ಸಣ್ಣ ಹಠವ ಮಾಡಿದೆ ಹೃದಯ ಆ ದಿನ…

 ಚಂದ್ರಶೇಖರ ಹೆಗಡೆ

ಸಾವೊಂದು ಈ ಬಗೆಯಲ್ಲಿ ಕಾಡಬಹುದೆಂದು ನಾನು ಊಹಿಸಿರಲಿಲ್ಲ. ಸತ್ಯವನ್ನೇ ನಡುಗಿಸಬಲ್ಲ ಅನಭಿಷಕ್ತತೆಯೊಂದು ಸಾವಿಗೆ ಹೀಗೆ ಪ್ರಾಪ್ತವಾಗುವುದೇ ವಿಸ್ಮಯವನ್ನುಂಟು ಮಾಡುತ್ತದೆ. ಮರಣವೇ ಮಹಾನವಮಿ ಎಂಬುದನ್ನು ಶರಣರು ಇಂತಹ ಅಕಾಲಿಕ ಸಾವನ್ನು ಕುರಿತು ಹೇಳಿರಲಿಕ್ಕಿಲ್ಲ. ಜಾತಸ್ಯ ಮರಣಂ ಧ್ರುವಂ ಎಂಬುದು ಸತ್ಯವಾದರೂ ಹೊತ್ತಲ್ಲದ ಹೊತ್ತಿನಲ್ಲಿ ಧುತ್ತನೆ ಬಂದೆರಗಿದ ಈ ಸಾವನ್ನು ಅರಗಿಸಿಕೊಳ್ಳಲಾಗುತ್ತಿಲ್ಲ ನಾಡವರಿಗೆ.

ಸ್ವಾಮಿ ವಿವೇಕಾನಂದರು ೧೮೯೩ ರ ತಮ್ಮ ಚಿಕ್ಯಾಗೋದ ವಿಶ್ವಧರ್ಮ ಸಮ್ಮೇಳನದ ಭಾಷಣದಲ್ಲಿ ಹೇಳಿದ ಸಾವಿಗೆ ಸಂಬಂಧಿಸಿದ ಕಥೆಯೊಂದು ಹೀಗಿದೆ – ನಿಕೋಡಾಮಸ್ ಎನ್ನುವ ಶಿಷ್ಯನೊಬ್ಬ ತನ್ನ ಗುರುವನ್ನು ಕುರಿತು ‘ಗುರುಗಳೇ ಸಾವನ್ನು ಗೆಲ್ಲುವ ಬಗೆ ಹೇಗೆ ?’ ಎಂದು ಕೇಳುತ್ತಾನೆ. ಸಮಾಧಾನದಿಂದಲೇ ಉತ್ತರಿಸಿದ ಆತನ ಧರ್ಮಗುರು ‘ಸಾವನ್ನು ಗೆಲ್ಲಬೇಕಾದರೆ ನೀನು ತಪಸ್ಸು ಮಾಡಬೇಕಿಲ್ಲ; ಅನ್ನಾಹಾರಗಳನ್ನು ತ್ಯಜಿಸಿ ಶಕ್ತಿಯನ್ನೊಲಿಸಿಕೊಳ್ಳಬೇಕಾಗಿಲ್ಲ; ನೀನು ಮಾಡಬೇಕಾಗಿರುವುದು ಇಷ್ಟೇ Be born again.’

