ಸತ್ಯಪ್ರಕಾಶ್ ಎಂ ಆರ್
ಅಂಗಾತ ಮಲಗಿ ಛಾವಣಿ ನೋಡುವಾಗ
ಮುಚ್ಚಿದ ಬಾಗಿಲು ತೆರೆಯಲೇ ಇಲ್ಲ
ಗೋಡೆಗಳಿರುವುದು ಮರೆತೇ ಹೋಗಿತ್ತು
ನಿರ್ವಾತದಲಿ ಮಾಡಿದ ಚೌಕವಿದು
ನನ್ನ ಕೊಠಡಿಯೆನಿಸಲೇ ಇಲ್ಲ
ತೆರೆದ ಕಿಟಕಿಯಾಚೆ ಅಕಾಲಿಕ ಮಳೆ,
ಇಂದೇಕೋ ಶರತ್ಕಾಲದ ಶೀತಲ ಗಾಳಿ ಮೈಸೋಕಲಿಲ್ಲ
ಶುಭ್ರ ಆಕಾಶದಿಂದ ಆಯತಪ್ಪಿ ಬಿದ್ದ
ಹೊಳೆವ ಚುಕ್ಕಿಗಳು ಯಾವ ಸಾಗರದ
ಗರ್ಭ ಸೇರಿತೋ ಏನೋ
ಜ್ವಾಲಾಮುಖಿಯಿಂದ ಪುಟಿವ ಬೆಂಕಿ
ಶಾಂತ ಸಾಗರವನು ಕದಡಲೇ ಇಲ್ಲ
ಬಿಸಿ ಹಾಸಿಗೆಯ ಮೇಲೆ ಮಲಗಿರುವ ದೇಹ
ಒಮ್ಮೆಲೇ ಆಕಾಶಕ್ಕೆ ಜಿಗಿದು
ನೆಲದ ಒಡಲೊಳಗೆ ಇಳಿದು
ಸಾಗರದ ಗಾಢ ಅಂಧಕಾರದಲಿ
ಗಿರಕಿ ಹೊಡೆವ ಮಾಯೆಗೆ
ಅರ್ಥ ಹುಡುಕುವ ಇರಾದೆ ಇಲ್ಲ!
ಮೈಮನಸನು ತಣಿಸುವ ಎಲ್ಲ ಸುಖ
ಕ್ಷಣಾರ್ಧದಲಿ ಕರಗಿ ಹೋಗುವುದು
ಅರಿವಿಗೆ ನಿಲುಕುವುದೇ ಇಲ್ಲ
ನಡುರಾತ್ರಿಯಲಿ ಅತೃಪ್ತ ಮನಸುಗಳು
ಕಣ್ಣೀರು ಹಾಕುವುದು ತಪ್ಪುವುದಿಲ್ಲ
ಮತ್ತೆ ಬೆಳಕಾದರೂ ಹೊಳೆವ ಕಣ್ಣುಗಳ ಕೆಳಗೆ
ರಾತ್ರಿಯ ಕತ್ತಲು ಸರಿಯುವುದೇ ಇಲ್ಲ!
ಕತ್ತಲು ಬೆಳಕಿಗೆ ಇಲ್ಲಿ ಅಂತರವಿಲ್ಲ
ಘಾಸಿಗೊಂಡ ಹೃದಯದಲಿ
ಎಂದೂ ಶೂನ್ಯ ಆವರಿಸುವುದಿಲ್ಲ!
ತೆರೆದ ಗಾಯದ ಬಾಗಿಲಿನಿಂದಲೇ
ಬೆಳಕು ಮೂಡುವುದು,
ಮುಚ್ಚಿದ ಬಾಗಿಲಿನಿಂದಲ್ಲ!
Hello, im very happy to be the part of avadhi blog…till now m following your blog in many social media platforms now i want to join your team as a regular reader through subscription..thank you..