ಸಂಘಮಿತ್ರೆ ನಾಗರಘಟ್ಟ
ಮೂಳೆ ಮಾಂಸದ ಮನುಜರೇ
ನನ್ನ ಜೊತೆ ತರ್ಕ ಮಾಡಬೇಡಿ
ನಾನು- ನಿಮ್ಮಂಥೆ ಜಾತಿ-ಧರ್ಮ
ವನ್ನು ಪರಿಗಣಿಸುವುದಿಲ್ಲ!
ನನ್ನ ಗುರಿಯೂ ಹಾಗೇ
ಬಡವ – ಬಲ್ಲಿದ ಎಲ್ಲರೂ ಸಮಾನರೇ.
ನನ್ನವ್ವ- ಇಳೆಯ ಬಗೆದು ಬಗೆದು
ಇಟ್ಟಿಗೆ ಮೇಲೊಂದು ಇಟ್ಟಿಗೆ
ಇರಿಸಿ ನೆಲೆ ಮಾಡಿರುವಿರಿ
ನಿಮ್ಮ ಸ್ವಾರ್ಥಕ್ಕೆ ನನ್ನದೊಂದು
ಭೀತಿಯ ಸೃಷ್ಟಿ ಇದು.
ನನಗೆ ನಿಮ್ಮೊಂದಿಗೆ ಯಾವ
ವೈಮನಸ್ಯ ಇಲ್ಲ!
ಆದರೆ ನನ್ನವ್ವನಿಗೆ
ನೀವು ಕೊಟ್ಟ ನೋವಿನ
ವಿರುದ್ಧವಷ್ಟೇ ನನ್ನ ಸೇಡು.
ಕ್ಷಮೆ ಇರಲಿ….
ನನಗೆ ಕಂಗಳಿಲ್ಲ
ಉತ್ತಮರು- ಕನಿಷ್ಠರ್ಯಾರೆಂದು
ಭಿನ್ನಮಾಡಲು-
ನಾನು ನಿಮ್ಮಂಥೆಯೇ
ನಿಮ್ಮೊಳಗೆ ಹೊಕ್ಕು
ನನ್ನ ಅಸ್ತಿತ್ವವನ್ನೂ
ಕಳೆದುಕೊಳ್ಳುತ್ತಿರುವೆ…!
0 ಪ್ರತಿಕ್ರಿಯೆಗಳು