‘ಅದು ಹೇಗೆ ಸಾಧ್ಯ ಗುರುಗಳೇ ಹಾಗಾದರೆ ನಾನೀಗಲೇ ಈ ನದಿಯಲ್ಲಿ ಹಾರಿಬಿಡಲೇ’ ಎಂದ ಶಿಷ್ಯನ ಮಾತಿಗೆ ಮುಗುಳ್ನಕ್ಕ ಗುರುಗಳು ‘ನಾನು ಹೇಳುತ್ತಿರುವುದು ಭೌತಿಕ ಮರಣದ ಕುರಿತಲ್ಲ; ಆಂತರಂಗದೊಳಗಿನ ಅಂತ್ಯವನ್ನು ಕುರಿತು.’ ಹೌದು. ಒಂದು ಮರೆಯಲಾಗದ ಭೌತಿಕ ಸಾವನ್ನು ಅರಗಿಸಿಕೊಳ್ಳಲಾಗದೆ ಅಂತರಂಗದಲ್ಲಿಯೇ ಕಳೆದುಹೋದವರ ಕನ್ನಡಿಗರ ಕರ್ಮ ಕಥೆಯನ್ನು ಏನೆಂದು ಬಣ್ಣಿಸುವುದು ? ಒಲ್ಲದ ಮನಸಿನಿಂದಲೇ ಭೌತಿಕ ಮರಣವನ್ನು ಸ್ವೀಕರಿಸಿ, ಏಕಕಾಲಕ್ಕೆ ನಾಡವರ ಅಂತರಂಗದೊಳಗೆ ಪುನರ್ಜನ್ಮ ಪಡೆದುಕೊಂಡ ತಾರೆಯಾಗಿ ಬೆಳಗುತ್ತಿರುವವರು ಡಾ. ರಾಜಕುಮಾರರವರ ಕುಟುಂಬದ ಚೈತನ್ಯದ ಕುಡಿ ಪುನೀತರೆಂಬುದನ್ನು ನಂಬಲಾಗುತ್ತಿಲ್ಲ.

‘ಅಭಿಮಾನಿಯೂ ಅಲ್ಲ; ಅವರ ಸಿನೇಮಾಗಳನ್ನೂ ನಾನು ನೋಡಿಲ್ಲ, ಆದರೂ ಇಂದೆನಗೆ ಸಹೋದರನನ್ನೇ ಕಳೆದುಕೊಂಡ ದುಃಖ ಆವರಿಸಿಕೊಂಡಿದೆ ಎಂದ ಗೆಳೆಯರೊಬ್ಬರ ಮಾತು ಪುನೀತ್ ಹೇಗೆ ಕನ್ನಡಿಗರ ಅಂತರಂಗದೊಳಗೆ ಇಳಿದುಹೋಗಿದ್ದರೆಂಬುದನ್ನು ಗಮನಿಸಬೇಕು. ಹೌದು. ಗೊತ್ತಿಲ್ಲದೇ ‘ಹೃದಯದಲಿ ಇದೇನಿದು ನದಿಯೊಂದು ಓಡಿದೆ’ ಎಂಬಂತೆ ಗುಪ್ತಗಾಮಿನಿಯಾಗಿ ಅಭಿಮಾನಿ ದೇವರುಗಳ ಎದೆಯೊಳಗೆ ಇಳಿದುಹೋದ ಪುನೀತರು ನಿಜವಾದ ಅರ್ಥದಲ್ಲಿಯೂ ರಾಜ ಕುವರನೇ‌. ಈಗಲೂ ನಮಗೆ ಜನಪದ ಕಥೆಯಲ್ಲಿಯಂತೆ ಅವರು ದೂರದ ಯಾವುದೋ ಮಾಂತ್ರಿಕ ಲೋಕಕ್ಕೇ ಇನ್ಯಾವುದೋ ಸಾಧನೆಗಾಗಿ ತೆರಳಿರಬೇಕು ಎಂದೆನಿಸಿದರೆ ಅಚ್ವರಿಯೇನಿಲ್ಲ.

ಇಲ್ಲಿ ಸಂದು ಅಲ್ಲಿಯೂ ಸಲ್ಲಬೇಕೆಂದು ಎದ್ದು ಹೊರಟ ಅವರ ಇಹಲೋಕದ ಯಾತ್ರೆಯನ್ನು ಅಬಾಲವೃದ್ಧರಾದಿಯಾಗಿ ಯಾರಿಗೂ ಒಪ್ಪಲಾಗುತ್ತಿಲ್ಲ. ‘Life and death are not divided they are one’ ಎಂಬ ಜಿಡ್ಡು ಕೃಷ್ಣಮೂರ್ತಿಯವರ ಚಿಂತನೆಯನ್ನು ವಾಸ್ತವಿಕವಾಗಿ ವ್ಯಾಖ್ಯಾನಿಸಲಾಗುತ್ತಿಲ್ಲದ ಸ್ಥಿತಿಗೆ ನಮ್ಮನ್ನು ತಂದೊಡ್ಡಿದೆ ಪುನೀತರ ಅಗಲಿಕೆ. Death is nothing but a fact. We should live with it which is unknown. ಎಂದು ಕೃಷ್ಣಮೂರ್ತಿಯವರು ಸಾವನ್ನೆದುರಿಸುವ ತತ್ವಶಾಸ್ತ್ರೀಯವಾದ ವ್ಯಾಖ್ಯಾನವನ್ನೇನೋ ನೀಡಿದರೂ ವಾಸ್ತವದ ಸತ್ಯದೊಂದಿಗೆ ಮುಖಾಮುಖಿಯಾಗುವ ಧೈರ್ಯ ನಮಗಿನ್ನೂ ಬಂದೊದಗುತ್ತಿಲ್ಲ. ಶಬ್ದಸೂತಕಕ್ಕೂ ನಿಲುಕದ ಸಾವನ್ನು ಕುರಿತು ಮಾತನಾಡುವುದೆಂದರೆ ದುಸ್ಸಾಹಸವೇ ಸರಿ. ಗೊತ್ತಿಲ್ಲದುದರ ಗೋಜಿಗೆ ಹೋಗುವುದು ಬೇಡ. ಪುನೀತರೆಡೆಗೆ ಬರೋಣ.

