ಶಿವಕುಮಾರ್ ಮಾವಲಿ
ಸಾವು ಎಂಬ ಈ ಅತಿಥಿಯನ್ನು
ನಾನು ಮರೆತೇ ಬಿಟ್ಟಿದ್ದ ಕಾರಣಕ್ಕೋ ಎಂಬಂತೆ ;
ಆತನೇ ಬಂದು ಮನೆ ಮುಂದೆ ವಿನಯದಿಂದ ನಿಂತ.
ಅಲ್ಲಿಂದ ಕುದುರೆ ಗಾಡಿಯಲ್ಲಿ ಹೊರಟಿದ್ದು,
ನಾನು – ಅವನು – ಮತ್ತು ಅಮರತ್ವ ಮಾತ್ರ.
ನಿಧಾನಕ್ಕೆ ಚಲಿಸತೊಡಗಿತ್ತು ನಮ್ಮ ಗಾಡಿ
ಅವನಿಗೂ ಯಾವ ಅವಸರವಿದ್ದಂತೆ ಕಾಣಲಿಲ್ಲ.
ನನ್ನೆಲ್ಲ ಕೆಲಸಗಳನ್ನು, ವಿಶ್ರಾಂತಿಯನ್ನು ಬದಿಗೊತ್ತಿ
ಅವನನ್ನು ಹಿಂಬಾಲಿಸಲು ಕಾರಣ – ಆತನ ವಿನಮ್ರತೆ.
ಸಾಗುತ್ತಲೇ ಇತ್ತು ನಮ್ಮ ಪಯಣ
ಶಾಲೆಯ ಆವರಣದಲ್ಲಿ ಆಡುತ್ತಿದ್ದ ಮಕ್ಕಳು.
ಅರ್ಧಂಬರ್ಧ ಮುಗಿದ ಅವರ ಪಾಠಗಳು
ತುಂಬು ಪೈರಿನ ಹೊಲಗದ್ದೆಗಳು.
ಮುಳುಗುತ್ತಿದ್ದ ಸೂರ್ಯ, ಇವೆಲ್ಲವುಗಳನ್ನು ದಾಟುತ್ತ…
ಹೀಗೆ ಸಾಗುತ್ತಲೇ ಅದೊಂದು ಮನೆಯ
ಬಳಿ ಗಾಡಿ ನಿಂತಂತಾಯಿತು.
ಆ ಮನೆಯ ಮೇಲ್ಛಾವಣಿ ಅಷ್ಟೊಂದು ಸ್ಪಷ್ಟವಾಗಿ ಕಾಣುತ್ತಿರಲಿಲ್ಲ.
ಮೇಲ್ಛಾವಣಿಯೇ ಇಲ್ಲದ ಮನೆಯಲ್ಲಿ
ಅಲ್ಲಲ್ಲಿ ಮಣ್ಣಿನ ದಿಬ್ಬಗಳು ಕಾಣಹತ್ತಿದವು
ಅಲ್ಲಿಯೇ ನನ್ನ ಅಂತ್ಯಕ್ರಿಯೆಯನ್ನೂ ಮುಗಿಸಿದೆವು.
ಅದಾಗಿ ಕೆಲ ಶತಮಾನಗಳೇ ಸಂದಿವೆ ಈಗ
ಒಂದೊಂದೂ, ದಿನವೊಂದರಂತೆ ಉರುಳಿ ಹೋಗಿವೆ.
ನಮ್ಮನ್ನು ಹೊತ್ತು ಸಾಗುತ್ತಿರುವ ಆ ಕುದುರೆಗಳ ದೃಷ್ಟಿ ಮಾತ್ರ
ಕಾಲ-ದೇಶಗಳನ್ನು ದಾಟಿ
ಸಾಗುತ್ತಲೇ ಇದೆ
ಸಾವಿನಾಚೆಯ ಅಮರತ್ವದ ಲೋಕಕ್ಕೆ …
ಮೂಲ ಕವಿತೆ
Because I could not stop for Death –
He kindly stopped for me –
The Carriage held but just Ourselves –
And Immortality.
We slowly drove – He knew no haste
And I had put away
My labor and my leisure too,
For His Civility –
We passed the School, where Children strove
At Recess – in the Ring –
We passed the Fields of Gazing Grain –
We passed the Setting Sun
We paused before a House that seemed
A Swelling of the Ground –
The Roof was scarcely visible –
The Cornice – in the Ground –
Since then – ’tis Centuries – and yet
Feels shorter than the Day
I first surmised the Horses’ Heads
Were toward Eternity –
– Emili Dickenson
0 ಪ್ರತಿಕ್ರಿಯೆಗಳು