ವಸುಧೇಂದ್ರರೊಂದಿಗೆ ಒಂದು ’ಛಂದ’ದ ಸಂಜೆ

-ಸಂದೀಪ್ ಕಾಮತ್
‘ಕಡಲತೀರ’ದಿಂದ 
ಪ್ರತಿವರ್ಷದಂತೆ ಈ ವರ್ಷವೂ ವ್ಯಾಲೆಂಟೈನ್ಸ್ ಡೇ ಗೆ ಯಾವ ಹುಡುಗಿಯೂ ನನಗೆ ಪ್ರಪೋಸ್ ಮಾಡಿಲ್ಲ ! ನಾನು ಯಾರಿಗಾದ್ರೂ ಪ್ರಪೋಸ್ ಮಾಡೋಣ ಅಂದ್ರೆ ’ಯಾರಿಗೆ’ ಅನ್ನೋ ದ್ವಂದ್ವ!ಹೀಗಾಗಿ ಈ ವ್ಯಾಲೆಂಟೈನ್ಸ್ ಡೇ ಕೂಡಾ ವ್ಯರ್ಥವಾಯ್ತೇನೋ ಅಂದುಕೊಂಡೆ .

 

ಹಾಗಾಗಲು ’ಮೇ ಫ್ಲವರ್’ನವರು ಬಿಡಲಿಲ್ಲ !ಹಾಗಂತ ಪ್ರಪೋಸ್ ಮಾಡಲು ನನ್ಗೆ ಹುಡುಗಿ ಹುಡುಕಿ ಕೊಟ್ಟರು ಅಂದುಕೋಬೇಡಿ !
ಪ್ರೇಮಿಗಳ ದಿನದಂದೇ ನಮ್ಮ ನೆಚ್ಚಿನ ಕಥೆಗಾರ ವಸುಧೇಂದ್ರರೊಂದಿಗೆ ಒಂದು ಸುಂದರ ಸಂಜೆಯನ್ನು ಕಳೆಯುವ ಅವಕಾಶವನ್ನು ಮೇ ಫ್ಲವರ್ ನವರು ಕಲ್ಪಿಸಿದ್ರು.ಕಾರ್ಯಕ್ರಮದಲ್ಲಿ ಭಾಗವಹಿಸಿದ ಜನರ ಸಂಖ್ಯೆಯೇ ಸಾಕು ವಸುಧೇಂದ್ರರ ಜನಪ್ರಿಯತೆ,ಜನರು ಅವರನ್ನು ಇಷ್ಟಪಡುತ್ತಿರೋ ಬಗೆಯನ್ನು ತಿಳಿಸಲು.
2300981979_e41f6a0e7d_m’ನನಗೆ ಚೆನ್ನಾಗಿ ಮಾತಾಡಲು ಬರೋದಿಲ್ಲ ’ ಅಂತ ಹೇಳಿಯೇ ವಸು ಪಾಪ ಒಂದೂ ಕಾಲು ಘಂಟೆಗಳ ಕಾಲ ನಿರರ್ಗಳವಾಗಿ ಸ್ವಲ್ಪವೂ ಬೋರ್ ಹೊಡೆಸದೆ ಅದ್ಭುತವಾಗಿ ಮಾತಾಡಿದ್ರು.

ಕಾರ್ಯಕ್ರಮಕ್ಕೆ ಬರದವರಂತೂ ಒಂದು ಒಳ್ಳೆಯ ಅವಕಾಶವನ್ನು ಕಳೆದುಕೊಂಡರು -ಸಾರಿ ಕಣ್ರೀ !
ಐದು ಚಂದನೆಯ ’ಹುಡುಗಿಯರು’(ಯಾರು ಅನ್ನೋದು ಸಸ್ಪೆನ್ಸ್!) ವಸುಧೇಂದ್ರರನ್ನು ಕೆಂಪು ಗುಲಾಬಿ ಕೊಟ್ಟು ಸ್ವಾಗತಿಸಿದರು.’ನನಗೆ ಅಷ್ಟು ಚೆನ್ನಾಗಿ ಮಾತಾಡೋಕೆ ಬರಲ್ಲ ಆದ್ದರಿಂದ ಒಂದು ಲೇಖನವನ್ನು ಓದಿ ಕಾರ್ಯಕ್ರಮ ಆರಂಭಿಸ್ತೀನಿ ’ ಅಂತ ವಸು ಹೇಳಿದ್ರೂ ಮೋಹನ್ ಅವರು ಒಪ್ಪದೆ ’ಮೊದಲು ಮಾತಾಡಿ ಆಮೇಲೆ ಲೇಖನ ಓದಿ’ ಅಂದಿದ್ದು ಒಳ್ಳೆಯದೇ ಆಯ್ತು.ಇಲ್ಲಾಂದ್ರೆ ಅಷ್ಟು ಮಾತಾಡೋದು ಸಾಧ್ಯ ಆಗ್ತಿರ್ಲಿಲ್ವೇನೋ!

