ವಿಜಯಶ್ರೀ ಹಾಲಾಡಿ
ನನ್ನ ಕೈತೋಟದ ಹೂಗಳಿಗೆ
ಚಿಗುರು, ಒಣ ಗಿಡಗಳಿಗೆ
ಚುಂಬಿಸುತ್ತೇನೆ
ಬಾಚಿ ಬರಸೆಳೆದು
ತಬ್ಬುತ್ತೇನೆ
ಹಾಗೇ ನನ್ನ ಟೆಡ್ಡಿಯನ್ನು
ಬಳಸಿ ಮುತ್ತಿಟ್ಟು
ಮುದ್ದಿಸುತ್ತೇನೆ
ಇದೆಲ್ಲ ಏಕೆ ಹೇಳ-
ಬೇಕಾಯಿತೆಂದರೆ….
ಮೊನ್ನೆ ಯಾರೋ ಕೇಳಿದರಂತೆ
ಆ ಹೆಂಗಸಿನ ಗಂಡ ದೂರ
ದೇಶದಲ್ಲಿ, ಮಗಳೋ ಎದೆಯೆತ್ತರ ಬೆಳೆದವಳು
ಅವಳು ಯಾರನ್ನು ಮುಟ್ಟುತ್ತಾಳೆ
ಪ್ರೀತಿ ತೋರಿಸುತ್ತಾಳೆ ಎಂದು!
ಸದ್ಯ ಆ ದಿನ ನಾನು
ನನ್ನ ಕನಸು
ಕಲ್ಪನೆಯಲ್ಲಿ ಕಾಡುವ
ಅಮೂರ್ತ ಪ್ರೇಮಿಯ
ಕುರಿತು ಹೇಳಲಿಲ್ಲ
ನಾನು ಬರೆಯುವ
ಕವಿತೆಗಳಲ್ಲಿ ಧುಮ್ಮಿಕ್ಕುವ
ಅವನ ಬಗೆಗೆ
ಚಕಾರವೆತ್ತಲಿಲ್ಲ
ಹಾಗೇನಾದರೂ ಆಗಿದ್ದರೆ
ಆ ಸಣ್ಣ ಊರೊಳಗೆ
ಎಂತೆಂತಾ ಗಡಿಬಿಡಿ
ಸಂಭವಿಸೀತೆಂದು ಊಹಿಸಿಯೇ
ಕೈ ಬಿಟ್ಟೆ!
ಇಲ್ಲ, ಇನ್ನೊಮ್ಮೆ
ಎಲ್ಲವನ್ನೂ ಅರುಹಿ ಹಗುರಾಗಿ
ಹೊಟ್ಟೆ ಬಿರಿಯೆ ನಕ್ಕು
ಕದವಿಕ್ಕಿ ಒಂದು ಹಗಲು
ಒಂದು ರಾತ್ರಿ
ನಿದ್ರಿಸಿ ಬಿಡಬೇಕು
ಬೆಳಗ್ಗೆ
ಅರಳುವ ಹೂಗಳ ಕಾಣುತ್ತ
ನಿರಾಳ ಚಹಾ ಹೀರಬೇಕು!
ಹಗುರವಾಗಿ ಸುವ ಕವಿತೆ ವಿಜಯಶ್ರೀ