ಅವಧಿಯ ಮಹತ್ವದ ಪ್ರಯೋಗಗಳಲ್ಲಿ ಮುಖ್ಯವಾದದ್ದು ‘Poet of the Week’
ಹೊಸ ಬನಿಯ ಕವಿತೆಗಳನ್ನುಪರಿಚಯಿಸುವ, ಆ ಮೂಲಕ ಕನ್ನಡ ಕಾವ್ಯ ಲೋಕವನ್ನು ಪ್ರವೇಶಿಸುತ್ತಿರುವ ಕವಿಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ.
ಅಷ್ಟೇ ಅಲ್ಲದೆ ಪ್ರಕಟಿಸಿದ ಕವಿತೆಗಳನ್ನು ಕಾವ್ಯ ಪ್ರಿಯರಿಗೆ ಕಳಿಸಿಕೊಟ್ಟು ಅವರ ಅಭಿಪ್ರಾಯವನ್ನು ಪ್ರಕಟಿಸುವುದು. ಇದರಿಂದ ಕವಿಗಳಿಗೆ ಮೊದಲ ಅಭಿಪ್ರಾಯವನ್ನು ಧಕ್ಕಿಸಿಕೊಟ್ಟು ಅವರು ಇನ್ನಷ್ಟು ಬರೆಯಲು ಕುಮ್ಮಕ್ಕು ನೀಡುವುದು ಉದ್ಧೇಶ.
ಕಳೆದ ವಾರ ಬಿದಲೋಟಿ ರಂಗನಾಥ್ ಅವರ ಕವಿತೆಗಳನ್ನು ಪ್ರಕಟಿಸಿದ್ದೆವು. ಅದು ಇಲ್ಲಿದೆ.
ವಕೀಲ ರಂಗನಾಥ್ ಕವಿತೆಗಳನ್ನು ಹೊರಗೆ ಹಚ್ಚಿದವರು ಮತ್ತೊಬ್ಬ ವಕೀಲ ಸಿ.ಕೆ.ಮಹೇಂದ್ರ ನಂದನವನ. ಪ್ರಜಾವಾಣಿಯಲ್ಲಿ ಹಿರಿಯ ವರದಿಗಾರರಾಗಿ ತಮ್ಮ ಹರಿತ ವರದಿಗಾರಿಕೆಯ ಮೂಲಕ ಗಮನ ಸೆಳೆದಿದ್ದ ಮಹೇಂದ್ರ ಕಥೆ, ಕವನಗಳನ್ನು ಬರೆದಿದ್ದಾರೆ.
ರಂಗನಾಥ ಕತ್ತಲೆಯನ್ನು ನೋಡುವ ಕವಿ. ಕಣ್ಣು ಕೋರೈಸುವ ಅಭಿವೃದ್ಧಿಯ ಸುಳ್ಳು ಕಥೆಗಳು, ಖಾಸಗೀಕರಣ, ಜಾಗತೀಕರಣದ ಕೊಳ್ಳುಬಾಕ, ನೋಡು ಬಾಕ, ಮೌನ ಬಾಕ ಸಂಸ್ಕೃತಿ ನಮ್ಮನ್ನು ಸಂಪೂರ್ಣ ಆವರಿಸಿಕೊಳ್ಳುತ್ತಿರುವ ಈ ಹೊತ್ತಿನಲ್ಲಿ ರಂಗನಾಥ್ ಎಲ್ಲಿಂದಲೊ ಇವುಗಳಿಗೆ ದೊಂದಿ ಹಿಡಿದು ನಾವು ಹೀಗಿಲ್ಲ, ನಾವು ಇರಬೇಕಾದದ್ದು ಹೀಗೆ ಎಂದು ಕಾಣಿಸುತ್ತಾರೆ.
ಒಂದು ಕಡೆ ಅವರ ಕವನಗಳಲ್ಲಿ ಕನಸುಗಳಿಗೆ ಜಾಗವಿದೆ. ಇನ್ನೇನು ಈ ಕನಸುಗಳು ನಿಜವಾಗಬಹುದು ಎಂಬ ಭಾವದಲ್ಲಿ ಓದುವಾಗ ಅವು ವಿಪ್ಲವವಾಗುವ ಕಡೆ ಸಾಗಿ ಬಿಡುತ್ತಾರೆ. ಒಳ್ಳೆಯ ಆಶಯಗಳು ಅನುಷ್ಠಾನಕ್ಕೆ ತರುವಾಗ ಕತ್ತಿ ಹಲಗೆಯ ಅಡ್ಡಿ ಆತಂಕಗಳನ್ನು ಎದುರಿಸಬೇಕಾಗಿದೆ.
ಇವರ ಕವನಗಳಲ್ಲಿ
ಎಷ್ಟೊಂದು ಒಡಲುಗಳ
ಹಸಿವ ತಣಿಸಿದ ಅನ್ನದಾತ
ಕಳೆ ತುಂಬಿದ ಕಳೇಬರ ಹೊತ್ತು
ಹೊರಟಿದೆ ಮೆರವಣಿಗೆ
ಸಿದ್ಧಗಂಗಾ ಮಠದ ತುಂಬಾ….
ನಡೆದಾಡುವ ದೇವರು…ಎಲ್ಲ ದೇವರಂತೆ ನೀವು ಮೌನಿ…….ಮಾತಿಲ್ಲದ ದೇವರ ಗುಡಿಗೆ ಹೇಗೆ ಬರಲಿ..
ಗಮನ ಸೆಳೆಯುತ್ತವೆ
ಎಲ್ಲ ದೇವರಂತೆ ನೀವು ಮೌನಿ ಕವಿತೆಯ ಈ ಸಾಲುಗಳು ರೈತರಿಗೆ ದೇವರೆನಿಸಿದವರು ಹೇಗೆ ದೇವರಾಗದೇ ಹೋದರು, ಕಲ್ಲು ದೇವರುಗಳು ಸಹ ಹೇಗೆ ಮೌನವಾಗಿವೆ ಎಂದು ಹೇಳುತ್ತಲೇ ಎಲ್ಲೆಲ್ಲೋ ಸುತ್ತಿ ಬರುವ ಕವಿತೆ ಕೊನೆಗೆ ದೇವರನ್ನು ನಿರಾಕರಿಸುವ ಗೋಜಿಗೆ ಹೋಗುವುದಿಲ್ಲ.
ತೀರಾ ಕ್ರಾಂತಿಕಾರಿಯೂ ಅಲ್ಲದ, ಕಟು ವಾಸ್ತವಗಳಿಗೆ ಸೋಗಲಾಡಿತನದ ಮೌನವೂ ತಾಳದೇ ದಿಟ್ಟತನದಿಂದಲೇ ಉತ್ತರ ಹೇಳುತ್ತಾ ಅಸಹಾಯಕತೆಯನ್ನು ಇಲ್ಲಿನ ಕವಿತೆಗಳು ಎತ್ತಿ ತೋರಿಸುತ್ತವೆ.
ಅಸಹಾಯಕತೆ ಬಹುಜನರ ಉತ್ತರವೂ ಆಗಿದೆ ಎಂಬ ವಾಸ್ತವವೂ ಇಲ್ಲಿ ಅಡಗಿದೆ. ಬೇಗನೇ ಕ್ರಾಂತಿಗಿಂತಲೂ ಅನುಸಂಧಾನದ ಬದಲಾವಣೆಯನ್ನು ರಂಗನಾಥ್ ತಮ್ಮ ಕವಿತೆಗಳ ಮೂಲಕ ಬಯಸಿದಂತಿದೆ.
0 ಪ್ರತಿಕ್ರಿಯೆಗಳು