ವಿಜಯಶ್ರೀ ಎಂ. ಹಾಲಾಡಿ
***
ನೋವು ಎದೆಗಿರಿದು
ಸುಡುವಾಗ
ಕವಿತೆ ಹುಟ್ಟಲಿಲ್ಲ
ಇನ್ನಿಲ್ಲವಾದ ಅಪ್ಪ
ಪದ್ಯದೊಳಗೆ ಬರಲೇ ಇಲ್ಲ
ಕಣ್ಣ ರೆಪ್ಪೆಯೊಳಗೆ
ಗಾಯವಾಗಿ ಕುಳಿತ
ಪ್ಯಾಲಸ್ತೇನಿನ ಮಕ್ಕಳು
ಕಾವ್ಯವಾಗಲಿಲ್ಲ
ದಾಸುಬೆಕ್ಕಿಗೆ
ನೆರೆಯವರು ವಿಷವುಣಿಸಿದಾಗ,
ನಗರದ ರಸ್ತೆಯೊಳಗೆ
ಹಸಿದ ಬೀದಿನಾಯಿ
ಅತ್ತಾಗ
ತತ್ತರಿಸಿದ ಪದಗಳು
ಹೊರ ಹೊರಡಲಿಲ್ಲ
ದ್ರೋಹದ ಚೂರಿಯಲಗು
ಎದೆಯಿರಿದು
ಹಿಡಿ ಕರುಣೆಯ
ಹಂಗಿಗೆ ಬಿದ್ದಾಗ
ಕವನ ಕೈ ಹಿಡಿಯಲಿಲ್ಲ
ಕಾವ್ಯವನ್ನು ದೂರಿ
ಕ್ರೂರಿಯಾಗಲಾರೆ
ಸಂಕಟಗಳಿಗೂ
ಕವಿತೆಗಳಿಗೂ
ವೈಮನಸ್ಸಿರಬಹುದು
ಅಥವಾ ಕಡುಸಂಕಟಗಳು
ಕವಿತೆಯ ಕುತ್ತಿಗೆ
ಒತ್ತಿ ಹಿಡಿಯುತ್ತವೆಯೋ!
ಬಹುಶಃ….
ಹೇಳಲಾರೆ!
0 ಪ್ರತಿಕ್ರಿಯೆಗಳು