ಪುನೀತರ ಬದುಕು ಶಬ್ದಸೂತಕವಾಗದ ಮಹಾಕಾವ್ಯವಾಗಿತ್ತೆಂಬುದಕ್ಕೆ ಅವರ ನಿಸ್ಪೃಹ ಜೀವನದ ಲಯರಾಗಗಳೇ ನಿದರ್ಶನಗಳಾಗಿವೆ. ನಲವತ್ತಾರು ಅಧ್ಯಾಯಗಳ ಪುನೀತ ಮಹಾಕಾವ್ಯವೊಂದು ಕುರಿತೋದದೆಯೂ ನಾಡವರ ಆಂತರ್ಯದೊಳಗಿಳಿದಿದೆ ಎಂಬುದಕ್ಕೆ ಲಕ್ಷಾಂತರ ಅಭಿಮಾನಿಗಳ ಕಣ್ಣೀರು ಸಾಕ್ಷ್ಯ ನುಡಿಯುತ್ತದೆ. ತನ್ನ ವೈವಿಧ್ಯಮಯ ಚಲನಚಿತ್ರಗಳ ಮೂಲಕ ಶೃಂಗಾರ, ಹಾಸ್ಯ, ರೌದ್ರ, ವೀರ, ಭಯಾನಕ, ಭೀಭತ್ಸ, ಅದ್ಭುತ ರಸಗಳ ಮಿಲನದ ಸವಿಯನ್ನುಣಬಡಿಸಿದ ಕಾವ್ಯವೊಂದು ಕೊನೆಗೆ ಶೋಕವನ್ನೂ ಇನ್ಮಿಲ್ಲದ ಹೊಳೆಯಾಗಿ ಹರಿಸಿದ್ದು ಇನ್ನು ನೆನಪು ಮಾತ್ರ. ಅದಾವ ಸಿನೇಮಾವನ್ನೂ ತನ್ನಂತರಂಗದೊಳಗೆ ಅಷ್ಟು ಸಲೀಸಾಗಿ ಹರಿಸಿಕೊಳ್ಳದ ನನ್ನ ಭಾಮಿನಿಗೆ ಯುವರತ್ನ ಮಾಡಿದ ಮೋಡಿ ಅಷ್ಟಿಷ್ಟಲ್ಲ. ಶಿವಮಂದಿರದಂತಿದ್ದ ನಾಡನ್ನಗಲಿ ಇದ್ದಕ್ಕಿದ್ದಂತೆ ಎದ್ದುಹೋದ ಪರಮಾತ್ಮನ ಸನ್ನಿಧಿಯನ್ನು ಮುಂದೆ ಅನುಭವಿಸುವುದೆಂತು ಎಂದು ಗೋಳಾಡಿದ ಆಕೆಯ ಸಮಾಧಾನಕ್ಕೆ ವಾರಗಟ್ಟಲೆ ಕಾಯಬೇಕಾಯಿತು.

