ವಾಣಿ ಭಂಡಾರಿ
ಚುಚ್ಚುವ ಮುಳ್ಳಿಗೇನು ಗೊತ್ತು ನೋವಿಂದ ಅರಳುವ ಗುಲಾಬಿಯ ಸಂಕಟ
ದಬ್ಬುವ ಗಾಳಿಗೇನು ಗೊತ್ತು ಅಳುತ್ತಾ ಉದುರುವ ಎಲೆಯ ಸಂಕಟ.
ದೀಪಗಳ ಮಾತು ಕತ್ತಲೆಯ ಮೌನ ದಿಟ್ಟಿಸಿದೆ ಮನದ ಆಲಯದೊಳಗೆ
ಸುರಿವ ಮಳೆಗೇನು ಗೊತ್ತು ಮೋಡದ ಪ್ರಸವ ವೇದನೆಯ ಸಂಕಟ.
ಕಲ್ಲುಮುಳ್ಳು ದಾರಿಹೋಕರು ಬಾಳ ಪಯಣವೆ ಕಪ್ಪು ಬಿಳುಪು ಜೊತೆಗೆ
ತಳ್ಳುವ ನೀರಿಗೇನು ಗೊತ್ತು ಈಜುತ್ತಲೇ ಕುಸಿದಿರುವ ನಾವೆಯ ಸಂಕಟ
ಆರು ಮೂರು ಜೀವಜಾಲ ನಂಟು ಬೆಸುಗೆ ಬಯಕೆ ಬಯಲ ಅಣುವಿಗೆ
ಮುಚ್ಚುವ ಮಣ್ಣಿಗೇನು ಗೊತ್ತು ಅಗಲಿಕೆಯ ನೋವಿನ ಜೀವಿಯ ಸಂಕಟ
ಕಾಲಸೂತ್ರ ಎಣಿಕೆಯಂತೆ ಜೀವಮಾನಕೆ ಯಾರಿಲ್ಲ ಬಾಳ ಬಂಡಿಗೆ
ಕೊಲ್ಲುವ ಭಾವಗಳಿಗೇನು ಗೊತ್ತು ಶಾಲ್ಮಲ ಹೃದಯದ ವಾಣಿಯ ಸಂಕಟ.
0 ಪ್ರತಿಕ್ರಿಯೆಗಳು