ವಸು ತಾವು ಕಥೆ ಬರೆಯಲು ಶುರು ಮಾಡಿದ ರೀತಿ ,’ಛಂದ ಪುಸ್ತಕ’ ಹುಟ್ಟಿದ ರೀತಿ ಯನ್ನು ಚೆನ್ನಾಗಿ ವಿವರಿಸಿದರು.ಉತ್ತರ ಕರ್ನಾಟಕ flavour ಇರ್ಲಿ ಅಂತ ಅವರು ತಮ್ಮ 

ಪ್ರಕಾಶನಕ್ಕೆ ’ಛಂದ ’ಆನ್ನೋ ಹೆಸರಿಟ್ಟರಂತೆ .ಮೊದ ಮೊದಲು ತಮ್ಮ ಪುಸ್ತಕಗಳು ಮಾರಾಟವಾಗಲು ತಾವು ಪಟ್ಟ ಶ್ರಮವನ್ನು ಹಾಸ್ಯಭರಿತವಾಗೇ ವಿವರಿಸಿದರು.ಜೊತೆಗೆ ’ಛಂದ ಪುಸ್ತಕ’ ಕ್ಕೆ ಗೆಳೆಯ ಅಪಾರರ ಅಪಾರವಾದ ಕೊಡುಗೆಯನ್ನೂ ಮನದುಂಬಿ ಕೊಂಡಾಡಿದರು .
ತಮ್ಮ ಪುಸ್ತಕಗಳನ್ನು ಸಾಹಿತ್ಯ ಸಮ್ಮೇಳನದಲ್ಲಿ ಮಾರಾಟ ಮಾಡಲು ಹೋದಾಗ ಅನುಭವಿಸಿದ ಮುಜುಗುರದ ಪ್ರಸಂಗವನ್ನೂ ಅವರು ವಿವರಿಸಿದರು.
ಒಂದು ಕಡೆ ಸಮ್ಮೇಳನದಲ್ಲಿ ಅವರು ತಮ್ಮ ಪುಸ್ತಕ ಮಾರಾಟ ಮಾಡ್ತಿದ್ದಾಗ ಒಬ್ಬರು ಬಂದು ಅವರನ್ನೇ ’ಈ ಪುಸ್ತಕ ಹೇಗಿದೆ ?’ ಅಂತ ಕೇಳಿದ್ರಂತೆ .ಮೊದ ಮೊದಲು ,ಮುಜುಗುರ ಆಗ್ತಾ ಇದ್ರೂ ಕಾಲ ಕಳೆದಂತೆ ಅಂತ ಸಂದರ್ಭಗಳಿಗೆ ಒಗ್ಗಿಕೊಂಡ ಬಗೆಯನ್ನೂ ವಿವರಿಸಿದರು.
ಇನ್ನೊಂದು ಕಡೆ ಸಮ್ಮೇಳನದಲ್ಲಿ ಒಬ್ಬ ಹೆಂಗಸು ತಮ್ಮ ’ಚೇಳು’ ಕಥಾ ಸಂಕಲನವನ್ನು ತೋರಿಸಿ ’ಅದು ಹೇಗಿದೆ ?’ ಅಂದರಂತೆ ವಸುಧೇಂದ್ರ ಈಗಾಗಲೇ ಮಾರ್ಕೆಟಿಂಗ್ 
ತಂತ್ರವನ್ನು ಕಲಿತಿದ್ದರಿಂದ ’ಅದ್ಭುತವಾಗಿದೆ ಮ್ಯಾಡಂ ತಗೊಳ್ಳಿ ಅದಕ್ಕೆ ಪ್ರಶಸ್ತಿ ಬಂದಿದೆ’ ಅಂದ್ರಂತೆ .ಆದ್ರೆ ಆ ಹೆಂಗಸು ತಮ್ಮ ಪಕ್ಕದಲ್ಲಿದ್ದ ಗೆಳತಿಯ ಬಳಿ ಅಭಿಪ್ರಾಯ ಕೇಳಿದಾಗ ’ಛೇ ತಗೋಬೇಡ ಅದು ,ಮಡಿ ಯಾವುದು ಮೈಲಿಗೆ ಯಾವುದು ಗೊತ್ತಿಲ್ಲ ಆ ಕಥೆಗಳಲ್ಲಿ ’ ಅಂತ ಬೈದು ಕರ್ಕೊಂಡು ಹೋದ್ರಂತೆ! ನಾವೆಲ್ಲಾ ನಕ್ಕಿದ್ದೇ ನಕ್ಕಿದ್ದು ಅದನ್ನು ಕೇಳಿ (ನೀವೂ ನಗ್ರಿ ಫ್ರೀ ಆಗಿ!)  