‘ಪರವಶನಾದೆನು ಅರಿಯುವ ಮುನ್ನವೇ
ಪರಿಚಿತನಾಗಲಿ ಹೇಗೆ’

ಎಂದು ಹಾಡಿದ ಹೃದಯವಿಂದು ಮರಳುವುದಿಲ್ಲವೆನ್ನುವುದೇ ಕಂಠವನ್ನು ಬಿಗಿಯುವಂತೆ ಮಾಡುತ್ತದೆ. ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು ಎಂದು ರಾಜಣ್ಣನವರು ಆಡಿಸಿದ ಬೊಂಬೆಯಿಂದು ದಿಗ್ಗನೆ ಉರುಳಿ ಹೋದ ದೃಶ್ಯ ಎಂಥವರ ಕರುಳನ್ನೂ ಹಿಂಡಿಬಿಡುತ್ತದೆ. ಆಡಿಸುವಾತನ ಕೈಚಳಕದಲಿ ಎಲ್ಲವಡಗಿದ್ದರೂ, ಬೊಂಬೆಯನ್ನಾಡಿಸುವ ಕೈಗಳು ಕಾಲವಲ್ಲದ ಕಾಲದಲ್ಲಿ ಸೋತುಹೋಗಿರುವುದು ದಿಗ್ಭ್ರಮೆಯನ್ನುಂಟು ಮಾಡಿದೆ.

‘ತಾನೆ ಉರಿದು ಮನೆಗೆ ಬೆಳಕು ಕೊಡುವ ದೀಪವಿದು
ನಂದಾ ದೀಪವೇ ಇದು
ಆಡಿಸುವಾತನ ಕರುಣೆಯ ಮೇಲೆ ನಮ್ಮ ಪಾತ್ರವು
ಸಮಯದ ಸೂತ್ರ ಅವನದು’

ಎಂದಿದ್ದರೂ, ಬೆಳಗುವ ನಂದಾದೀಪವೊಂದು ನಂದಿಹೋಗಿ ನಾಡಿನ ತುಂಬೆಲ್ಲಾ ಕತ್ತಲಾವರಿಸಿದ ದೌರ್ಭಾಗ್ಯ ನಮ್ಮದು‌. ನಮ್ಮದೇ ಮನೆಯ ಮಗುವೆಂಬಂತೆ ಮುದ್ದಾಡಿ ಬೆಳೆಸಿದ ಕೂಸೊಂದು ಕಾಣದಂತೆ ಮಾಯವಾದಾಗ ಅನುಭವಿಸುವ ಸಂಕಟವನ್ಜಂತೂ ಹೇಳತೀರದು ಎನ್ನುತ್ತಾಳೆ ಹೆತ್ತ ಸಾಕಿ. ೧೯೭೭ ರ ಸುಮಾರಿನಲ್ಲಿ ಮದ್ರಾಸಿನಲ್ಲಿದ್ದ ಡಾ. ರಾಜಕುಮಾರರ ಮನೆಗೆ ಹೋಗಿ ಪಾರ್ವತಮ್ಮನವರ ಕಂಕುಳಲ್ಲಿದ್ದ ಲೋಹಿತನನ್ನು ಎದೆಗಪ್ಪಿಕೊಂಡು ಬಂದ ನನ್ನ ಸಾಕಿಗಿಂದು ಹೃದಯವೇ ಒಡೆದು ಹೋದ ಭಾವ ಕಾಡುತ್ತಿರುವುದನ್ನು ನೋಡಲಾಗುತ್ತಿಲ್ಲ. ಆರೇಳು ತಿಂಗಳ ಹಸುಳೆಯಾಗಿದ್ದ ಸಮಯವಲ್ಲದ ಸಮಯದಲ್ಲಿ ಹಚ್ಚಿದ ಬಣ್ಣವಿನ್ನೂ ಮಾಸುವ ಮುನ್ನವೇ ಕಮರಿ ಹೋದಂತಾಗಿದೆ ಆಂಜನೀಪುತ್ರನ ಕನಸು. ಭಾರವಾಗಿದೆ ಕೋಟಿ ಕನ್ನಡಿಗರ ಮನಸು. ಅಲ್ಲೆಲ್ಲೋ ಇರುವ ಸಾವು ಮನೆಯ ಬಾಗಿಲೊಳಗೆ ಕಾಲಿಟ್ಟ ಅನುಭವ ದಂಗುಬಡಿಸಿದೆ. ಇಂತಹ ಸಾವಿನಿಂದ ಭೂಕಂಪನಕ್ಕೂ ಮಿಗಿಲಾದ ಅಂತರಂಗದ ಆಲಾಪನ ಮೇರೆ ಮೀರಿದೆ. ದುರ್ವಿಧಿ ತನಗೆ ಪ್ರಿಯವಾದುದನ್ನು ಪಡೆದುಕೊಂಡು ತೇಗಿದೆಯಷ್ಟೆ.

