ಡಿ ಸಿ ರಾಜಪ್ಪ
“ಮಂದಿರ ಮಸೀದಿ ನೋಡಲು
ಅಡ್ಡ ಬೇಲಿಯ ಹಾಕಿ ಕೋವಿ ಹಿಡಿದು
ನಮ್ಮನೇಕೆ ತಡೆಯುತಾರೋ ಗೆಳೆಯಾ,
ಹೊಳೆಯ ದಾಟಿ ಬರಲೇ ಗೆಳೆಯಾ
ಅಲ್ಲೂ ಕಾಯುತ್ತಾರೆ ಶಹರೆಯ”
– ಗಡಿ
ಡಿ ಸಿ ರಾಜಪ್ಪ ಅವರು ಇಂಥ ಹೃದಯ ಸಂಪನ್ನತೆಯಿಂದ ಕೂಡಿದ ಕವನಗಳನ್ನು ರಚಿಸಿ ನಮ್ಮೆಲ್ಲರ ಪ್ರೀತಿ ಮತ್ತು ಗೌರವಗಳಿಗೆ ಪಾತ್ರರಾಗಿದ್ದಾರೆ. ಸಮರ್ಥ ಅಧಿಕಾರಿಯಾದಂತೆ ಸಮರ್ಥ ಕವಿಯೂ ಆಗಿ ತಮ್ಮ ಇಲಾಖೆಗೂ ಗೌರವ ತಂದಿದ್ದಾರೆ. ಅವರಿಂದ ಇನ್ನೂ ಹೆಚ್ಚಿನದನ್ನು ಕನ್ನಡಿಗರು ನಿರೀಕ್ಷಿಸದೆ ಇರಲಾರರು.
-ರಂಜಾನ್ ದರ್ಗಾ
ಅಂತರಾಳದ ಬಯಕೆ
ಕವನ ಬರೆಯಬೇಕೆಂಬ ನನ್ನಂತರಾಳದ ಬಯಕೆ ಇಂದು ನೆನ್ನೆಯದಲ್ಲ. ಅದು ನನ್ನ ಹುಟ್ಟಿನೊಂದಿಗೆ ಬಂದಿರಬೇಕು.ನನ್ನೊಳಗೆ ಹುಟ್ಟಿರುವ ಕವಿತೆಗಳಿಗೆ ನಾನೆಂದೂ ಹುಟ್ಟುಹಬ್ಬ ಆಚರಿಸಿಲ್ಲ. ಆ ಇಚ್ಛೆಯೂ ನನಗಿಲ್ಲ. ನನ್ನೊಳಗೆ ಹುಟ್ಟಿ ಸತ್ತಿರುವ ಕವನಗಳಿಗೆ ನಾನೆಂದೂ ತಿಥಿ ಕರ್ಮ ಮಾಡಿಲ್ಲ. ಆ ಇಚ್ಛೆಯೂ ನನಗಿಲ್ಲ ನನಗರಿವಿಲ್ಲದಂತೆ ನನ್ನ ಸಮವಸ್ತ್ರದ ಬೆಚ್ಚನೆಯ ಕವಚದೊಳಗೆ ಅಡಗಿರುವ ಈ ಕವಿಯ ಅನುಭವದ ಮೂಸೆಯಿಂದ ಹೊರಬರುತ್ತಿರುವ ಮೂರನೆಯ ಕವನ ಸಂಕಲನವಿದು.
ಮಾರಿ, ಬರಡು ಭೂಮಿಯ ಸತ್ಯಗಳು ಎಂಬ ಎರಡು ಕವನ ಸಂಕಲನಗಳನ್ನು ಬರೆದು ಪ್ರಕಟಿಸಿದ ನಂತರ ಪೊಲೀಸ್ ಇಲಾಖೆಯೊಳಗಿನ ಕವಿಗಳನ್ನು ಗುರುತಿಸಿ ಅವರಿಗೊಂದು ವೇದಿಕೆ ಒದಗಿಸಿಕೊಡುವ ಹಿನ್ನೆಲೆಯಲ್ಲಿ “ಸಮವಸ್ತ್ರದೊಳಗೊಂದು ಸುತ್ತು” ಎನ್ನುವ ಪುಸ್ತಕವನ್ನು ಮೂರು ಸಂಪುಟಗಳಲ್ಲಿ ಹೊರತರುವ ಕಾರ್ಯದಲ್ಲಿ ನಾನು ಮಗ್ನನಾದ್ದರಿಂದ ನನ್ನ ವೈಯಕ್ತಿಕ ಕವನ ಸಂಕಲನ ಬರೆದು ಪ್ರಕಟಿಸಲು ವಿಳಂಬವಾಗಿದೆ.
“ಹುಲ್ಲು ಮೇಯುವ ಕುದುರೆ” ಎನ್ನುವ ಶಿರೋನಾಮೆಯಲ್ಲಿ ಹೊರ ಬರುತ್ತಿರುವ ಈ ಕವನ ಸಂಕಲನದಲ್ಲಿ ಕಳೆದ ಐದು ವರ್ಷಗಳಿಂದ ಬರೆದಿರುವ, ರಾಜ್ಯದ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿರುವ 50 ಕ್ಕೂ ಹೆಚ್ಚು ಕವನಗಳನ್ನು ನನ್ನೊಳಗಿನ ಕವಿ ಬರೆದಿದ್ದಾನೆ. ಅಂಥಹ ಕವನಗಳ ಗುಚ್ಛವೇ ಈ ನನ್ನ ಮೂರನೆಯ ಕವನ ಸಂಕಲನ.
adbhuta vyaktitva…