ವಸುಂಧರಾ ಕದಲೂರು
ಹಾಲಿಡೇ ಮೂಡಿನಲ್ಲಿ
ಸೀರಿಯಲ್ ಜಾಡು ಹಿಡಿದು
ಒಬ್ಬರ ಮೈಗೊಬ್ಬರಂಟಿ ಕುಳಿತಿದ್ದ
ಇಬ್ಬರು ಹರಟುತ್ತಿದ್ದರು..
‘ಶೂರ್ಪನಖಿಯೇ ಅವನ
ಅಪಹರಿಸಿದ್ದರೆ..! ಈಕೆ
ಬೆಂಕಿಗೆ ಹಾಯಿಸುತ್ತಿದ್ದಳೇ?
ಕಾಯಿಸುತ್ತಿದ್ದಳೆ!’
‘ಕೂಡುವ ಮುನ್ನ ಸಂಶಯಿಸಿ
ಕಾಡುತ್ತಿದ್ದಳೇ…! ಮತ್ತೆ
ಕಾಡಿಗಟ್ಟುತ್ತಿದ್ದಳೇ?’
‘ಇರಲಾರದು’ ಇವನ
ನಂಬುಗೆ. ‘ಏಕಿರಲಾರದು?’
ಅವಳ ಕೊಂಕು.
‘ಆಕೆ ಭೂಮಿಯಂಥವಳು..’
ಇವನಿಗೆ ಹೆಮ್ಮೆ.
‘ಭೂಕಂಪವೂ ಆಗುತ್ತಲ್ಲಾ..’
ಇವಳ ಪ್ರಶ್ನೆ.
‘ಪುರಾಣದ ಮರು ಓದು ಬೇಕು.
ಭೇಷ್! ಅಪವ್ಯಾಖ್ಯಾನ
ಕೂಡದು’ ಸಿಡಿದು ಎದ್ದನು
‘ಮಹಾರಾಯಾ.. ಈಗ
ನಮ್ಮ ಕಾಲಕ್ಕೇ..’ ಇವಳು
ಏನೋ ಹೇಳ ಹೊರಟಾಗ…
‘ಸಾಕು ನಿಲ್ಲಿಸು ನಿನ್ನ ಪುರಾಣ.’
ಎನ್ನುತ್ತಾ ಕೋಪ ಶಮನಕ್ಕೆ ಕುದಿವ
ನೀರಿಗೆ ಚಹಾ ಹುಡಿ ಹಾಕಿ ಅಡುಗೆ
ಮನೆಯಿಂದ ಕೂಗಿದ.
‘ಅದನ್ನೇ ನಾನೂ ಹೇಳಿದ್ದು,
ನನಗೊಂದು ಕಪ್ಪು ತಾ..’
ಎಂದಿವಳು ಲ್ಯಾಪುಟಾಪಿನ
ಮೈ ಸವರಿ ನಕ್ಕಳು..
ಇಷ್ಟ ಆಯಿತು ಕವಿತೆ ವಸುಂಧರಾ
Thank you ಸ್ಮಿತಾ