ಕನಸುಗಳ ಕದ್ದೊಯ್ದ ವಿರಾಟ ವಿಧಿಯೇ
ಹೃದಯವನ್ನೇಕೆ ಒಡೆಯುವೆಯಿಂತು ಮಾಯೆ
ನಿಂತು ಹೋಯಿತೇ ಕನ್ನಡಿಗರ ಆರ್ಭಟದ ಮಾತು
ಬಾಳುವುದೆಂತು ತಾಯೆ ಹೀಗೆ ಭವಿಷ್ಯವ ಹೂತು

ಎಂದು ಕನ್ನಡಮ್ಮನ ಸಂಕಟ ನೆನೆದು ನಾನು ವಿಧಿಯನ್ನು ಶಪಿಸಿದ ಬಗೆಯಿದು. ನಮಗೆ ಶಬ್ದಾರ್ಥಗಳಲ್ಲಿ ಮಾತ್ರ ಹೀಗೆ ನಿಲುಕಬಹುದಾದ ಮರಣದ ನಿಗೂಢ ರಹಸ್ಯವನ್ನರಿತವರಾರು ?. ನಾವೆಲ್ಲರೂ ಬದುಕುತ್ತಿರುವುದೇ ಸಾವಿನೊಂದಿಗಿನ ಅತ್ಯುತ್ತಮ ಗೆಳೆತನದಿಂದಾಗಿ; ಆ ಕಾರಣದಿಂದ ಮಾಡಿಕೊಂಡ ಅನಿಶ್ವಿತ ಒಪ್ಪಂದದಿಂದಾಗಿ ಎಂಬ ಸತ್ಯವನ್ನು ಪುನೀತರ ಸಾವು ದರ್ಶಿಸುವಂತೆ ಮಾಡಿದೆ. ಈ ಎಚ್ವರ ತಂದ ಭಯವೇ ಜಯದೇವ ಹೃದ್ರೋಗ ಆಸ್ಪತ್ರೆಯನ್ನು ಇಂದು ತುಂಬಿತುಳುಕುವಂತೆ ಮಾಡಿದೆ. ‘ಹೆತ್ತ ತಾಯಿ ವಿಷ ಕೊಡುವಳೆ? ತಾ ಅಮ್ಮಾ ಕುಡಿಯುವೆ..’ ಎನ್ನುತ್ತಲೆ ಅಂದು ತಾಯಿ ಕಯಾದು ಕೊಟ್ಟ ವಿಷವನ್ನರಗಿಸಿಕೊಂಡ ಭಕ್ತಪ್ರಹ್ಲಾದನ ಆತ್ಮವಿಂದು ನಂಬಿದ ನಾರಾಯಣನೆಡೆಗೆ ತೆರಳಿರುವುದು ಅಭಿಮಾನಿಗಳಲ್ಲಿ ಅನಾಥ ಪ್ರಜ್ಞೆಯನ್ನುಂಟು ಮಾಡಿದೆ. ತಿಂಡಿ ಕೊಟ್ಟರೆ ಮರೆಯಬಹುದಾದ ಮಗುವಿನ ಹಠದಂತಲ್ಲ, ಸಾವು ತಂದ ಈ ದುಃಖ. ಹೀಗಾಗಿ ನೋವು ಜೀವ ಹಿಂಡುತ್ತದೆ. ಪುನೀತರೇ ಹಾಡುವಂತೆ

ನೀರಲ್ಲಿ ಸಣ್ಣ ಅಲೆಯೊಂದು ಮೂಡಿ
ಚೂರಾದ ಚಂದ್ರನೀಗ
ಇಲ್ಲೊಂದು ಚೂರು ಅಲ್ಲೊಂದು ಚೂರು
ಒಂದಾಗಬೇಕು ಬೇಗ

ಎಂಬ ಗೀತೆಯಲ್ಲಿರುವ ಒಡೆದ ಚಂದ್ರನ ಚೂರುಗಳನ್ನು ಒಂದಾಗಿಸುವವರಾರು ? ಇಲ್ಲೊಂದು ಚೂರಿನಂತೆ ಇಹದಲ್ಲಿದ್ದು ಬೆಳಗಿ, ಅಲ್ಲೊಂದು ಚೂರು ಕೈಲಾಸದೊಳಗೆ ಮುಳುಗಿ ಬೆಳಕಾಗುತ್ತಿರುವ ಪರಿಯನ್ನೆಂತು ವರ್ಣಿಸುವುದು ? ನಾಡವರ ಎದೆಯೊಳಗಿನ ಸುನಾಮಿ ಅಲೆಯೊಂದೇ ಉಳಿದು ಹೋದ ಕಹಿ ನೆನಪು. ತಾಳದೇ ಕೊಚ್ಚಿಕೊಂಡು ಹೋದವೆಷ್ಟು ಜೀವಗಳು ಮುಡಿಪು. ಬೆಳಕು ಬೆಳಕನ್ನೇ ಸೇರಿದ ಹಾಗೆ ಭುವಿಯ ಮೇಲಿನ ತಾರೆಯಿಂದು ಕ್ಷೀರಪಥದ ಹಾದಿಯನ್ನು ಹಿಡಿದಿರುವುದು ವಿಷಾದವನ್ನುಂಟು ಮಾಡಿದೆ.

ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ
ಮಾತೆಲ್ಲ ಮುಗಿದ ಮೇಲೆ ದನಿಯೊಂದು ಕಾಡಿದೆ
ಹೇಳುವುದು ಏನೋ ಉಳಿದು ಹೋಗಿದೆ
ಹೇಳಲಿ ಹೇಗೆ ತಿಳಿಯದಾಗಿದೆ

ಕವಿ ಜಯಂತ್ ಕಾಯ್ಕಿಣಿಯವರು ಬರೆದ ಈ ಕವಿತೆಯ ಸಾಲುಗಳು ನಾಡವರ ಸದ್ಯದ ದುಸ್ಥಿತಿಯನ್ನು ಅರ್ಥಪೂರ್ಣವಾಗಿ ಬಣ್ಣಿಸುವಂತಿವೆ. ಎಲ್ಲ ಮುಗಿದ ಮೇಲೆ ಉಳಿಯುವುದೊಂದೇ ಅದು ಕಣ್ಣೀರು. ಪುನೀತರೊಂದಿಗಿನ ಮಾತುಗಳೆಲ್ಲವೂ ಮುಗಿದ ಮೇಲೆಯೂ ಉಳಿದು ಹೋಗಿದ್ದೊಂದೇ, ಇನ್ನೂ ಅಸಂಖ್ಯಾತ ಮಾತುಗಳನ್ನಡಗಿಸಿಕೊಂಡ ನೀರವ ಮೌನ. ಇದೇ ಸದ್ಯ ಭಾರವಾಗಿರುವ ನಿರ್ಭಾವ. ಒಂದವಕಾಶವನ್ನು ನೀಡಬಹುದಾಗಿದ್ದ ಪುನೀತರ ಹೃದಯದ ಧಾವಂತವನ್ನು ಅರಿಯುವುದು ಹೇಗೆ ? ಅದೇ ಹಾಡಿನ ಸಾಲನ್ನು ಕೇಳಿ ‘ಸಣ್ಣ ಹಠವ ಮಾಡಿದೆ ಹೃದಯ ಈ ದಿನ’. ಹಾಡಿದ್ದು ಸಣ್ಣ ಹಠ. ಹೃದಯ ಮಾಡಿದ್ದು, ಮರಳಿ ಬಾರದೂರಿಗೆ ಪುನೀತರನ್ನು ಕರೆದುಕೊಂಡೇ ಹೋಗುವೆನೆಂಬ ದೊಡ್ಡ ಹಠ. ಹೃದಯದ ಭಾಷಾ ಲೋಕವೇ ಬಲು ನಿಗೂಢವೆಂದೆನಿಸುವುದು ಇದೇ ಕಾರಣಕ್ಕಾಗಿ. ಬುದ್ದಿಯನ್ನು ನಂಬದಿದ್ದರೂ ಹೃದಯವನ್ನು ನಂಬು ಎಂದೆನ್ನುವ ನಾಣ್ಣುಡಿಯೇಕೋ ಅಸಂಗತವೆನಿಸುತ್ತಿದೆ ಈಗ. ಈ ಜಗತ್ತಿನ ಅನಂತತೆಗೂ ಕೆಲವೊಮ್ಮೆ ಹೇಗೆ ಗರ ಬಡಿದುಬಿಡಬಲ್ಲದು ಎಂಬುದನ್ನು ಕೇಳಿ-

