ಸವಿರಾಜ್ ಆನಂದೂರು ಕವಿತೆ – ಗಂಧಗಳು…

ಸವಿರಾಜ್ ಆನಂದೂರು

ಅವಳು ಅಲ್ಲಿ ಹೊಳೆಯ ದಂಡೆಯ ಮೇಲೆ ನಿಂತಿದ್ದಳು
ಕಣ್ಣುಗಳಲ್ಲೇ ಬಲೆಯ ಹೆಣೆಯುತ್ತ…
ನಾನು ನೋಡಬಾರದಾಗಿತ್ತು ಹಾಗೆ, ಸುಮ್ಮನೇ
ನಕ್ಕಳು, ಹೊರಟುಹೋದಳು
ಈಗ ಉಳಿದಿದ್ದು ಅವಳ ಬಲೆಗೆ ಸಿಕ್ಕ ಮೀನುಗಳು ಹೊರಳಿ,
ಎದೆಯಲ್ಲಿ ಮೂಡಿಸಿದ ಪುಳಕ!
ಅವಳು ಮತ್ಸ್ಯಗಂಧಿ!!

ಇವಳು ದೂರದಲ್ಲಿದ್ದಾಳೆ, ಆದರೂ ಮೀಟುತ್ತಾಳೆ
ಮೀಟಬಾರದ ತಂತಿಗಳನ್ನು;
ದೂರದಲ್ಲಿ ಸ್ಥಿತವಾದ ಆಲದ ಮರದ ಬಿಳಿಲುಗಳೆರಡು
ಒಂದಕ್ಕೊಂದು ಬೆಸೆದುಕೊಂಡಂತೆ
ನಾನೊಂದು ಮರ, ಇವಳೊಂದು ಮರ: ನಮ್ಮ
ಎಲೆಗಳ ಬಣ್ಣ, ಕಾಯಿಗಳು ಒಗರು, ಹಣ್ಣುಗಳ ರುಚಿ ಬೇರೆ.
ಆದರೂ ನಮ್ಮ ಬೇರುಗಳ ಗಂಧ ಒಂದೇ!
ಇವಳು ಯೋಜನಗಂಧಿ!!

ನೀನು ಬಂದರೆ, ನಿನ್ನ ಮೈಯಿಂದೆಲ್ಲಾ ಆಲಿಕಲ್ಲುಗಳಂತೆ
ಹೊರ ಚಿಮ್ಮುವ ಕವಿತೆಗಳು!
ನಾನು ಬೊಗಸೆಯಲ್ಲಿ ಆಯುತ್ತೇನೆ, ಕರಗಿ
ಹೋಗುವ ಮುನ್ನ…
ನಿನ್ನ ಕಂಡರೆ ಸಾಕು ಅಕ್ಷರಗಳ ಸಮುದ್ರಕ್ಕೆ ಬರಿಯ ಉಬ್ಬರ;
ಉಪಮೆ, ಪ್ರತಿಮೆಗಳಡಿ ಸಿಲುಕಿದ ನನ್ನ ಎದೆ ಭಾರ
ಕಾಗದದ ಮೇಲಿಳಿಸುವಷ್ಟರಲ್ಲಿ, ಕರಗಿ ಹೋದಾವು
ಮತ್ತಷ್ಟು ಕವಿತೆಗಳು ಸುಮ್ಮನೇ ವ್ಯರ್ಥ
ಕವಿಯಾಗದಿದ್ದರೂ ಪರವಾಗಿಲ್ಲ; ಬರಿಯ
ರಸಿಕನಾಗಿ ಉಳಿದರೆ ಸಾಕು!
ಅನುಭವಿಸುತ್ತೇನೆ ನಿನ್ನ ಮೈಯಿಂದ ಹೊಮ್ಮುವ
ಕವಿತೆಗಳ ಘಮ!
ನೀನು ಕಾವ್ಯಗಂಧಿ!!

ಗಂಧಗಳ ಚೆಲ್ಲಿ ಹೋದಿರಿ ನಿಮ್ಮದೇ ದಾರಿಗಳಲ್ಲಿ,
ಅವಳು, ಇವಳು ಮತ್ತು ನೀನು
ಹೊಸತು ಗಂಧಗಳಿಗೆ ಎದೆಯ ತೆರೆದುಕೊಂಡು,
ಇಲ್ಲಿಯೇ ನಿಂತಿರುವೆ ನಾನು!ಸವಿರಾಜ್ ಆನಂದೂರು

‍ಲೇಖಕರು Admin

December 15, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: