ರಾಜೇಶ್ ಹೆಬ್ಬಾರ್
ಹೊರಗೆ ಧಾರಾಕಾರ ಮಳೆ
ರಣ ರಣ ಬಿಸಿಲು ಧಗೆ
ಮೋಡ ಮುಸುಕಿದ ಕತ್ತಲೆ
ಬಾಂಬು ಬಂದೂಕು ಸಿಡಿದು ಬಿದ್ದ ತಲೆ
ಗಾಳಿ ತುಂಬಿದ ಪಾತ್ರೆ ಕುದಿಸುತ್ತಿರುವ ಒಲೆ
ಹಾಸಿಗೆಗೆ ಹಾಹಾಕರ, ತೊಟ್ಟು ಉಸಿರಿಗೆ ತತ್ವಾರ
ದಿಕ್ಕಾರ ಜೈಕಾರ ಗೆದ್ದವರ ವಿಜಯ ದುಂದುಬಿಯ ಕೇಕೆ
ಮನೆಯ ನಲ್ಲಿಯಲ್ಲಿ ತೇಲಿ ಬಂದ
ಮನುಷ್ಯರ ಕಣ್ಣು ಕಿವಿ ನಾಲಿಗೆ
ಹಸಿ ಹಸಿಯ ಬಿಸಿ ಬಿಸಿ ರಕ್ತ
ಸತ್ತವರ, ಬದುಕಿದ್ದವರ,
ಇನ್ನೂ ಹುಟ್ಟದವರ
ಎಲ್ಲರಲಿ ಎಲ್ಲರನು ನಿತ್ಯ ಸುಡುವ
ಸರ್ವ ಸಮಾನತೆಯ ಸರ್ಕಾರಿ ಚಿತಾಗಾರ
ನಡು ಹಗುಲು ನಡು ಬೀದಿ
ವೃದ್ಧೆಯೊಬ್ಬರ ಕಿತ್ತು ತಿಂದ ನಾಯಿ
ಬಿಡುವಿರದೆ ಬೊಂಬಿಡುವ ಗದ್ದುಗೆಯ ಬಾಯಿ
ಹಸಿದು ಬಸಿದು ತೇಕುವ
ಉಸಿರಿನಾರ್ಭಟಕ್ಕೆ ಕಂಪಿಸುವ ಮಹಲು
ಪ್ರಕ್ಷುಬ್ಧ ಕಡಲು, ಪ್ರಕ್ಷುಬ್ಧ ಒಡಲು
ಅಲ್ಲಿ ಮಧ್ಯದ ಪ್ರಾಚ್ಯದಲ್ಲಿ
ಬಾಂಬುಗಳ ಬಿರಿಯಾನಿ ಉಣಿಸುವ
ದೊಡ್ಡಣ್ಣನ ಚೇಲಾ
ನಾನು ಮಾತ್ರ ಸದಾ ಸುರಕ್ಷಿತ
ಸದಾ ಸಂತೋಷಿತ,ಸಂತುಷ್ಟಿತ,
ನಿರ್ಲಿಪ್ತ, ನಿರ್ಮೋಹಿ ಸಮಚಿತ್ತ ವಿವೇಕಿ
0 ಪ್ರತಿಕ್ರಿಯೆಗಳು