ಸಾಗರದ ಅಲೆಗೂ ದಣಿವು
ಪರ್ವತಕೂ ಬೀಳೋ ಭಯವು
ಮಳೆಯ ಹನಿಗೂ ಬಂತು ನೋಡು ದಾಹ
ಶಶಿಗೆ ಕಳಚಿ ಹೋಯ್ತು ಖುಷಿಯ ಸ್ನೇಹ

ಹಾಗೆ ದಣಿವು, ಭಯ, ಸ್ನೇಹ, ದಾಹಗಳನ್ನು ಬಯಸದ ಅಮರತೆಯೂ ಕೆಲವೊಮ್ಮೆ ಬಾನಿಂದ ಜಾರಿ ಹೋಗಿಬಿಡಬಹುದಲ್ಲವೇ? ಎಂಬುದೇ ಹೇರಿಕೊಂಡ ಸಮಾಧಾನ. ಇದೇ ಗೀತೆಯ ಕೆಳಗಿನ ಸಾಲುಗಳನ್ನು ಹಾಡಿಬಿಡಿ ಒಮ್ಮೆ-

ಹಾರಾಡೋ ಮೋಡವಿಂದು
ರೆಕ್ಕೆಗಳ ಮುರಿದು ಕೊಂಡು
ನಿಂತಿದೆ ಮಂಕಾಗಿ ಸುಮ್ಮನೆ
ತಂಗಾಳಿ ಅಂಗಳವು ದಂಗಾಗಿ
ಬೆವರಿರೊ ಸೂಚನೆ

ಕಾವ್ಯವೊಂದು ಸಾವನ್ನು ವ್ಯಾಖ್ಯಾನಿಸುವ ಈ ಅದ್ಭುತವೇ ಪುನೀತರ ಸ್ಮರಣೆಯನ್ನು ಇನ್ನಿಲ್ಲದಂತೆ ಆರ್ದ್ರಗೊಳಿಸುತ್ತದೆ. ಹಾರಾಡೋ ಮೋಡವಾಗಿ ಕಲಾಲೋಕದಲ್ಲಿ ಬಯಸಿದೆಡೆಗೆಲ್ಲಾ ಹರಿದು ಹಬ್ಬುವ ಸಮಯದಲ್ಲಿಯೇ, ರೆಕ್ಕೆ ಕತ್ತರಿಸಿಕೊಂಡು ಸಮಾಧಿಯಾದ ಬಗೆಯೇ ಕರುಳಿರಿಯುತ್ತದೆ. ಕನ್ನಡಿಗರ ನಿಟ್ಟುಸಿರಿನಿಂದಾಗಿ ಅಂದು ತಂಗಾಳಿಯೂ ಬೆವರೊಡೆಯಿತು. ಷಡಕ್ಷರದೇವನ ‘ರಾಜಶೇಖರ ವಿಳಾಸ’ ಕಾವ್ಯದಲ್ಲಿನ ತಿರುಕೊಳವಿನಾಚಿಯ ಪ್ರಸಂಗದಲ್ಲಿ ಶೋಕವೇ ಕೊಳವಾಗಿ ಮಡುಗಟ್ಟಿದ ಅನುಭವವೇ ವರ್ತಮಾನದಲ್ಲಿ ಪುನೀತರ ಅಗಲಿಕೆಯಿಂದ ನಮ್ಮದಾಗಿರುವುದಕ್ಕೆ ಅತೀವ ಬೇಸರವಿದೆ‌. ಅಲ್ಲಿಯ ತಿರುಕೊಳವಿನಾಚಿಯ ಪ್ರತಿಮೆಯೇ ಇಲ್ಲಿಯ ಕನ್ನಡದೇವಿ.

ಹೊಟ್ಟೆ ಹೊಸೆದುಕೊಂಡು ಕಂಬನಿಗರೆದ ಅಂದಿನ ತಿರುಕೊಳವಿನಾಚಿಯ ದುಃಖವೇ ಸದ್ಯ ಕನ್ನಡಮ್ಮನ ಕಣ್ಣೀರಾಗಿ ಹರಿದಿರುವುದೊಂದು ವಿಪರ್ಯಾಸ. ಅಲ್ಲಿ ಮಂತ್ರಿಯ ಮಗ ಮಿತವಚನನ ಕುದುರೆಯ ಖುರಪುಟಕ್ಕೆ ಸಿಲುಕಿ ತೀರಿಹೋದ ಕಂದನ ಕಳೆಬರವನ್ನೆತ್ತಿಕೊಂಡು ‘ಸರಿವರೆಯದ ಮಕ್ಕಳ್ ಶಂಕರನೆಲ್ಲಿ ಎಂದರೆ ಏನೆನ್ನಲಿ? ನೀನಾಡಿದೆಡೆಗಳಂ ಸುತ ನೀನೊರಗಿದ ಪಾಸುವಂ, ನೀನುಂಡ ತಾಣವನ್ನು ಇನ್ನು ಹೇಗೆ ನೋಡಲಿ?’ ಎಂದು ಗೋಳಿಡುವ ಸರದಿ ವಿಧಿಯೆಂಬ ಅಶ್ವಮೇಧದ ಕುದುರೆಯ ಕಾಲಿಗೆರಗಿ ಬತ್ತಿ ಹೋದ ಹೃದಯದರಸ ಅಪ್ಪುವನ್ನು ಕಳೆದುಕೊಂಡ ಕನ್ನಡಮ್ಮನದ್ದಾಗಿದೆಯೆಂಬುದೇ ಎದೆಯೊಡೆಯುತ್ತದೆ. ಬಾನದಾರಿಯಲ್ಲಿ ಹೀಗೆ ಹೇಳದೇ ಜಾರಿ ಹೋದ ಸೂರ್ಯನನ್ನು ಅರಸುವ ಸರದಿ ನಮ್ಮದಾಗಿರುವುದು ದುರದೃಷ್ಟಕರ.

ಬೆಂಕಿ ಮಳೆಗೆ ಬೆಂದ ಮೇಲೆ ಹೂವು
ಹೇಗೆ ತಾನೆ ಕಾಣಬೇಕು ನಗುವು

ಅವರೇ ಹಾಡಿದ ಈ ಎರಡು ಸಾಲುಗಳು ಸಾಕು ನಮ್ಮ ದೌರ್ಭಾಗ್ಯವನ್ನು ಬಣ್ಣಿಸಲು. ಬೆಂಕಿ ಮಳೆಯೆಂದರೇನೆಂದು ಅರಿಯದ ನಮಗಿಂದು ಅದರ ದರ್ಶನವಾಗುತ್ತಿರುವ ಭಯ ಕಾಡುತ್ತಿದೆ. ಬೆಳಗುತ್ತಿರುವ ಪುನೀತ ಧೃವತಾರೆಯ ಬೆಳಕಿನಲ್ಲಿಯೇ ಭಾರವಾದ ಹೃದಯದಿಂದಲೇ ಮುಂದಡಿಯಿಡಬೇಕಾಗಿರುವುದೇ ಮಂಜಾಗಿರುವ ನಮ್ಮ ಕಣ್ಣ ಮುಂದಿರುವ ಹಾದಿ. ಕಣ್ಣಿಂದ ಜಾರಿದ ಹಾಡಿನ ಹನಿಗಳಿವು-

ಕಾಲ ನೀನು ಮಾಯ
ಇಲ್ಲ ನಿನಗೆ ನ್ಯಾಯ
ವಾಸಿ ಮಾಡೋರ್ಯಾರು
ಒಳಗೆ ಆದ ಗಾಯ

‍ಲೇಖಕರು Admin

November 16, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Channabasappa

    ಅದ್ಭುತವಾಗಿ ಮೂಡಿಬಂದಿದೆ ಸರ್. ಪುನೀತ್ ರಾಜ್‍ಕುಮಾರ್ ಅವರ ಬಗ್ಗೆ ಬರೆದು ಸಾಹಿತ್ಯ ನಮನ ಸಲ್ಲಿಸಿದ್ದಿರಿ. ಅದೇ ರೀತಿ ಓದಿ ನಾವು ಭಾವ ನಮನ ಸಲ್ಲಿಸಿದಾಗಾಹಿತು. ಅಪ್ಪು ಚೀರಾಯು. ಅವರ ಬದಕು, ಸಮಾಜ ಸೇವೆ, ನಡೆ ನುಡಿ. ಎಲ್ಲ ವಯೋಮಾನದವರಿಗೂ ದಾರಿ ದೀಪ. ಅದೇ ರೀತಿ ನೀವು ಸಂಗ್ರಹಿಸಿದ ಮಾಹಿತಿಯು ವಿಶಾಲವಾಗಿದೆ .

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: