾಳಿ, ಬೆಳಕು, ನೀರು
ಮಾನವತೆಯ ಮರೆತ ಮನುಜನವ
ಮೌಲ್ಯಗಳ ಗಾಳಿಗೆ ತೂರಿ
ಕರಾಳ ರಾತ್ರಿಯಲ್ಲಿ ಕಾಡ ಹಾದಿಯಲ್ಲಿ ಸಾಗುತಿಹ ಬದುಕು
ಕತ್ತಲ ಬೆನ್ನಹಿಂದೆ ಬೆಳಕಿನ ಪರದಾಟ
ಭಯ, ಆತಂಕಗಳ ಹಿಂದೆ ಆತ್ಮವಿಶ್ವಾಸದ ಸೆಣಸಾಟ
ನೆಮ್ಮದಿಯ ನಾಳೆಗೆ ಭರವಸೆಯ ಬಾಳಿಗೆ ಬೆಳಕ ತೋರೋ ರವಿ
ಗಾಢಾಂಧಕಾರದಿಂದ ಹೊರಬರಲಿ ಈ ಭುವಿ
0 ಪ್ರತಿಕ್ರಿಯೆಗಳು