ನನಗೆ ವಸುಧೇಂದ್ರ ಕಥೆಗಾರರಾಗಿ ಎಷ್ಟು ಇಷ್ಟ ಆಗ್ತಿದ್ರೋ ಅವರ ಜೊತೆ ಒಂದು ಸಂಜೆ ಕಳೆದ ಮೇಲೆ ಅದರ ಎರಡು ಪಟ್ಟು ಇಷ್ಟ ಆಗ್ತಾ ಇದ್ದಾರೆ.ಬದುಕಿನ ಬಗ್ಗೆ ಅಪಾರವಾದ ಗೌರವ,ಪ್ರೀತಿ ಇದೆ ಅವರಿಗೆ.

ಬೆಂಗಳೂರಿನ ಟ್ರಾಫಿಕ್ ಬಗ್ಗೆ ಅಸಮಧಾನ ಇರದೆ ಅದನ್ನೇ ಸಕಾರಾತ್ಮಕವಾಗಿ ಬಳಸಿದ ಮೊದಲ ವ್ಯಕ್ತಿ ಬಹುಷಃ ವಸುಧೇಂದ್ರ ! ಯಾಕಂದ್ರೆ ಅವರು ತಮ್ಮ ಬಹಳಷ್ಟು ಕಥೆಗಳನ್ನು ಬರೆದಿರೋದು ಟ್ರಾಫಿಕ್ ನಲ್ಲಂತೆ! ಹಾಗಾಗಿ ತಮ್ಮ ’ಚೇಳು’ ಕಥಾಸಂಕಲನವನ್ನು ಅವರು ಬೆಂಗಳೂರಿನ ಟ್ರಾಫಿಕ್ ಜಾಮ್ ಹಾಗೂ ಅವರ ಡ್ರೈವರ್ ಗೆ ಅರ್ಪಿಸಿದ್ದಾರೆ.

ತಮ್ಮ ಬರವಣಿಗೆಗೆ ಸಹಾಯವಾದ ಶೇಶಾದ್ರಿ ವಾಸುರವರನ್ನೂ ನೆನೆಯಲು ಮರೆಯಲಿಲ್ಲ ವಸುಧೇಂದ್ರ.’ಅದೃಶ್ಯ ಕಾವ್ಯ ’ ಬ್ರೈಲ್ ಅವತರಣಿಕೆಯನ್ನು ತರೋದಿಕ್ಕೆ ಹೇಗೆ ಶೇಷಾದ್ರಿ ವಾಸುರವರು ಬರಹದಲ್ಲಿ ಬ್ರೈಲ್ ಅಳವಡಿಸಿ ತಮಗೆ ಸಹಾಯ ಮಾಡಿದ್ರು ಅನ್ನೋದನ್ನೂ ಅವರು ಹೇಳಿದ್ರು . 
ಸೇರಿದ ಅಭಿಮಾನಿಗಳ ಪ್ರಶ್ನೆಗೂ ಅವರು ಬಹಳ ಚೆನ್ನಾಗಿ ಉತ್ತರಿಸಿದರು.
ಒಟ್ಟಿನಲ್ಲಿ ತಮ್ಮ ಕಥೆಗಳ ಮೂಲಕ ಬಹಳಷ್ಟು ಜನರ ಪ್ರೀತಿಯನ್ನು ಗಳಿಸಿರುವ ವಸುಧೇಂದ್ರ ಹೀಗೆ ಒಳ್ಳೊಳ್ಳೆಯ ಕಥೆಗಳನ್ನು,ಪುಸ್ತಕಗಳನ್ನು ತಮ್ಮ ’ಛಂದ ಪುಸ್ತಕ’ದ ಮೂಲಕ 

ನೀಡಲಿ ಅನ್ನೋದು ನಮ್ಮೆಲ್ಲರ ಹಾರೈಕೆ.  

ಛಂದದ ಕಾರ್ಯಕ್ರಮ ನಡೆಸಿಕೊಟ್ಟ ಮೇ ಫ್ಲವರ್ ಬಳಗಕ್ಕೆ ಧನ್ಯವಾದಗಳು.

‍ಲೇಖಕರು avadhi

February 15, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ಚಂದ್ರಕಾಂತ

    ಬಹಳ ಸೊಗಸಾದ ಲೇಖನ. ಆದರೆ ನಾವೂ ವಸುಧೇಂದ್ರರ ಮಾತು ಕೇಳಿದ್ದರೆ ಚೆನ್ನಾಗಿತ್ತು ಅನ್ನಿಸಿತು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: